ಯಡಿಯೂರಪ್ಪ ಪತ್ರಕ್ಕೆ ಇನ್ನೂ ಸಿಕ್ಕಿಲ್ಲ ಆಯೋಗದ ಉತ್ತರ

ಸುಮಾರು ನಾಲ್ಕೈದು ದಿನಗಳ ಹಿಂದೆಯೇ ಯಡಿಯೂರಪ್ಪ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದು ತಮ್ಮ ಪಕ್ಷದ ಹೆಸರು, ಗುರುತು, ಅಧ್ಯಕ್ಷರ ಹೆಸರು ಮುಂತಾದ ಮಾಹಿತಿಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ಕೇಂದ್ರ ಚುನಾವಣಾ ಆಯೋಗದಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಇನ್ನೂ ಬಂದಿಲ್ಲ. ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಯಡಿಯೂರಪ್ಪ ಅವರು ತಮ್ಮ ಪಕ್ಷಕ್ಕೆ ಕರ್ನಾಟಕ ಜನತಾ ಪಕ್ಷ ಹಾಗೂ ಪಕ್ಷದ ಗುರುತಾಗಿ ಸೈಕಲ್ ನೀಡುವಂತೆ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಒಂದು ಮೂಲದ ಪ್ರಕಾರ ಕಳೆದ ಮಾರ್ಚ್ ತಿಂಗಳಿನಿಂದಲೇ ಹೊಸ ಪಕ್ಷ ಅಧಿಕೃತಗೊಳಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಆದರೆ, ಆಯೋಗವು ಈ ಕ್ಷಣದವರೆಗೂ ಯಡಿಯೂರಪ್ಪ ನವರ ಪಕ್ಷಕ್ಕೆ ಯಾವುದೇ ಸ್ಥಾನಮಾನ ನೀಡಿಲ್ಲ.
ಆದರೆ, ಯಾವುದೇ ಸಂದರ್ಭದಲ್ಲಿ ಆಯೋಗವು ಪಕ್ಷಕ್ಕೆ ಮಾನ್ಯತೆ ನೀಡಬಹುದಾದ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಡಿ.10 ರಂದು ಹಾವೇರಿಯಲ್ಲಿ ಭಾರಿ ಸಮಾವೇಶ ನಡೆಯುವ ಮುನ್ನ ಅಷ್ಟರೊಳಗೆ ಪಕ್ಷದ ನೋಂದಣಿ ಕಾರ್ಯ ಪೂರೈಸಲಿ ಎಂದು ಯಡಿಯೂರಪ್ಪ ಆಶಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಹಾವೇರಿಯಲ್ಲೇ ನೂತನ ಪ್ರಾದೇಶಿಕ ಪಕ್ಷದ ಘೋಷಣೆಯಾಗಲಿದೆ.2011ರ ಏಪ್ರಿಲ್ 28ರಂದು ಪದ್ಮನಾಭ್ ಪ್ರಸನ್ನಕುಮಾರ್ ಎಂಬುವವರು ಕರ್ನಾಟಕ ಜನತಾ ಪಕ್ಷ (KJP) ಎಂಬ ಹೊಸ ಪಕ್ಷವನ್ನು ನೋಂದಾಯಿಸಿಕೊಂಡಿದ್ದರು. ತಮ್ಮ ಪಕ್ಷಕ್ಕೆ ಚಿಹ್ನೆಯಾಗಿ ಸೈಕಲ್ ಗುರುತನ್ನೂ ಪಡೆದಿದ್ದರು. ಇದನ್ನೇ ಯಡಿಯೂರಪ್ಪ ಅವರು ಈಗ ಅಧಿಕೃತವಾಗಿ ತಮ್ಮ ಪಕ್ಷವನ್ನಾಗಿ ಘೋಷಿಸಲು ನಿರ್ಧರಿಸಿದ್ದಾರೆ.
ಬೊಮ್ಮಾಯಿ ಹೇಳಿಕೆ: ಯಾರಿಗೂ ಯಾರೂ ಕೈಕೊಡಲ್ಲ ಕೊನೆ ತನಕ ಬಿಎಸ್ ವೈ ಜೊತೆಯಲ್ಲೇ ಇರುತ್ತೇನೆ. ಡಿ.10 ರಂದು ನಡೆಸಲು ಉದ್ದೇಶಿಸಿರುವ ಸಮಾವೇಶದಲ್ಲಿ ಪಾಲ್ಗೊಳ್ಳುವ ಬಗ್ಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಸಚಿವ ಸಿಎಂ ಉದಾಸಿ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.












Click it and Unblock the Notifications