ನಾನು ಹೃದ್ರೋಗಿ,ಎಷ್ಟು ದಿನ ಬದುಕುತ್ತೇನೋ: ಎಚ್ಡಿಕೆ
ನಂದಗುಡಿಯಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ನಾನು ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ. ರಾಜ್ಯವನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ದು ರೈತರ ಹಿತ ಕಾಪಾಡಬೇಕೆನ್ನುವುದು ನನ್ನ ಉದ್ದೇಶ. ನಾನು ಮುಖ್ಯಮಂತ್ರಿಯಾಗಿದ್ದಾಗ ಬಹಳಷ್ಟು ಅಭಿವೃದ್ದಿ ಕೆಲಸ ಮಾಡಿದ್ದೇನೆ ಎಂದರು.
ಆಪರೇಶನ್ ಕಮಲದ ಮೂಲಕ ಪಕ್ಷ ತೊರೆದ ಸಮಯಸಾಧಕ ಶಾಸಕರಿಗೆ ಮತ್ತೆ ಪಕ್ಷದ ಟಿಕೆಟ್ ನೀಡುವುದಿಲ್ಲ. ಕ್ಷೇತ್ರದಲ್ಲಿ ಅವರು ಎಷ್ಟು ಬಲಿಷ್ಠರಾಗಿದ್ದರೂ ಸರಿ ಅಂಥಹ ನಾಯಕರು ಜೆಡಿಎಸ್ ಪಕ್ಷಕ್ಕೆ ಬೇಕಿಲ್ಲ ಎಂದು ಕುಮಾರಸ್ವಾಮಿ ಪಕ್ಷಾಂತರಿಗಳಿಗೆ ಎಚ್ಚರಿಸಿದರು.
ಸಾರಿಗೆ ಸಂಸ್ಥೆಯ ನೌಕರರ ಪ್ರತಿಭಟನೆ ವಿಚಾರದಲ್ಲಾಗಲಿ ಅಥವಾ ಕಾವೇರಿ ವಿಚಾರದಲ್ಲಾಗಿ ಸಿಎಂ ಜಗದೀಶ್ ಶೆಟ್ಟರ್ ಸ್ವತಂತ್ರ ಅಧಿಕಾರ ಚಲಾವಣೆ ಮಾಡಿಲ್ಲ. ಅವರೇ ಹೇಳಿದಂತೆ ಅವರ ಮಾತನ್ನು ಯಾರೂ ಕೇಳುತ್ತಿಲ್ಲ. ಅವರೊಬ್ಬರು ಅಸಹಾಯಕ ಸಿಎಂ ಎಂದವರು ಲೇವಡಿ ಮಾಡಿದರು.
ಬೆಳಗಾವಿ ಸುವರ್ಣಸೌಧ ನಿರ್ಮಾಣದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. ಅವ್ಯವಹಾರದ ಬಗ್ಗೆ ಮಾಹಿತಿ ಕಲೆ ಹಾಕಿ ಜನತೆಯ ಮುಂದೆ ಬಿಜೆಪಿಯ ಬಣ್ಣ ಬಯಲು ಮಾಡುತ್ತೇನೆ ಎಂದು ಎಚ್ಡಿಕೆ ಅವರು ಬಿಜೆಪಿಗೆ ಎಚ್ಚರಿಕೆ ಗಂಟೆ ಬಾರಿಸಿದರು.
ಎರಡು ರಾಷ್ಟ್ರೀಯ ಪಕ್ಷಗಳು ತಮ್ಮತಮ್ಮ ಪಕ್ಷ ಸಂಕಷ್ಟಕ್ಕೆ ಸಿಲುಕಿದಾಗ ಜೆಡಿಎಸ್ ಹೆಸರನ್ನು ದುರ್ಬಳಕೆ ಮಾಡಿಕೊಂಡಿವೆ. ಈ ಎರಡೂ ಪಕ್ಷಗಳಿಗೆ ಮುಂದಿನ ದಿನ ಜನತೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಲು ಮರೆಯಲಿಲ್ಲ.