ನಿದ್ದೆಗೆಟ್ಟ ಯಡಿಯೂರಪ್ಪ- ಶೆಟ್ಟರ್, ಅನಂತ್ ಮೇಲೆ ಗರಂ

ಆನಂದರಾವ್ ವೃತ್ತದ ಮಹಾತ್ಮ ಗಾಂಧಿ ಪ್ರತಿಮೆ ಎದುರು ನಿನ್ನೆ ಬೆಳಿಗ್ಗೆ 11 ಗಂಟೆಗೆ ಧರಣಿ ಆರಂಭಿಸಿದ ಅವರು ತಮ್ಮ ಪ್ರತಿಭಟನೆಯನ್ನು ಇಂದೂ ಮುಂದುವರಿಸಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು ಸಿಎಂ ಜಗದೀಶ್ ಶೆಟ್ಟರ್ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾವೇರಿ ವಿಷಯದಲ್ಲಿ ಸಿಎಂ ಶೆಟ್ಟರ್ ನಿಷ್ಕ್ರಿಯರಾಗೇನೂ ಇಲ್ಲ. ಆದರೆ ಕೆಲವು ಮಹತ್ವದ ವಿಚಾರಗಳಲ್ಲಿ ಅಸಡ್ಡೆ ತೋರಿದ್ದಾರೆ. ರಾಜ್ಯ ಸಂಸದರ ಸಭೆ ನಡೆಸಿ, ಒತ್ತಡ ಹೇರುವಂತೆ ಸೂಚಿಸಿದ್ದೆ. ಆದರೆ ಅವರು ಯಾವೊಬ್ಬ ಸಂಸದನನ್ನೂ ಭೇಟಿ ಮಾಡಲಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
'ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಸಂಸದರು ರಾಜೀನಾಮೆ ನೀಡಿ ಹೋರಾಟಕ್ಕೆ ಕೈಜೋಡಿಸಬೇಕು. 'ಬೆಂಗಳೂರನ್ನು ಪ್ರತಿನಿಧಿಸುವ ಸಂಸದ ಅನಂತ್ಕುಮಾರ್ ರಾಜೀನಾಮೆ ನೀಡಿ ಹೋರಾಟದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅವರು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ರಾಜೀನಾಮೆ ನೀಡಿಲ್ಲ. ಹೀಗಾಗಿ ಅವರಿಗೆ ರಾಜ್ಯದ ರೈತರ ಬಗ್ಗೆ ಕಾಳಜಿ ಇಲ್ಲ' ಎಂದು ತಮ್ಮ ಅಸಮಾಧಾನ ಹೊರಹಾಕಿದರು.
ರಾಜ್ಯದ ಕಾನೂನು ಸಚಿವರು ಎಲ್ಲಿದ್ದಾರೋ ತಿಳಿಯದಾಗಿದೆ. ಇನ್ನು ಇಬ್ಬರು ಡಿಸಿಎಂಗಳನ್ನೇ ಬೃಹಸ್ಪತಿಗಳು ಎಂದು ಭಾವಿಸಿದ್ದಾರೆ. ಇಂತಹ ಕಾನೂನಾತ್ಮಕ ಹೋರಾಟಗಳ ವೇಳೆ ಡಿಬಿ ಚಂದ್ರೇಗೌಡ ಅವರಂತಹ ಹಿರಿಯರ ಮಾರ್ಗದರ್ಶನ ಪಡೆಯಬೇಕಿತ್ತು ಎಂದು ಶೆಟ್ಟರ್ ಗೆ ಬುದ್ಧಿವಾದ ಹೇಳಿದ್ದಾರೆ.
ಸಂಸದರಾದ ಪಿ.ಸಿ. ಮೋಹನ್, ಜನಾರ್ದನ ಸ್ವಾಮಿ, ಮಾಜಿ ಸಂಸದ ವಿ. ಧನಂಜಯ ಕುಮಾರ್, ಶಾಸಕರಾದ ಹೇಮಚಂದ್ರ ಸಾಗರ್, ಸತೀಶ್ ರೆಡ್ಡಿ, ನಂದೀಶ್ ರೆಡ್ಡಿ, ಬಿ.ಪಿ. ಹರೀಶ್ ಮತ್ತಿತರರು ನಿನ್ನೆ ರಾತ್ರಿ ಯಡಿಯೂರಪ್ಪಗೆ ಸಾಥ್ ನೀಡಿದರು.












Click it and Unblock the Notifications