ಸೈಬರ್ ಕ್ರೈಂಗೆ ಕಡಿವಾಣ ಹಾಕಲು ಕ್ಯಾಂಪಸ್ ಸೆಲೆಕ್ಷನ್

ಸಮಸ್ಯೆ ಇಷ್ಟೊಂದು ಅಘಾದವಾಗಿರುವಾಗ ಇದಕ್ಕೆ ಪರಿಹಾರವೇನಪ್ಪಾ ಅಂದರೆ... ಸೈಬರ್ ಅಪರಾಧಿಗಳಿಗೆ ಕಡಿವಾಣ ಹಾಕುವುದು. ಅದ್ಸರಿ, ಆದರೆ ಹೇಗೆ?
ಈ ನಿಟ್ಟಿನಲ್ಲಿ ಮುಂಬೈನ ಕಾರ್ಪೊರೇಟ್ ಕಂಪನಿಯೊಂದು ಶಕ್ತಿಮೀರಿ ಪ್ರಯತ್ನಗಳನ್ನು ಹಾಕಲು ಸಿದ್ಧತೆ ನಡೆಸಿದೆ. ಅದಕ್ಕಾಗಿ ಮೊನ್ನೆ ಹೈದರಾಬಾದಿಗೆ ಬಂದಿದ್ದ ಈ ಕಂಪನಿ ಅಲ್ಲಿನ ಬಿಸಿನೆಸ್ ಸ್ಕೂಲಿನಲ್ಲಿ ವ್ಯಾಸಂಗ ಮಾಡುತ್ತಿರುವ 5 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಇಂಟರ್ ವ್ಯೂ ಮೂಲಕ ಸೈಬರ್ ಕ್ರೈಂಗೆ ಕಡಿವಾಣ ಹಾಕಲೆಂದೇ ನೇಮಕ ಮಾಡಿಕೊಂಡಿದೆ. ಅದೂ ಎಷ್ಟಕ್ಕೆ ಅಂದುಕೊಂಡಿರಿ ತಲಾ ವಾರ್ಷಿಕ 10 ಲಕ್ಷ ರೂಪಾಯಿ ಪಗಾರದೊಂದಿಗೆ!
ಕಂಪನಿ ಇಷ್ಟೊಂದು ಸಂಬಳ ನೀಡಲು ಸಿದ್ಧವಾಗಿದೆ ಅಂದರೆ ಸೈಬರ್ ಕ್ರೈಂ ಎಷ್ಟು ಆಳವಾಗಿ ವ್ಯಾಪಿಸಿದೆ ಎಂಬುದು ಅರ್ಥವಾದೀತು. ಹೈದರಾಬಾದಿನ ಪ್ರತಿಷ್ಠಿತ ಬಂಜಾರಾ ಹಿಲ್ಸ್ ನಲ್ಲಿರುವ Gurunanak Institute of Technology ಕಾಲೇಜಿನ ಐದು ವಿದ್ಯಾರ್ಥಿಗಳನ್ನು ಮುಂಬೈನ DATA 64 ನೇಮಕ ಮಾಡಿಕೊಂಡಿದೆ. ಈ ವಿದ್ಯಾರ್ಥಿಗಳು ಇನ್ನೂ ಅಂತಿಮ ವರ್ಷದ ವ್ಯಾಸಂಗದಲ್ಲಿದ್ದಾರೆ.
ಸೈಬರ್ ಕ್ರೈಂ, ಹ್ಯಾಕಿಂಗ್ ಮತ್ತು ಪೋರೆನ್ಸಿಕ್ ಕ್ಷೇತ್ರದಲ್ಲಿ ಈ ಐದೂ ವಿದ್ಯಾರ್ಥಿಗಳ ಬುದ್ಧಿಮತ್ತೆಯನ್ನು ಬಳಸಿಕೊಂಡು ಸೈಬರ್ ಅಪರಾಧ ಜಗತ್ತಿಗೆ ಕಡಿವಾಣ ಹಾಕುವುದು ಈ ಕಂಪನಿಯ ಇರಾದೆಯಾಗಿದೆ.
ನಿಮ್ಮ ಎಚ್ಚರದಲ್ಲಿ ನೀವಿರಿ:
ಮಾರ್ಚ್ ತಿಂಗಳವರೆಗೂ ಹೈದರಾಬಾದಿನಲ್ಲಿ ಪ್ರಾಥಮಿಕ ತರಬೇತಿ ಪಡೆದುಕೊಳ್ಳುತ್ತೇವೆ. ಆನಂತರ ಕಂಪನಿಯ ಮುಂಬೈ ಕಚೇರಿಯಲ್ಲಿ 8 ತಿಂಗಳ ಅನುಭವ ಪಡೆಯುತ್ತೇವೆ ಎಂದು ಆಯ್ಕೆಗೊಂಡ ವಿದ್ಯಾರ್ಥಿ ಇಂದ್ರದೀಪ್ ಸಿಂಗ್ ಛಡ್ಡಾ ಹೇಳುತ್ತಾನೆ. DATA 64 ಕಂಪನಿಗೆ ಆಯ್ಕೆಗೊಂಡಿರುವ ಇತರೆ ಪ್ರತಿಭಾನ್ವಿತರೆಂದರೆ ಸ್ವಾತಿ ನಂಬಿಯಾರ್, ಸಾಯಿ ರಾಂ ಜೆಟ್ಟಿ, ಅರ್ಚನಾ ಮತ್ತು ವೀಣಾ.
ಇವರಿಗೆಲ್ಲ ಅಪಾರ ಯಶಸ್ಸು ಲಭಿಸಿ, ಸೈಬರ್ ಅಪರಾಧದಿಂದ ಜಗತ್ತನ್ನು ಪಾರು ಮಾಡಲೆಂದು 'ಆಲ್ ದಿ ಬೆಸ್ಟ್' ಹೇಳೋಣ! ಆದರೆ ಮರೆಯದಿರಿ, ಇವರು ಎಷ್ಟೇ ಸಾಧನೆ ಮಾಡಿದರೂ ಸೈಬರ್ ಕಳ್ಳರು ರಂಗೋಲಿ ಕೆಳಗೆ ನುಸುಳಬಲ್ಲರು! ಅದ್ದರಿಂದ ನಿಮ್ಮ ಎಚ್ಚರದಲ್ಲಿ ನೀವಿರಿ.












Click it and Unblock the Notifications