ಕುಡುಕರಿಂದ ಕೋಲಾರದ ಯುವತಿಯ ಸಾಮೂಹಿಕ ಅತ್ಯಾಚಾರ

ಅತ್ಯಾಚಾರ ಎಸಗುತ್ತಿದ್ದಾಗ ಯುವತಿ ಸಹಾಯಕ್ಕೆ ಕೂಗಿಕೊಂಡಿದ್ದರಿಂದ ಅಪರಿಚಿತ ಕುಡುಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆ ಗುರುವಾರ ರಾತ್ರಿ ನಡೆದಿದ್ದು, ಬಂಗಾರುಪೇಟೆಯ ಯುವಕ ಮತ್ತು ಆತನ ಸ್ನೇಹಿತೆಯನ್ನು ಕುಪ್ಪಂನ ಪಿಇಎಸ್ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರುಪೇಟೆಯಲ್ಲಿ ಆಟೋ ಚಾಲಕನಾಗಿರುವ ಮುನಿರಾಜು ಮತ್ತು 22 ವರ್ಷದ ಯುವತಿ ಕೆಲಕಾಲದಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಬಂಗಾರುಪೇಟೆಯಿಂದ 65 ಕಿ.ಮೀ. ದೂರದಲ್ಲಿರುವ ಬೈರಾರೆಡ್ಡಿಪಲ್ಲಿಯಲ್ಲಿರುವ ಕೈಗಲ್ ಜಲಪಾತ ನೋಡಲೆಂದು ಇಬ್ಬರೂ ತೆರಳಿದ್ದರು. ಗುರುವಾರ ರಾತ್ರಿ ಇಬ್ಬರೂ ವಾಪಸ್ ಬರುತ್ತಿದ್ದಾಗ ಕುಡುಕರ ತಂಡ ಅವರ ಮೇಲೆ ಆಕ್ರಮಣ ಮಾಡಿದೆ.
ಮೊದಲಿಗೆ ಮುನಿರಾಜುವಿನ ತಲೆಯ ಮೇಲೆ ಬಿಯರ್ ಬಾಟಲಿಯಿಂದ ಹೊಡೆದಿದ್ದಾರೆ. ನಂತರ ಚಾಕುವಿನಿಂದ ಆತನನ್ನು ಇರಿದಿದ್ದಾರೆ. ಆಗ ಯುವತಿಗೆ ಕಿರುಚಿಕೊಳ್ಳಲು ಕೂಡ ಅವಕಾಶ ನೀಡದೆ, ಆಕೆಯ ಬಾಯಿಮುಚ್ಚಿ ಕುಡುಕರು ಎಳೆದೊಯ್ದು ಬಲಾತ್ಕಾರ ಮಾಡಿದ್ದಾರೆ. ಅಷ್ಟರಲ್ಲಿ ದಾರಿಹೋಕರ ದನಿ ಕೇಳಿದಾಗ ಆಕೆ ಕಿರುಚಿಕೊಂಡಿದ್ದಾಳೆ. ದಾರಿಹೋಕರು ಸಹಾಯಕ್ಕೆ ಬರುತ್ತಿದ್ದಂತೆ ಕುಡುಕರ ತಂಡ ಪರಾರಿಯಾಗಿದೆ.
ಆಸ್ಪತ್ರೆಯಲ್ಲಿರುವ ಯುವತಿ ಚೇತರಿಸಿಕೊಳ್ಳುತ್ತಿದ್ದಾಳೆ. ಆದರೆ, ಆಕೆಯ ಪ್ರಿಯತಮನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಕುಡುಕರನ್ನು ಹುಡುಕುತ್ತಿದ್ದಾರೆ.












Click it and Unblock the Notifications