2 ದಿನ ಎಲ್ ಪಿಜಿ, ಪೆಟ್ರೋಲ್ ಸಿಗದೆ ಪರದಾಟ

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಎಲ್ ಪಿಜಿ ಸಬ್ಸಿಡಿ ನೀತಿ ವಿರೋಧಿಸಿ ಅಡುಗೆ ಅನಿಲ ವಿತರಕರು ಅಕ್ಟೋಬರ್ 1 ರಂದು ಮುಷ್ಕರ ಹೂಡುವುದು ನಿಚ್ಚಳವಾಗಿದೆ. ಸುಮಾರು 1,200 ಡೀಲರ್ ಗಳು ಹಾಗೂ ವಿವಿಧ ಗ್ಯಾಸ್ ಏಜೆನ್ಸಿ ಸದಸ್ಯರು ರಾಷ್ಟ್ರಮಟ್ಟದಲ್ಲಿ ಮಂಗಳವಾರ(ಸೆ.25) ಸಭೆ ಸೇರಿ ಮುಷ್ಕರ ಹೂಡುವ ಬಗ್ಗೆ ನಿರ್ಧರಿಸಿದ್ದಾರೆ.
ಆದರೆ, ಅಡುಗೆ ಅನಿಲ ವಿತರಕರೊಡನೆ ಕೇಂದ್ರ ಸರ್ಕಾರ ಸೋಮವಾರ(ಅ.1) ಸಭೆ ನಡೆಸಲಿದ್ದು, ಸಂಧಾನ ಸಫಲವಾದರೆ ಮುಷ್ಕರ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ. ಇಲ್ಲದಿದ್ದರೆ ಅನಿರ್ಧಿಷ್ಟ ಕಾಲದ ಮುಷ್ಕರ ಮುಂದುವರೆಯಲಿದೆ.
ಪೆಟ್ರೋಲ್ ಬಂಕ್ ಬಂದ್: ಪೆಟ್ರೋಲ್ ವಿತಕರರು ಮುಷ್ಕರ ಹೂಡಿರುವುದರಿಂದ ಸೆ.30ರ ಮಧ್ಯರಾತ್ರಿ ತನಕ ಬಂಕ್ ಗಳಲ್ಲಿ ಎಷ್ಟು ಇಂಧನ ಶೇಖರಣೆಯಾಗಿರುತ್ತದೆಯೋ ಅಷ್ಟು ಮಾತ್ರ ಗ್ರಾಹಕರಿಗೆ ಪೂರೈಸಲಿದ್ದಾರೆ. ಮುಂದಿನ ಎರಡು ದಿನ ಕಾಲ ಪೆಟ್ರೋಲ್, ಡೀಸೆಲ್ ಸಿಗುವುದು ಕಷ್ಟ.
ದೇಶದ ಎಲ್ಲ ಪೆಟ್ರೋಲ್ ಬಂಕ್ ಮಾಲೀಕರು ಐಓಸಿ, ಬಿಪಿಸಿ, ಎಚ್ಪಿ ಮತ್ತು ಓಎನ್ಜಿಸಿ ಕಂಪೆನಿಗಳಿಂದ ಎರಡು ದಿನ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮಾಡದಿರಲು ತೀರ್ಮಾನಿಸಿದ್ದಾರೆ.
ಕಮೀಷನ್ ತೊಂದರೆ: ಪೆಟ್ರೋಲ್ ಬಂಕ್ ಸುಧಾರಣೆ ಕುರಿತಂತೆ ಅಪೂರ್ವಚಂದ್ರ ಸಮಿತಿ ಕೇಂದ್ರ ಸರ್ಕಾರಕ್ಕೆ ನೀಡಿದ್ದ ವರದಿಯನ್ನು ಅನುಷ್ಠಾನ ಮಾಡಬೇಕೆಂದು ಪೆಟ್ರೋಲ್ ಬಂಕ್ ಮಾಲೀಕರ ಒತ್ತಾಯವಾಗಿದೆ.
ತೈಲ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರದ ಮೇಲೆ ಶೇ.5ರಷ್ಟು ಕಮಿಷನ್ ನೀಡಬೇಕೆಂಬುದು ಬಹುದಿನಗಳ ಬೇಡಿಕೆಯಾಗಿದೆ. ಅಪೂರ್ವಚಂದ್ರ ಸಮಿತಿಯು ಕೂಡ ವರದಿಯಲ್ಲಿ ಇದನ್ನೇ ಶಿಫಾರಸು ಮಾಡಿತ್ತು.
ಬಂಕ್ ಮಾಲೀಕರು ನೌಕರರಿಗೆ ನೀಡುತ್ತಿರುವ ವೇತನ, ಸೌಲಭ್ಯಗಳು ಹೆಚ್ಚಾಗುತ್ತಲೇ ಇವೆ. ಡೀಸೆಲ್ ಮತ್ತು ಪೆಟ್ರೋಲ್ ದರ ಏರಿಕೆಯಾದರೂ, ಕಮಿಷನ್ ದರ ಮಾತ್ರ ಏರಿಕೆಯಾಗುತ್ತಿಲ್ಲ ಎಂದು ಬಂಕ್ ಮಾಲೀಕರ ಆರೋಪಿಸಿದ್ದಾರೆ.
ಪ್ರಸ್ತುತ ಪೆಟ್ರೋಲ್ಗೆ ತೈಲ ಕಂಪೆನಿಗಳು 1.55ರೂ. ಹಾಗೂ ಡೀಸೆಲ್ಗೆ 85 ಪೈಸೆ ಕಮಿಷನ್ ನೀಡುತ್ತಿವೆ. ಪೆಟ್ರೋಲ್ ಲೀಟರ್ಗೆ 50ರೂ. ಹಾಗೂ ಡೀಸೆಲ್ 30ರೂ. ಇದ್ದಾಗ ನೀಡುತ್ತಿದ್ದ ಕಮಿಷನ್ ದರವನ್ನು ಈಗಲೂ ಅದೇ ದರದಂತೆ ನೀಡಲಾಗುತ್ತಿದೆ.
ಬಂಕ್ ನೌಕರರಿಗೆ ಸಾಲ ಸೌಲಭ್ಯ, ವೇತನ ಹೆಚ್ಚಳ ಮಾಡಬೇಕಾಗುತ್ತದೆ. ಆದರೆ, ಕಮಿಷನ್ ದರ ಮಾತ್ರ ಏರಿಕೆಯಾಗಿಲ್ಲ ಎಂದು ಬಂಕ್ ಮಾಲೀಕರು ತಮ್ಮ ವ್ಯಥೆ ಹೇಳಿಕೊಂಡಿದ್ದಾರೆ.
ಆದರೆ, 42,000ಕ್ಕೂ ಅಧಿಕ ಬಂಕ್ ಮಾಲೀಕರು ಭಾನುವಾರ ಬೆಳಗ್ಗೆ ಮುಷ್ಕರ ಹೂಡುವ ಸಾಧ್ಯತೆ ಕಮ್ಮಿ ಎಂದಿದ್ದರು. ಬೆಂಗಳೂರಿನಲ್ಲಿ ಸದ್ಯಕ್ಕೆ ಇಂಧನ ಪೂರೈಕೆ ವ್ಯತ್ಯಯವಾಗಿದೆ. ನಾಳೆ ಕೂಡಾ ಸಮಸ್ಯೆ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ.
ಗ್ಯಾಸ್ ಟ್ರಬಲ್ : ಇಂಧನ ಸಂಸ್ಥೆಗಳಿಂದ ಎಲ್ ಪಿಜಿ ವಿತರಕರಿಗೆ ಪ್ರತಿ ಸಿಲಿಂಡರ್ ಗೆ ರು 25.83 ಕಮಿಷನ್ ದರ ಸಿಗುತ್ತಿದ್ದು ಇದು 2010 ರಿಂದ ಪರಿಷ್ಕರಣೆಗೊಂಡಿಲ್ಲ. ದೇಶದಾದ್ಯಂತ 200,000 ಸಿಲಿಂಡರ್ ವಿತರಣೆ ಹುಡುಗರನ್ನು ಹೊಂದಿದ್ದೇವೆ ಅವರಿಗೆ ಪ್ರತಿ ಸಿಲಿಂಡರ್ ಗೆ 8 ರು.ನಂತೆ ಮಾತ್ರ ಸಿಗುತ್ತಿದೆ ಇದು ಬದಲಾಗಬೇಕಿದೆ ಎಂದು ಸೋನಿ ಹೇಳಿದ್ದಾರೆ.
ಸಬ್ಸಿಡಿ ಎಲ್ಪಿಜಿ ಸಿಲಿಂಡರನ್ನು ವರ್ಷಕ್ಕೆ 6 ಮಾತ್ರ ಎಂದು ನಿಗದಿಪಡಿಸಿ ಕೇಂದ್ರ ಸರಕಾರ ಸೆಪ್ಟೆಂಬರ್ 13ರಂದು ಆದೇಶ ಹೊರಡಿಸಿತ್ತು. ಏಳನೇ ಅಡುಗೆ ಅನಿಲ ಬೇಕಿದ್ದರೆ, ಈಗಿನ 415 ರು.ಗೆ ಬದಲಾಗಿ 720 ರು.ಗೂ ಹೆಚ್ಚು ಬೆಲೆ ತೆತ್ತು ಖರೀದಿ ಮಾಡಬೇಕಿದೆ.












Click it and Unblock the Notifications