ಕಾವೇರಿ ವಿವಾದ : ಶಾಲಾ ಕಾಲೇಜುಗಳಿಗೆ ರಜೆ

ಮಂಡ್ಯ, ಮದ್ದೂರಿನಲ್ಲಿ ಅಘೋಷಿತ ಬಂದ್ ಆಚರಿಸಲಾಗುತ್ತಿದ್ದು, ಕಾವೇರಿ ಹಿತರಕ್ಷಣಾ ವೇದಿಕೆ ನಡೆಸುತ್ತಿರುವ ಹೋರಾಟಕ್ಕೆ ಹಲವಾರು ರೈತ ಪರ, ಕನ್ನಡ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ.
ಕೆಆರ್ ಎಸ್ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಿಲ್ಲ ಎಂದು ಮಂಡ್ಯ ಜಿಲ್ಲಾ ಎಸ್ಪಿ ಕೌಶಲೇಂದ್ರ ಕುಮಾರ್ ಅವರು ಹೇಳಿದ್ದಾರೆ.
ಅದರೆ, ಶ್ರೀರಂಗಪಟ್ಟಣದಲ್ಲಿ ಕೆಎಸ್ ಆರ್ ಪಿ ತುಕಡಿಯ ಸಿಬ್ಬಂದಿಗಳು ಕರ್ತವ್ಯ ಮರೆತು ವ್ಯಾನ್ ನಲ್ಲಿ ಇಸ್ಪೀಟ್ ಆಟ ಆಡುತ್ತಿದ್ದರು ಎನ್ನಲಾಗಿದೆ. ಸ್ಥಳೀಯರು ವ್ಯಾನಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ನಡೆದಿದೆ.
ಮೈಸೂರಿಗೆ ದಾರಿ ಯಾವುದಯ್ಯ?: ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಆಗಿರುವುದರಿಂದ ಪ್ರಯಾಣಿಕರು ಪರದಾಟ ಮುಂದುವರೆದಿದೆ. ಆದಷ್ಟು ವಾಹನ ಸಂಚಾರಕ್ಕೆ ಅಡ್ಡಿಪಡಿಸದಂತೆ ಪ್ರತಿಭಟನೆ ನಡೆಸುವಂತೆ ಹೋರಾಟಗಾರರಲ್ಲಿ ಮನವಿ ಮಾಡಲಾಗಿದೆ.
ಮೈಸೂರಿಗೆ ಹೋಗುವವರಿಗೆ ಸದ್ಯಕ್ಕೆ ಬದಲಿ ಮಾರ್ಗ ಸೂಚಿಸಲಾಗಿದೆ. ಕೆಎಸ್ಸಾರ್ಟಿಸಿ ಬಸ್ ಗಳು ಮದ್ದೂರು-ಮಂಡ್ಯ ಮಾರ್ಗಕ್ಕೆ ಬದಲಾಗಿ ಕನಕಪುರ-ಮಳವಳ್ಳಿ ಮಾರ್ಗ ದಲ್ಲಿ ಚಲಿಸುತ್ತಿದೆ. ವೋಲ್ವೋ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಪರಿಸ್ಥಿತಿ ನೋಡಿಕೊಂಡು ಬಸ್ ಸಂಚಾರ ಹೆಚ್ಚಿಸಲಾಗುವುದು ಎಂದು ಕೆಎಸ್ಸಾಅರ್ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪಿ ಅಶೋಕ್ ಕುಮಾರ್ ಹೇಳಿದ್ದಾರೆ.
ಭಾನುವಾರ ನಡೆದಿರುವ ಪ್ರತಿಭಟನೆಯ ಮುಖ್ಯಾಂಶಗಳು ಇಂತಿದೆ:
* ಆನೇಕಲ್ ನಲ್ಲಿ ತಮಿಳುನಾಡು ಸಿಎಂ ಜಯಲಲಿತಾ ಅಣಕು ಶವಯಾತ್ರೆ ನಡೆಸಲಾಗಿದೆ.
* ಕಸ್ತೂರಿ ಜನಪರ ವೇದಿಕೆ ರಮೇಶ್ ಗೌಡ ಅವರ ನೇತೃತ್ವದಲ್ಲಿ ಮಂಡ್ಯದಲ್ಲಿ ರೈಲು ಹಳಿ ಮೇಲೆ ಮಲಗಿ ಹೋರಾಟ.
* ಮಂಡ್ಯದ ಗೆಜ್ಜಲಗೆರೆ ಬಳಿ ರೈತರು ಹೆದ್ದಾರಿ ತಡೆದು ಹೊರಾಟ ನಡೆಸಿದ್ದರಿಂದ 3 ಕಿ.ಮೀ ವರೆಗೂ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
* ಎಚ್ ಡಿ ಕೋಟೆ ಹ್ಯಾಂಡ್ ಪೋಸ್ಟ್ ಬಳಿ ಪೊಲೀಸರು ಮತ್ತು ರೈತರ ಮಾತಿನ ಚಕಮಕಿ.
* ಮಂಡ್ಯ, ಮೈಸೂರು, ಮದ್ದೂರು, ಚನ್ನಪಟ್ಟಣ, ಹಾಸನ, ಚಾಮರಾಜನಗರ ಹಾಗು ಕೊಳ್ಳೆಗಾಲದಲ್ಲಿ ಕರವೇ ಪ್ರತಿಭಟನೆ.
* ಗುಲ್ಬರ್ಗಾ, ಚಿಕ್ಕಮಗಳೂರು ಹಾಗು ರಾಯಚೂರಿನಲ್ಲೂ ಕರವೇ ಪ್ರತಿಭಟನೆ ಮುಂದುವರಿಕೆ.
* ಶಾಸಕ ಪುಟ್ಟರಾಜು ನೇತೃತ್ವದ ಹೋರಾಟ ನಿರತ 50ಕ್ಕೂ ಹೆಚ್ಚು ಮಂದಿ ಬಂಧನ.
* ಚಾಮರಾಜನಗರದಲ್ಲಿ ತಮಿಳುನಾಡು ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟನೆ.
* ಕೆಂಗೇರಿ ಉಪನಗರದಲ್ಲಿ ತಮಿಳುನಾಡು ನೋಂದಣಿ ಇರುವ ಲಾರಿಗೆ ಕಲ್ಲು ತೂರಾಟ.
* ಮಂಗಳೂರು, ಗದಗ, ಮಡಿಕೇರಿ ಹಾಗು ಯಾದಗಿರಿಯಲ್ಲಿ ಕರವೇ ಪ್ರತಿಭಟನೆ
ಸಿಎಂ ಶೆಟ್ಟರ್ ಹೇಳಿಕೆ : ಭಾಗಮಂಡಲದಲ್ಲಿ ಚೆನ್ನಾಗಿ ಮಳೆಯಾಗ್ತಾ ಇದೆ. ಒಳಹರಿವು ಹೆಚ್ಚಲಿದೆ. ಹಾಗಾಗಿ ತಮಿಳುನಾಡಿಗೆ ಕೆಆರ್ಎಸ್ಸಿಂದ 4450 ಕ್ಯುಸೆಕ್ ನೀರು ಬಿಟ್ಟಿದ್ದೇವೆ ಆ.8 ರಂದು ಕಾವೇರಿ ನಿರ್ವಹಣಾ ಸಮಿತಿ ಸಭೆ ಇದೆ.
2-3 ದಿನಗಳಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ. ತಜ್ಞರ ಸಮಿತಿ ಕಳಿಸಲು ಪ್ರಧಾನಿ ಮನವಿ ಮಾಡಲಾಗಿದೆ. ಅದರೆ, ಪ್ರಧಾನಿ ಮನವಿಗೆ ಪುನಸ್ಕರಿಸಲಿಲ್ಲ. ನೀರು ಬಿಡುವಂತೆ ಹೇಳಿ ಪ್ರಧಾನಿ ನಮ್ಮ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಜಗದೀಶ್ ಶೆಟ್ಟರ್ ಅವರು ಭಾನುವಾರ ತಮ್ಮ ಗೃಹ ಕಚೇರಿ ಭಾನುವಾರ ಕೃಷ್ಣಾದಲ್ಲಿ ಹೇಳಿದ್ದಾರೆ.












Click it and Unblock the Notifications