ತಮಿಳುನಾಡಿಗೆ ಕದ್ದುಮುಚ್ಚಿ ಕಾವೇರಿ ನೀರು ಬಿಡುಗಡೆ

ಕೆಆರ್ ಎಸ್ ನ ಸುಮಾರು 8 ಕ್ರೆಸ್ಟ್ ಗೇಟ್ ಗಳನ್ನು ತೆರೆದು ಸುಮಾರು 4,500 ಕ್ಯೂಸೆಕ್ಸ್ ನೀರು ಬಿಡಲಾಗಿದೆ. ಕಬಿನಿ ಜಲಾಶಯದ 10 ಕ್ರೆಸ್ಟ್ ಗೇಟ್ ತೆರೆದು 2,000 ಕ್ಯೂಸೆಕ್ಸ್ ಬಿಟ್ಟಿರುವ ಸುದ್ದಿ ಬಂದಿದೆ.
ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯಕ್ಕೆ 1,500 ಕ್ಯೂಸೆಕ್ಸ್ ಒಳ ಹರಿವು ಇದೆ. ಜಲಾಶಯದ ನೀರಿನ ಮಟ್ಟ 2,273.5 ಅಡಿಯಷ್ಟಿದೆ.
ಸರ್ಕಾರದ ಹೇಳಿಕೆ: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೂಡಲೇ ಪ್ರಧಾನಿ ಮದ್ಯಸ್ಥಿಕೆ ವಹಿಸಿ ಯಥಾಸ್ಥಿತಿ ಪಾಲಿಸುವಂತೆ ತಮ್ಮ ಸೂಚನೆಯನ್ನು ಪುನರ್ ಪರಿಶೀಲಿಸಬೇಕು ಎಂದು ಮನವಿ ಮಾಡಲಾಗುವುದು. ಇನ್ನೆರಡು ದಿನಗಳಲ್ಲಿ ಸುಪ್ರೀಂ ಕೋರ್ಟ್ನ ಮುಂದೆ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಲಾಗುವುದು. ಈ ಸಂಬಂಧ ಪ್ರಧಾನ ಮಂತ್ರಿ ಕಚೇರಿಗೆ ಫ್ಯಾಕ್ಸ್ ಸಂದೇಶ ರವಾನಿಸಲಾಗುವುದು ಎಂದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಶಾಸಕ ಸೇರಿ 200 ಜನ ಬಂಧನ : ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಕೃಷ್ಣರಾಜ ಸಾಗರ ಜಲಾಶಯಕ್ಕೆ ಶನಿವಾರ ಮಧ್ಯರಾತ್ರಿ ಮುತ್ತಿಗೆ ಹಾಕಲು ಹೊರಟ ಮೇಲುಕೋಟೆ ಶಾಸಕ ಪುಟ್ಟರಾಜು ಸಹಿತ 200ಕ್ಕೂ ಹೆಚ್ಚು ರೈತರನ್ನು ಶನಿವಾರ ಮಧ್ಯರಾತ್ರಿ ಬಂಧಿಸಲಾಗಿದೆ.
ರಾತ್ರಿ 8 ಕ್ರಸ್ಟ್ಗೇಟ್ಗಳಿಂದ ನೀರು ಬಿಟ್ಟಿದ್ದನ್ನು ತಡೆಯಲು ಶಾಸಕ ಪುಟ್ಟರಾಜು ಹಾಗೂ ವಿಧಾನ ಪರಿಷತ್ನ ಮಾಜಿ ಸದಸ್ಯ ಶ್ರೀಕಂಠಸ್ವಾಮಿ ಹಾಗೂ ಕರವೇ ಮುಖಂಡ ನಾರಾಯಣಗೌಡ ನೇತೃತ್ವದಲ್ಲಿ ರೈತರ ತಂಡ, ರಾತ್ರಿ ಕೆಆರ್ಎಸ್ನತ್ತ
ಹೊರಟಿತ್ತು.
ಜಲಾಶಯವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಗೇಟ್ ಬಂದ್ ಮಾಡಲು ಇವರು ಹೊರಟಾಗ ಪೊಲೀಸರು ತಡೆದರು. ಈ ವೇಳೆಯಲ್ಲಿ ಹೋರಾಟಗಾರರು ಮತ್ತು ಪೊಲೀಸರ ನಡುವೆ ತುಸು ಹೊತ್ತು ಮಾತಿನ ಚಕಮಕಿ ನಡೆದಿದೆ.
ಪೊಲೀಸರ ಮಾತಿಗೆ ಈ ತಂಡ ಬಗ್ಗದೇ ಇದ್ದಾಗ 200ಕ್ಕೂ ಹೆಚ್ಚು ಜನರನ್ನು ಬಂಧಿಸಿ ಕೆಆರ್ಎಸ್ ಆವರಣದಿಂದ ಹೊರಕ್ಕೆ ಕರೆದೊಯ್ಯಲಾಯಿತು. ಪರಿಣಾಮ ಜಲಾಶಯದ ಬಳಿ ಕೆಲಹೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅಹಿತಕರ ಘಟನೆ ನಡೆಯದಂತೆ ತಡೆಯಲು ಮುಂಜಾಗರೂಕತಾ ಕ್ರಮವಾಗಿ ಸಂಜೆಯೇ ಸುಮಾರು 200 ಮೀ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.












Click it and Unblock the Notifications