ರಾಜೇಶ್ ಗುಂಡೂರಾವ್ ನಿಧನ; ಶುಕ್ರವಾರ ಅಂತ್ಯಕ್ರಿಯೆ

ರಾಜೇಶ್ ಅವರು ಪತ್ನಿ ಸುಷ್ಮಾ, ಪುತ್ರಿ ಅನೂಷ್ಕಾ, ತಾಯಿ ವರಲಕ್ಷ್ಮಿ ಗುಂಡೂರಾವ್, ಸಹೋದರರಾದ ಮಹೇಶ್ ಮತ್ತು ದಿನೇಶ್ ಅವರನ್ನು ಅಗಲಿದ್ದಾರೆ.
ತೀವ್ರ ಮೆದುಳು ರಕ್ತಸ್ರಾವದಿಂದ (brain hemorrhage) ಬಳಲುತ್ತಿದ್ದ ರಾಜೇಶ್ ಗುಂಡೂರಾವ್ ಅವರನ್ನು 22 ದಿನಗಳ ಹಿಂದೆ ಆಗಸ್ಟ್ 27ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಬೆಂಗಳೂರು ಗಾಂಧಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಅವರ ತಮ್ಮ ರಾಜೇಶ್.
ಶುಕ್ರವಾರ ಅಂತ್ಯಕ್ರಿಯೆ:
ಆರ್.ಟಿ.ನಗರದ ನಿವಾಸದಲ್ಲಿ ರಾಜೇಶ್ ಪಾರ್ಥಿವ ಶರೀರ ಇಡಲಾಗಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಸಚಿವ ವಿ. ಸೋಮಣ್ಣ, ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಸೇರಿದಂತೆ ಹಲವಾರು ಗಣ್ಯರು ಅಂತಿಮ ದರ್ಶನ ಪಡೆದರು.
ಶುಕ್ರವಾರ ಮಧ್ಯಾಹ್ನ ದೇವನಹಳ್ಳಿ ಸಮೀಪದ ಫಾರ್ಮ್ ಹೌಸ್ನಲ್ಲಿ ರಾಜೇಶ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ರಾಜೇಶ್ ಗುಂಡೂರಾವ್, ರಾಜಕೀಯವಾಗಿ ಜೆಡಿಎಸ್ ಜತೆ ಗುರುತಿಸಿಕೊಂಡಿದ್ದರು. ಯುವ ಘಟಕದ ಪದಾಧಿಕಾರಿಯಾಗಿ ಕೆಲಸ ಮಾಡಿದ್ದರು. ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಆಗಿದ್ದರು. ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿ ಮಧು ಬಂಗಾರಪ್ಪ ನೇಮಕಗೊಂಡಾಗ ಬೇಸರಗೊಂಡಿದ್ದರು. ಮಾಜಿ ಸಚಿವ ರಘುಪತಿ ನೇತೃತ್ವದಲ್ಲಿ ಬೆಂಗಳೂರಿಗೆ ಸೀಮಿತವಾದ 'ಪೌರಸಮಿತಿ ವೇದಿಕೆ' ರಚಿಸಿಕೊಂಡು ಸಕ್ರಿಯರಾಗಿದ್ದರು.
ಚಿತ್ರ ನಂಟು: ಬರೋಬ್ಬರಿ 20 ವರ್ಷಗಳ ಹಿಂದೆ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಹೂವು ಹಣ್ಣು ಚಿತ್ರದಲ್ಲಿ ಕನ್ನಡ ಲೆಕ್ಚರ್ ಪಾತ್ರ ಮಾಡಿದ್ದ ರಾಜೇಶ್ ಗುಂಡೂರಾವ್, ಮೊನ್ನೆಯಷ್ಟೇ ಚಿತ್ರರಂಗಕ್ಕೆ ಮರು ಎಂಟ್ರಿ ಹಾಕಿದ್ದರು. 1993 ರಲ್ಲಿ ಬಿಡುಗಡೆಯಾಗಿದ್ದ ರಾಜೇಂದ್ರ ಸಿಂಗ್ ಬಾಬುರ 'ಹೂವು ಹಣ್ಣು' ಚಿತ್ರದಲ್ಲಿ ಕೇವಲ ಕನ್ನಡದಲ್ಲಿಯೇ ಮಾತನಾಡಿ ಎಲ್ಲರ ಗಮನಸೆಳೆದಿದ್ದ ರಾಜೇಶ್, ಮೊನ್ನೆ ಆಗಸ್ಟ್ 8, 2012 ರಂದು ತಮ್ಮ ಹುಟ್ಟುಹಬ್ಬದ ದಿನದಂದು ಅವರು ತಮ್ಮ ನಿರ್ಮಾಣದ ಹೊಸ ಚಿತ್ರವನ್ನು ಘೋಷಿಸಿದ್ದರು. ಚಿತ್ರದ ಹೆಸರು 'ಬೆಂಗಳೂರು ಕಾಲಿಂಗ್'.












Click it and Unblock the Notifications