ಬಂದ್ ಸಂಪೂರ್ಣ: ಬಸ್ ಇಲ್ಲ, ನಟರಾಜ ಸರ್ವಿಸ್ಸೇ ಗತಿ

ಆದರೆ ಗಮನಿಸಿ ಸರಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಬಸ್ ಮುಷ್ಕರದ ನೆಪವೊಡ್ಡಿ ಮನೆಗಳಲ್ಲೇ ಉಳಿಯುವಂತಿಲ್ಲ. ಮುಖ್ಯಮಂತ್ರಿಗಳ ತವರೂರಾದ ಹುಬ್ಬಳ್ಳಿಯಲ್ಲಿ ಬಸ್ ಸಂಚಾರಕ್ಕೆ ತೊಂದರೆಯಾಗಿಲ್ಲ. ಹುಬ್ಬಳ್ಳಿ ಧಾರವಾಢದಲ್ಲಿ ಬಸ್ ಸಂಚಾರ ಎಂದಿನಂತೆ ಸರಾಗವಾಗಿ ನಡೆದಿದೆ.
'ಬಂದ್ ಬಿಸಿ ತಟ್ಟುವುದಿಲ್ಲ. ಬಸ್ ಸೇವೆ ಅಬಾಧಿತ' ಎಂದೆಲ್ಲ ಭರವಸೆ ನೀಡಿದ್ದ ಸಾರಿಗೆ ಸಚಿವ ಆರ್ ಅಶೋಕ್ ಅವರ ಮಾತಿಗೆ ಕವಡೆ ಕಿಮ್ಮತ್ತು ಸಿಕ್ಕಿಲ್ಲ. ಯಾವುದೇ ಡಿಪೋದಿಂದಲೂ ಬಸ್ಸುಗಳು ಹೊರಬಂದಿಲ್ಲ. ಸಿಬ್ಬಂದಿಗಳ ಹಾಜರಾತಿ ಇಲ್ಲವಾಗಿದೆ. ಅನೇಕ ಡ್ರೈವರ್ ಹಾಗೂ ಕಂಡೆಕ್ಟರ್ ಗಳು ಕೆಲಸಕ್ಕೆ ಗೈರು ಹಾಜರಾಗಿದ್ದಾರೆ.
ಬೆಳಗಿನ ಪಾಳಿಗೆ ಹಾಜರಾಗಲೇಬೇಕಾದ ನೌಕರರು BTS ಮುಖ ನೋಡದೆ ಕಂಗಾಲಾಗಿದ್ದಾರೆ. ಆದರೆ ತಡವಾದರೆ ಬಾಸ್ ಇಂದ ಬೈಸಿಕೊಳ್ಳಬೇಕಾಗುತ್ತದೆ ಎಂದು ಉದ್ದಕ್ಕೂ ನಡೆದೇ ಕಚೇರಿಗೆ ತಲುಪಿಕೊಳ್ಳುತ್ತಿದ್ದಾರೆ. ಇನ್ನು ಉಳ್ಳವರು ಅಂದರೆ ದ್ವಿಚಕ್ರ, ಕಾರೂ ಅದೂ ಇದೂ, ತಮ್ಮ ಮನೆಗಳ ಸುತ್ತಮುತ್ತಲಿನವರನ್ನು ತಮ್ಮ ವಾಹನಗಳಲ್ಲಿ ಕರೆದುಕೊಂಡು ಹೋಗಿ ಮಾರ್ಗ ಮಧ್ಯೆ ಬಿಡುತ್ತಿದ್ದಾರೆ.
ಈ ಮಧ್ಯೆ, ತಮಗೂ ಬಂದ್ ಬಿಸಿ ತಟ್ಟುವುದು ಖಚಿತ ಎಂದು ಮೊದಲೇ ಅಂದಾಜಿಸಿದ್ದ ಬೆಂಗಲೂರು ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಬೆಳಗ್ಗೆ 5 ಗಂಟೆಗೆ ತಮ್ಮವಾಹನದಲ್ಲಿ ಸಿಟಿ ರೌಂಡ್ಸ್ ಹೊಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಇಡೀ ನಗರ ಪೊಲೀಸರಿಂದ ತುಂಬಿದೆ. ಎಲ್ಲ ಸರ್ಕಲ್ ಗಳಲ್ಲೂ ಕೋವಿಗಳನ್ನು ಹಿಡಿದ ಪೊಲೀಸರನ್ನು ಕಾಣಬಹುದಾಗಿದೆ.
ಬಿಗಿ ಬಂದೋಬಸ್ತ್ ನಡುವೆಯೂ ಕಿಡಿಗೇಡಿಗಳು ನಾಲ್ಕಾರು ಬಸ್ ಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಆದರೆ ತಕ್ಷಣ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಆದ್ದರಿಂದ ಯಾವುದೇ ಅನಾಹುತ ಕಂಡುಬಂದಿಲ್ಲ.
ಇನ್ನು ಬೇರೆ ಜಿಲ್ಲೆಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಪರ ಊರುಗಳಿಗೆ ತಲುಪಬೇಕಾದ ಪ್ರಯಾಣಿಕರು ಬಸ್ಸುಗಳಿಲ್ಲದೆ ಪರದಾಡುತ್ತಿದ್ದಾರೆ. ಬಸ್ ಬಂದ್ ಸುದ್ದಿ ತಿಳಿಯದೆ ಬಸ್ ಪ್ರಯಾಣಕ್ಕೆ ಜೋತುಬಿದ್ದವರು ಬೀದಿಯಲ್ಲೇ ನಿಂತಿದ್ದಾರೆ.












Click it and Unblock the Notifications