ಎಸ್ಪಿಯನ್ನೇ ಅಪಹರಿಸಿದ ಅಮಾನತುಗೊಂಡ ಪೇದೆ

ಒತ್ತಾಯಾಳು ಇ ಲಕ್ಷ್ಮಿನಾರಾಯಣ ಎಂಬ ಎಸ್ಪಿಯನ್ನು ಸಾಯಿಸುವುದಾಗಿ ಬೆದರಿಕೆಯೊಡ್ಡಿದ್ದ ಗಿರಿಪ್ರಸಾದ್ ಶರ್ಮಾ ಎಂಬ ಪೇದೆಯನ್ನು ಆತನ ದುಸ್ಸಾಹಸದಲ್ಲಿ ನಿಷ್ಕ್ರಿಯಗೊಳಿಸಲು ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆ ಪಡೆಯೂ ಭಾಗಿಯಾಗಬೇಕಾಯ್ತು. ಕೊನೆಗೆ ಖುದ್ದು ಗೃಹ ಸಚಿವೆ ಪಿ ಸಬಿತಾ ರೆಡ್ಡಿ ಮತ್ತು ಡಿಜಿಪಿ ದಿನೇಶ್ ರೆಡ್ಡಿಯೇ ಪೇದೆಯ ಜತೆ ಮಾತಿಗಿಳಿಯಬೇಕಾಯಿತು.
ಏನಾಯಿತೆಂದರೆ ಗಿರಿಪ್ರಸಾದ್ ಬಿರ್ಲಾ ಮಂದಿರದ ಸಮೀಪವಿರುವ ವಾಣಿಜ್ಯ ಕಾಂಪ್ಲೆಕ್ಸಿನಲ್ಲಿ ಶೈಲಜಾ ಮಿನರಲ್ಸ್ ಎಂಬ ಅಂಗಡಿ ಹೊಂದಿದ್ದಾರೆ. ಅಲ್ಲಿಗೆ ಬರುವಂತೆ ಸದರಿ ಎಸ್ಪಿ ಲಕ್ಷ್ಮಿನಾರಾಯಣರನ್ನು ಪುಸಲಾಯಿಸಿ ಕರೆಸಿಕೊಂಡಿದ್ದಾನೆ. ಎಸ್ಪಿ ಲಕ್ಷ್ಮಿನಾರಾಯಣರೂ ಹಿಂದುಮುಂದು ನೋಡದೆ ನಿನ್ನೆ ಸಂಜೆ 6 ಗಂಟೆಗೆ ಸೀದಾ ಅಂಗಡಿ ಪ್ರವೇಶಿಸಿದ್ದಾರೆ.
ಆ ಅಧಿಕಾರಿ ಅಂಗಡಿಯೊಳಕ್ಕೆ ಹೆಜ್ಜೆಯಿಡುತ್ತಿದ್ದಂತೆ ಹೊರಗಿನಿಂದ ಷಟರ್ಸ್ ಎಳೆದು ಅಂಗಡಿ ಬಂದ್ ಮಾಡಲಾಗಿದೆ. ಅದಾಗುತ್ತಿದ್ದಂತೆ ಪೇದೆ ಗಿರಿಪ್ರಸಾದ್ ಟಿವಿ ಚಾನೆಲುಗಳಿಗೆ ಎಸ್ಎಂಎಸ್ ಮಾಡಿ ಹೀಗೀಗೆ ಎಸ್ಪಿ ಲಕ್ಷ್ಮಿನಾರಾಯಣರನ್ನು ನನ್ನ ಅಂಗಡಿಯಲ್ಲಿ ಅಪಹರಿಸಿಟ್ಟುಕೊಂಡಿದ್ದೇನೆ. ಕ್ಯಾಮರಾಗಳ ಸಮೇತ ಬಂದು ಲೈವ್ ಕವರೇಜ್ ಕೊಡಿ ಎಂದು ಅಲವತ್ತುಕೊಂಡಿದ್ದಾನೆ.
ಒಂದು ವೇಳೆ ಪೊಲೀಸರು ಕಾರ್ಚಾರಣೆಗಿಳಿದು ಷಟರ್ಸ್ ಮುರಿದು ಒಳಬರುವ ಸಾಹಸ ಮಾಡಿದರೆ... ಒಳಗಡೆ 40 ಲೀಟರ್ ಪೆಟ್ರೋಲಿನೊಂದಿಗೆ ನಾನು ಸಿದ್ಧವಾಗಿದ್ದೇನೆ. ಎಸ್ಪಿ ಲಕ್ಷ್ಮಿನಾರಾಯಣರನ್ನು ಕ್ಷಣಾರ್ಧದಲ್ಲಿ ಸಾಯಿಸಿಬಿಡುತ್ತೇನೆ ಎಂದೂ ಧಮ್ಕಿ ಹಾಕಿದ್ದಾನೆ.
ಇದರಿಂದ ಕಂಗಾಲಾದ ಉನ್ನತಾಧಿಕಾರಿಗಳು ಪೇದೆ ಗಿರಿಪ್ರಸಾದ್ ಜತೆ ಟಿವಿ ಮೂಲಕ ಮಾತಿಗಿಳಿದಿದ್ದಾರೆ. ಕೊನೆಗೆ ರಾತ್ರಿ 10. 45ಕ್ಕೆ ಗಿರಿಪ್ರಸಾದನ ಮನಃಪರಿವರ್ತಿಸುವಲ್ಲಿ ಗೃಹ ಸಚಿವೆ ಮತ್ತು ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಆಗಲೇ ಎಸ್ಪಿ ಲಕ್ಷ್ಮಿನಾರಾಯಣ ಜೀವಂತವಾಗಿ ಹೊರಬಂದಿದ್ದು.
ಈ ಮಧ್ಯೆ ಡಿಜಿಪಿ ದಿನೇಶ್ ರೆಡ್ಡಿ ಅವರು ಪೇದೆ ಗಿರಿಪ್ರಸಾದ್ ಗೆ ನೀಡಿದ ಭರವಸೆಯಿಂದ ತಿಳಿದುಬಂದಿದ್ದೇನೆಂದರೆ ವಿಜಯಕುಮಾರ್ ಎಂಬ ಮತ್ತೊಬ್ಬ ಎಸ್ಪಿ ಸೇವೆಯಲ್ಲಿದ್ದಾಗ ಪೇದೆ ಗಿರಿಪ್ರಸಾದ್ ಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದರು. ಕೊನೆಗೆ ಆ ಅಧಿಕಾರಿಯು ಸದರಿ ಪೇದೆಯಿಂದ ತನ್ನ ಬಾತ್ ರೂಂ ಕ್ಲೀನ್ ಮಾಡಿಸುತ್ತಿದ್ದ ಮತ್ತು ತನ್ನ ಬಾತ್ ರೂಂ ಚಪ್ಪಲಿಗಳನ್ನು ತೊಳೆಸುತ್ತಿದ್ದ.
ಪೇದೆ ಗಿರಿಪ್ರಸಾದ್ ಸ್ಥಿತಿಯನ್ನು ಅರ್ಥ ಮಾಡಿಕೊಂಡ ಡಿಜಿಪಿ ದಿನೇಶ್ ರೆಡ್ಡಿ ಆತನಿಗೆ ನ್ಯಾಯವೊದಗಿಸುವ ಭರವಸೆ ನೀಡಿದ್ದಾರೆ. ಮತ್ತು ಅಮಾನತು ಆದೇಶವನ್ನು ವಾಪಸ್ ಪಡೆಯುವುದಾಗಿಯೂ ಹೇಳಿದ್ದಾರೆ.












Click it and Unblock the Notifications