ಉಗ್ರರನನ್ನು ಮಟ್ಟ ಹಾಕದಿದ್ದರೆ ಉಳಿಗಾಲವಿಲ್ಲ: ಶೋಭಾ
ಕೊಪ್ಪಳ ಜಿಲ್ಲೆ ಗಂಗಾಔತಿ ತಾಲೂಕಿನ ನಿಂಗಾಪುರ ಗ್ರಾಮದಲ್ಲಿ 110 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಅಡಿಗಲ್ಲು ನೆರವೇರಿಸಿದ ಬಳಿಕ ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು ಕೇಂದ್ರ ಸರಕಾರಕ್ಕೆ ಎಲ್ಲವೂ ಗೊತ್ತಿದೆ. ಆದರೂ ಕ್ರಮಕೈಗೊಳ್ಳದೆ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಯಾರು ಯಾರು ಭಯೋತ್ಪಾದಕರು, ಎಲ್ಲೆಲ್ಲಿ ಇದ್ದಾರೆ ಎನ್ನುವ ಎಲ್ಲ ಮಾಹಿತಿಯೂ ಇದೆ. ಆದರೆ ಕ್ರಮ ಕೈಗೊಳ್ಳದೆ ರಾಜಕಾರಣ ಮಾಡುತ್ತಿದೆ.
ನಮ್ಮ ದೇಶದ ಗೂಢಚಾರ ವ್ಯವಸ್ಥೆ ಈ ಎಲ್ಲ ಮಾಹಿತಿಯನ್ನು ನೀಡಿದರೂ ಅದನ್ನು ಜಾರಿ ಮಾಡುವುದಕ್ಕೆ ಕೇಂದ್ರ ಮುಂದೆ ಬರುತ್ತಿಲ್ಲ. ದೇಶದಲ್ಲಿ ಎಚ್ಟು ಜನ ನುಸುಳುಕೋರರು ಇದ್ದಾರೆ ಎನ್ನುವ ಮಾಹಿತಿಯೂ ಇದೆ.
ಇನ್ನು ಪಾಸ್ ಪೋರ್ಟ್ ಇಲ್ಲದವರು ಎಷ್ಟಿದ್ದಾರೆ, ಪಾಸ್ ಪೋರ್ಟ್ ಮುಗಿದವರು ಕಾಲಾವಧಿ ಮುಗಿದವರು ಎಷ್ಟಿದ್ದಾರೆ ಎನ್ನುವ ಮಾಹಿತಿಯೂ ಇದೆ. ಇವರ ವಿರುದ್ಧ ಮೊದಲು ಕ್ರಮಕೈಗೊಳ್ಳಬೇಕು ಎಂದು ದೇಶದ ಬಗ್ಗೆ ಕಾಳಜಿ ವ್ಯಕ್ತಪಡಿಸಿಸುತ್ತಾ ಶೋಭಾ ಕರಂದ್ಲಾಜೆ ಅವರು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ದೇಶದ ಭದ್ರತೆ ಮತ್ತು ಭವಿಷ್ಯದ ವಿಷಯದಲ್ಲಿ ರಾಜಕೀಯ ಮಾಡುವುದು ಸರ್ವತಾಸಾಧುವಲ್ಲ. ಎಲ್ಲರೂ ಒಗ್ಗೂಡಿ ಭಯೋತ್ಪಾದನೆ ನಿಯಂತ್ರಣ ಮಾಡದೆ ಇದ್ದರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಶೋಭಾ ಎಚ್ಚರಿಸಿದ್ದಾರೆ.
ಲೋಕಕಲ್ಯಾಣಾರ್ಥ ಶೋಭಾ ಸುಂದರಕಾಂಡ ಯಾಗ: ಹನುಮ ಜನಿಸಿದ ನಾಡು ಎಂದು ಕರೆಯಿಸಿಕೊಂಡಿರುವ ಗಂಗಾವತಿ ತಾಲೂಕಿನ ಕಿಷ್ಕಿಂದೆ ಪ್ರದೇಶದ ಅಂಜನಾದ್ರಿ ಬೆಟ್ಟದಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಅವರು ಲೋಕಕಲ್ಯಾಣಾರ್ಥವಾಗಿ ಇದೇ ವೇಳೆ ಸುಂದರಕಾಂಡ ಯಾಗ ನಡೆಸಿದರು.
ಶನಿವಾರ ಬೆಳಗ್ಗೆ 9 ಗಂಟೆಗೆ ಆರಂಭವಾದ ಯಾಗ ಮಧ್ಯಾಹ್ನ 12 ಗಂಟೆ ತನಕ ನಡೆಯಿತು. ಸಚಿವೆ ಶೋಭಾ ಕರಂದ್ಲಾಜೆ ಸುಮಾರು ಒಂದೂವರೆ ಗಂಟೆಗಳ ಕಾಲ ಯಾಗದಲ್ಲಿ ಪಾಲ್ಗೊಂಡಿದ್ದರು. ಅವರೊಂದಿಗೆ ತಾಯಿ ಪೂವಮ್ಮ, ಸಹೋದರಿಯರಾದ ಶಶಿಕಲಾ, ಮೋಹಿನಿ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಇದ್ದರು.
ಉಪಚುನಾವಣೆ ಸಂದರ್ಭದಲ್ಲಿ ಜಿಲ್ಲೆಗೆ ಬರುವವರೆಗೂ ಕೊಪ್ಪಳ ಹನುಮ ಜನಿಸಿದ ನಾಡು ಎಂಬುದು ಗೊತ್ತಿರಲಿಲ್ಲ. ಈ ವಿಷಯ ತಿಳಿದ ಬಳಿಕ ಈ ಪ್ರದೇಶದ ಮಹತ್ವ ಅರಿತು, ಚುನಾವಣೆ ಮುಗಿದ 48 ದಿನಗಳ ನಂತರ ಬಂದು ಯಾಗ ನಡೆಸುವುದಾಗಿ ಹರಕೆ ಹೊತ್ತುಕೊಂಡಿದ್ದೆ. ಕಾರಣಾಂತರಗಳಿಂದ ಬರಲಾಗಿರಲಿಲ್ಲ. ಈಗ ಬಂದು ಲೋಕಕಲ್ಯಾಣಕ್ಕಾಗಿ ಸುಂದರಕಾಂಡ ಯಾಗ ನಡೆಸಿರುವುದಾಗಿ ಅವರು ತಿಳಿಸಿದರು.
ಏನಿದು ಸುಂದರ ಕಾಂಡ ಯಾಗ ? ವಾಲ್ಮೀಕಿ ರಾಮಾಯಣದಲ್ಲಿ ಬರುವ ಸುಂದರ ಕಾಂಡ ಅಧ್ಯಾಯದಲ್ಲಿ ರಾಮ-ಸೀತೆಯರ ಲೀಲಾವಳಿ ಜತೆಗೆ ಹನುಮನ ಜನನ, ನಿಷ್ಠೆ, ಭಕ್ತಿ ಬಗ್ಗೆ ವಿವರಿಸಲಾಗಿದೆ. ಇಡೀ ರಾಮಾಯಣದಲ್ಲಿ ಈ ಅಧ್ಯಾಯ ಪ್ರಮುಖವಾಗಿದ್ದು, ಹನುಮಂತನ ಹಲವು ಘಟನಾವಳಿಗಳನ್ನು ವಿವರಿಸಲಾಗಿದೆ. ಸುಂದರ ಕಾಂಡ ಎಂದರೆ ಮಾನವ ವಾಸವಾಗಿರುವ ಖಂಡ (ಜಗತ್ತಿನ ಒಂದು ಉಪ ಭಾಗ) ಸುಂದರವಾಗಿರುವಂತೆ, ಕಷ್ಟ-ಕಾರ್ಪಣ್ಯಗಳು ಬಂದರೆ ಎದುರಿಸುವ ಬಗ್ಗೆ ಹೇಳಿರುವ ಅಧ್ಯಾಯವಾಗಿದೆ.
ಇದೇ ಹೆಸರಿನಲ್ಲಿ ಮೊದಲಿನಿಂದಲೂ ಹನುಮನ ಭಕ್ತರು ಯಾಗವನ್ನು ನಡೆಸುತ್ತ ಬಂದಿದ್ದಾರೆ. ಈ ಯಾಗ ನಡೆಸುವುದರಿಂದ ಕುಟುಂಬ ಮಾತ್ರವಲ್ಲ, ಇಡೀ ಜಗತ್ತು ಕಷ್ಟ-ಕಾರ್ಪಣ್ಯ, ವಿಕೋಪಗಳಿಂದ ಮುಕ್ತಿ ಹೊಂದುತ್ತದೆ ಎಂಬ ನಂಬಿಕೆ ಆಸ್ತಿಕರಲ್ಲಿದೆ.