ರೆಡ್ಡಿಗೆ ರಾಜಯೋಗ: ಚಂಚಲಗೂಡ ಜೈಲರ್ ಎತ್ತಂಗಡಿ

ವರ್ಷದ ಹಿಂದೆ ಚಂಚಲಗೂಡ ಜೈಲು ಸೇರಿಕೊಂಡ ಜನಾರ್ದನ ರೆಡ್ಡಿಗೆ ಸಿಬಿಐ ಲಕ್ಷ್ಮಿನಾರಾಯಾಣ ಮುಂದೆ ತನ್ನಾಟವೇನು ನಡೆಯುವುದಿಲ್ಲ ಎಂಬುದು ಅರಿವಿಗೆ ಬಂದಿತ್ತು. ಹಾಗಾಗಿ, ಜೈಲುಗೂಡು ಕಾಯಂ ಆಗಲಿದೆ ಎಂಬುದು ಮನದಟ್ಟಾಗುತ್ತಿದ್ದಂತೆ ಜೈಲಿನಲ್ಲಿದ್ದುಕೊಂಡು ದರಬಾರು ನಡೆಸಲು ನಿಶ್ಚಯಿಸಿದರು.
ಅದರಂತೆ ಜೈಲಿನಲ್ಲಿ ಇಂದ್ರನ ಐಭೋಗ ಪಡೆಯಲು ಜೈಲಿನ ಅಧಿಕಾರಿಗಳಿಗೆ ರೆಡ್ಡಿಗಾರು ಲಂಚ ನೀಡಿದ್ದರು ಎಂಬ ಆಘಾತಕಾರಿ ವಿಷಯ ಈಗ ಬಹಿರಂಗವಾಗಿದೆ. ಮತ್ತು ಹೀಗೆ ರೆಡ್ಡಿಯ ಸೇವೆಗೆ ನಿಂತಿದ್ದ ಅಲ್ಲಿನ ಜೈಲಾಧಿಕಾರಿ ಕೇಶವನಾಯ್ಡುನನ್ನು ಆಂಧ್ರಪ್ರದೇಶ ಸರ್ಕಾರ ಇದೀಗ ಎತ್ತಂಗಡಿ ಮಾಡಿದೆ.
ಇದಾಗುತ್ತಿದ್ದಂತೆ, ರೆಡ್ಡಿ ಜಾಮೀನು ಲಂಚ ಪ್ರಕರಣದ ತನಿಖೆ ನಡೆಸುತ್ತಿರುವ ಆಂಧ್ರದ ಭ್ರಷ್ಟಾಚಾರ ನಿಗ್ರಹ ದಳವು (ACB) ಜೈಲಾಧಿಕಾರಿ ಕೇಶವನಾಯ್ಡುನ ವಿಚಾರಣೆಗೆ ಅನುಮತಿ ಕೋರಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿದೆ.
ಬಳ್ಳಾರಿ ಜೈಲರ್ ಗತಿಯೇನು?: ಈ ಮಧ್ಯೆ, ಮೊನ್ನೆ ಸಂಡೂರು ಕೋರ್ಟಿಗೆ ಹಾಜರಾಗಲು ಅಕ್ರಮ ಗಣಿಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿ ಜೈಲಿನಲ್ಲಿ ಒಂದು ರಾತ್ರಿಯ ವಾಸ್ತವ್ಯಕ್ಕೆ ಬಂದಿದ್ದಾಗ, ರಜೆಯ ಮೇಲೆ ತೆರಳಿದ್ದ ಜೈಲು ಅಧೀಕ್ಷಕ ಸಾಹೇಬ ಎದ್ನೋ ಬಿದ್ನೋ ಎಂದು ಜೈಲಿಗೆ ಓಡಿಬಂದು, ರೆಡ್ಡಿ ಪಾದಾರವಿಂದಗಳಿಗೆ ಅಡ್ಡಬಿದ್ದು ಧನ್ಯತೆ ಅನುಭವಿಸಿದ್ದ, ಜೈಲರ್ ಕೇಶವ ರೆಡ್ಡಿಗೂ ಈಗಾಗಲೇ ನೋಟಿಸ್ ಜಾರಿಯಾಗಿದ್ದು, ಅವರೂ ಎತ್ತಂಗಡಿಯ ಹಾದಿಯಲ್ಲಿದ್ದಾರೆ.
ಚಂಚಲಗೂಡ ಜೈಲಿನಲ್ಲಿ ಜನಾರ್ದನ ರೆಡ್ಡಿ ಸಾಹೇಬರು ಸಾಮಾನ್ಯ ಕೈದಿಯಾಗಿದ್ದರು. ಅವರಿಗೆ ವಿಶೇಷ ಸೌಲಭ್ಯಗಳೇನೂ ಲಭ್ಯವಿರಲಿಲ್ಲ. ಆದರೆ ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿದ್ದ ರೆಡ್ಡಿಗೆ ಜೈಲು ವಾಸ ಕಷ್ಟವಾಗಿತ್ತು. ಹೀಗಾಗಿ ಜೈಲಿನಲ್ಲಿ ವಿಶೇಷ ಸೇವೆ ಪಡೆಯತೊಡಗಿದರು. ಇದಕ್ಕಾಗಿ ಜೈಲಿನ ಮುಖ್ಯ ಅಧೀಕ್ಷಕ ಕೇಶವ ನಾಯ್ಡು ಸೇರಿದಂತೆ ಹಲವರಿಗೆ ಹೇರಳ ಹಣ ನೀಡಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೇಶವ ನಾಯ್ಡು ಅವರನ್ನು ಎತ್ತಂಗಡಿ ಮಾಡಲಾಗಿದೆ. ಕೇಶವ್ ನಾಯ್ಡು ಅವರನ್ನು ಕೈದಿಗಳ ಮನಃ ಪರಿವರ್ತನಾ ಸಂಸ್ಥೆಗೆ ವರ್ಗಾಯಿಸಲಾಗಿದೆ. ನಾಯ್ಡು ಜಾಗಕ್ಕೆ ಈಗ ವಾರಂಗಲ್ ಕೇಂದ್ರ ಕಾರಾಗೃಹದ ಜೈಲರ್ Saidaiah ಅವರನ್ನು ನೇಮಕ ಮಾಡಲಾಗಿದೆ.
ಜನಾರ್ದನ ರೆಡ್ಡಿಗೆ (ಕೈದಿ ನಂಬರ್ 697) ವಿಶೇಷ ಬೆಡ್ಶೀಟ್ಗಳು, ಟವಲ್ಗಳನ್ನು ಕೊಡಲಾಗುತ್ತಿತ್ತು. ಅವನ್ನು ಪ್ರತಿದಿನವೂ ಇಸ್ತ್ರಿ ಮಾಡಿಸಲಾಗುತ್ತಿತ್ತು. ಇದರ ಜತೆಗೆ ಪ್ರತ್ಯೇಕ ಅಡುಗೆ ಪರಿಚಾರಕ, ಸಹಾಯಕ ಹಾಗೂ ವಕೀಲರು ಮತ್ತಿತರರೊಂದಿಗೆ ವ್ಯವಹರಿಸಲು ಅನುಕೂಲವಾಗಲೆಂದು ಕಂಪ್ಯೂಟರ್ ಸವಲತ್ತು ಒದಗಿಸಲಾಗಿತ್ತು ಎಂದು ಬಂದಿಖಾನೆ ಇಲಾಖೆ ಮೂಲಗಳು ತಿಳಿಸಿವೆ.
ಅಷ್ಟೇ ಅಲ್ಲ, ರೆಡ್ಡಿಗೆ ವಾರಕ್ಕೆರಡು ಬಾರಿ ಮಸಾಜು ಮಾಡಲು ವ್ಯವಸ್ಥೆ ಕಲ್ಪಿಸಲಾಗಿತ್ತು. ತಾಜಾ ಬ್ರೆಡ್, ಬಿಸ್ಕತ್ತು, ಚಾಕೊಲೇಟ್ಗಳ ಜತೆಗೆ ಹಣ್ಣು ಹಂಪಲು ಮತ್ತು ಮಾಂಸಾಹಾರವೂ ಸಿಗುವಂತೆ ನೋಡಿಕೊಳ್ಳಲಾಗಿತ್ತು ಎಂದು ವಿವರಿಸಲಾಗಿದೆ.
ರೆಡ್ಡಿ ಅವರ ಹುಟ್ಟಿದ ದಿನವಾದ ಜನವರಿ 11ರಂದು ಜೈಲಿನಲ್ಲಿ ವಿಶೇಷ ಆಚರಣೆಗೆ ಜೈಲರ್ ನಾಯ್ಡು ವ್ಯವಸ್ಥೆ ಮಾಡಿದ್ದರು. ಅವತ್ತು ಜೈಲು ಆವರಣದಲ್ಲಿರುವ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು. ಜೈಲಿನ ಎಲ್ಲಾ ಕೈದಿಗಳಿಗೆ ವಿಶೇಷ ಆಹಾರ ವಿತರಿಸಲಾಗಿತ್ತು. ಈ ಎಲ್ಲಾ ಖರ್ಚನ್ನು ರೆಡ್ಡಿ ಅವರೇ ಭರಿಸಿದ್ದರು. ಅದೇ ದಿನ ಜೈಲು ಬಂಗಲೆಯಲ್ಲಿ ರೆಡ್ಡಿ ಅವರಿಗಾಗಿ ವಿಶೇಷ ಕೂಟವನ್ನು ನಡೆಸಲಾಗಿತ್ತು ಎಂದೂ ತಿಳಿದು ಬಂದಿದೆ.












Click it and Unblock the Notifications