ಗೀತಿಕಾ ಆತ್ಮಹತ್ಯೆ, ಬಾಲಿವುಡ್ ನಟಿಗೆ ಕುತ್ತು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನೂಪುರ್ ಮೆಹ್ತಾ ಅವರನ್ನು ಪ್ರಶ್ನಿಸಲಾಗುವುದು ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳಲ್ಲಿ ಕಾಣಿಸಿಕೊಂಡಿದ್ದ ನೂಪುರ್ ಮೆಹ್ತಾ ಅವರು ಈಗ ಪೊಲೀಸರ ಪ್ರಶ್ನೆಗಳಿಗೆ ತಯಾರಾಗಬೇಕಿದೆ.
ಗೀತಿಕಾ ಅವರ ಜೊತೆಗೆ ನೂಪುರ್ ಕೂಡಾ ಗೋಪಾಲ್ ಕಂಡಾ ಒಡೆತನದ ಎಂಡಿಎಲ್ ಆರ್ ಏರ್ ಲೈನ್ಸ್ ನ ಉದ್ಯೋಗಿಯಾಗಿದ್ದರು ಎಂಬ ಸತ್ಯ ಹೊರಬಿದ್ದಿದೆ. ಎಂಡಿಎಂಎಲ್ ಏರ್ ಲೈನ್ಸ್ ಮುಚ್ಚಿದ ಮೇಲೆ 2009ರಲ್ಲಿ ಗೋವಾದ ಕ್ಯಾಸಿನೋವೊಂದರಲ್ಲಿ ಆಕೆ ಉದ್ಯೋಗಕ್ಕೆ ಸೇರಿಕೊಂಡಳು. ಈ ಕ್ಯಾಸಿನೋ ಕೂಡಾ ಕಂಡಾ ಮಾಲೀಕತ್ವಕ್ಕೆ ಸೇರಿದ್ದಾಗಿದೆ.
ನೂಪುರ್ ಹೇಳಿದ ನೂತನ ಕಥೆ: ನಾನು ಕೆಲಸಕ್ಕೆ ಸೇರಿದಾಗ ಅಲ್ಲಿದ್ದ ಸ್ಟಾಫ್ ನೋಡಿ ನನಗೆ ಆಶ್ಚರ್ಯವಾಯಿತು. ಕಂಡಾ ತನ್ನ ಎಲ್ಲಾ ನೆಚ್ಚಿನ ಏರ್ ಹೊಸ್ಟೇಸ್ ಗಳನ್ನು ಕ್ಯಾಸಿನೋಗೆ ಸೇರಿಸಿಕೊಂಡಿದ್ದ. ಕಾಂಗ್ರೆಸ್ ಪಕ್ಷ ಗಣ್ಯಾತಿಗಣ್ಯರು, ಉದ್ಯಮಿಗಳು ಈ ಕ್ಯಾಸಿನೋಗೆ ಬರುತ್ತಿದ್ದರು ಎಂದು ನೂಪುರ್ ಹೇಳಿದ್ದಾಳೆ.
ಕಂಡಾಗೆ ಅಂಕಿತಾ ಎಂಬುವಳ ಜೊತೆ ದೈಹಿಕ ಸಂಪರ್ಕವಿತ್ತು. ಇಬ್ಬರಿಗೂ ಒಂದು ಮಗು ಸಹಾ ಇದೆ. ಗೀತಿಕಾ ಹಾಗೂ ಅಂಕಿತಾ ಜೊತೆ ಆಗಾಗ ಕಿತ್ತಾಟ ನಡೆಯುತ್ತಿತ್ತು. ಈ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಅಂಕಿತಾ ವಿರುದ್ಧ ಎಫ್ ಐಆರ್ ಕೂಡಾ ದಾಖಲಾಗಿತ್ತು ಎಂದು ನೂಪುರ್ ಹೇಳಿದ್ದಾಳೆ.
ನೂಪುರ್ ಹೇಳಿಕೆ ಪುಷ್ಟಿ ನೀಡುವಂತೆ ಗೀತಿಕಾ ಕೂಡಾ ತನ್ನ ಸೂಸೈಡ್ ನೋಟ್ ನಲ್ಲಿ ಅಂಕಿತಾಳ ಹೆಸರನ್ನು ಪ್ರಸ್ತಾಪಿಸಿದ್ದಾಳೆ. ಸದ್ಯ ಎಂಡಿಎಲ್ ಆರ್ ನ ಉದ್ಯೋಗಿ ಸಹಾಯಕ ಎಚ್ ಆರ್ ಮ್ಯಾನೇಜರ್ ಚಂದ್ ಶಿವರುಪ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ನಕಲಿ ಲೆಟರ್ ತಯಾರಿಕೆ, ಫ್ರೊಫೈಲ್ ಬದಲಾವಣೆ ಮುಂತಾದ ಕುಕೃತ್ಯಗಳನ್ನು ಎಸೆಗಿ ಗೀತಿಕಾ ವಿರುದ್ಧ ಆರೋಪ ಹೊರೆಸಿ ಕೆಲಸದಿಂದ ವಜಾಗೊಳಿಸುವುದು, ಆಕೆಯನ್ನು ದುಬೈಗೆ ರವಾನಿಸಲು ಸಂಸ್ಥೆ ಯತ್ನಿಸಿದ್ದರ ಹಿಂದೆ ಶಿವ ರುಪ್ ಕೈವಾಡ ಇತ್ತು ಎಂಬುದು ತಿಳಿದು ಬಂದಿದೆ.
ಗೋಪಾಲ್ ಅವರು ಗೀತಿಕಾಗೆ ಕಳಿಸಿದ್ದಾರೆ ಎನ್ನಲಾದ 400ಕ್ಕೂ ಅಧಿಕ ಎಸ್ ಎಂಎಸ್ ಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ. ಎಸ್ ಎಂಎಸ್ ಗಳನ್ನು ಡಿಕೋಡ್ ಮಾಡಿದರೂ ಏನು ಪ್ರಯೋಜನಕ್ಕೆ ಬಂದಿಲ್ಲ.
ಗೀತಿಕಾ ಆತ್ಮಹತ್ಯಾ ಪ್ರಕರಣದಲ್ಲಿ ಅರುಣಾ ಚಡ್ಡಾ ಹಾಗೂ ಗೋಪಾಲ್ ಕಂಡಾ ಅವರಿಂದ ಸ್ಪಷ್ಟ ಮಾಹಿತಿ ಕಲೆ ಹಾಕಲು ಸೋತಿರುವ ಪೊಲೀಸರು ಈಗ ನೂಪುರ್ ಹೇಳಿಕೆ ಮೇಲೆ ತನಿಖೆ ಕೈಗೊಳ್ಳಲಿದ್ದಾರೆ. ಗೀತಿಕಾಳ ಮರಣೋತ್ತರ ಪರೀಕ್ಷೆ ವರದಿಯನ್ನು ಗೌಪ್ಯವಾಗಿಡುವಲ್ಲಿ ಸೋತ ಪೊಲೀಸರು ಕೋರ್ಟಿನಲ್ಲಿ ಛೀಮಾರಿ ಹಾಕಿಸಿಕೊಂಡ ಪ್ರಸಂಗವೂ ನಡೆದಿದೆ.
ಕೋರ್ಟ್ ಸೇರುವ ಮುನ್ನ ಗೀತಿಕಾ autopsy ವರದಿ ಮಾಧ್ಯಮಗಳ ಡೆಸ್ಕ್ ಸೇರಿತ್ತು. ಗೀತಿಕಾಳ ಜೊತೆ ಅನೈಸರ್ಗಿಕವಾಗಿ ಸಂಭೋಗ ಕ್ರಿಯೆ ನಡೆದಿರುವ ಬಗ್ಗೆ ಈ ವರದಿಯಲ್ಲಿ ಮಾಹಿತಿ ಇದೆ ಎನ್ನಲಾಗಿದೆ. ವಿಚಾರಣೆ ವೇಳೆ ಗೋಪಾಲ್ ಆಪ್ತೆ ಅರುಣಾ ಚಡ್ಡಾ ಕುತೂಹಲ ಮಾಹಿತಿಯನ್ನು ಹೊರ ಹಾಕಿದ್ದು, ಗೀತಿಕಾಗೆ ಗರ್ಭಸ್ರಾವವಾಗಿತ್ತು ಎಂದಿದ್ದರು. ಆ.5 ರಂದು 23 ವರ್ಷದ ಗೀತಿಕಾ ತನ್ನ ಅಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.