ಬರ ಪ್ರವಾಸಕ್ಕೆ ಹೊರಟ ಮಾಜಿ ಸಿಎಂ ಯಡಿಯೂರಪ್ಪ
ಆದರೆ ನಾನೊಂದು ದಿಕ್ಕು ನೀನೊಂದು ದಿಕ್ಕು ಎಂದು ಇವರು ತಮ್ಮ ತಮ್ಮದೇ ದಿಕ್ಕುಗಳಲ್ಲಿ ಬರ ಅಧ್ಯಯನ ಪ್ರವಾಸಕ್ಕೆ ಪ್ರತ್ಯೇಕವಾಗಿ ಹೊರಟಿದ್ದಾರೆ. ಇದಕ್ಕೆ ಜನ ಅಂದರೆ ಮುಂದಿನ ಮತದಾರ ಹೇಗೆ ಪ್ರತಿಕ್ರಿಯಸುತ್ತಾನೋ ಕಾಲವೇ ನಿರ್ಣಯಿಸಲಿದೆ.
ಬರದಿಂದ ಬಳಲಿರುವ ರೈತರಲ್ಲಿ ಆತ್ಮವಿಶ್ವಾಸ ತುಂಬಲು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಶ್ರೀ ಶಿವಕುಮಾರ ಸ್ವಾಮಿಗಳ ಆಶೀರ್ವಾದ ಪಡೆದು ಮಾಜಿ ಸಿಎಂ ಯಡಿಯೂರಪ್ಪ ಅವರು ಇಂದಿನಿಂದ ಪ್ರವಾಸ ಹೊರಟಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಡಿಸಿಎಂ ಈಶ್ವರಪ್ಪ ಅವರೂ ಸಹ ಸಿದ್ಧಗಂಗಾ ಮಠದಲ್ಲಿ ಶ್ರೀ ಶಿವಕುಮಾರ ಸ್ವಾಮಿಗಳ ಆಶೀರ್ವಾದ ಪಡೆದು, ಯಡಿಯೂರಪ್ಪ ಪ್ರವಾಸಕ್ಕೆ ಶುಭ ಹಾರೈಸಿದರು.
ಅದಕ್ಕೂ ಮುನ್ನ ಬೆಂಗಳೂರಿನ ಅಣ್ಣಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿ ಯಡಿಯೂರಪ್ಪ ತಂಡ ತುಮಕೂರಿನತ್ತ ಪ್ರಯಾಣ ಬೆಳೆಸಿತು. ಇವರಿಗೆ ನಟಿ ತಾರಾ, ಸಚಿವೆ ಶೋಭಾ ಕರಂದ್ಲಾಜೆ, ರಾಮಚಂದ್ರ ಗೌಡ, ರೇಣುಕಾಚಾರ್ಯ ಮುಂತಾದ ನಾಯಕರು ಸಾಥ್ ನೀಡಿದ್ದಾರೆ.
ಇನ್ನು ಮಾಜಿ ಸಿಎಂ ಸದಾನಂದ ಗೌಡರ ಪ್ರವಾಸ ವೇಳಾಪಟ್ಟಿ ಇನ್ನೂ ಆಖೈರಾಗಿಲ್ಲವಾದರೂ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ, ಸಂಸದ ಅನಂತ್ಕುಮಾರ್ ಆ ಪ್ರವಾಸದ ಸಾರಥ್ಯ ವಹಿಸಲಿದ್ದಾರೆ ಎಂದು ಸದಾನಂದ ಗೌಡರ ಬಣ ನಿನ್ನೆ ಪ್ರಕಟಿಸಿದೆ.
ಮಾಜಿ ಸಿಎಂ ಸದಾನಂದಗೌಡ ಹಾಗೂ ಸಂಸದ ಅನಂತ್ಕುಮಾರ್ ನೇತೃತ್ವದಲ್ಲಿ ಪ್ರತ್ಯೇಕವಾಗಿ ರಾಜ್ಯ ಪ್ರವಾಸ ನಡೆಲಾಗುವುದು ಸಂಸದ ಪ್ರಹ್ಲಾದ್ ಜೋಶಿ ಸುದ್ಧಿಗಾರರಿಗೆ ತಿಳಿಸಿದ್ದಾರೆ.
ಗಮನಾರ್ಹವೆಂದರೆ ಈ ಪ್ರವಾಸದಲ್ಲಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್ ಸೇರಿದಂತೆ ಸಚಿವರು ಹಾಗೂ ಪಕ್ಷದ ಕೆಲ ಮುಖಂಡರು ಪಾಲ್ಗೊಳ್ಳಲಿದ್ದಾರೆ. ತನ್ಮೂಲಕ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಸಿಎಂ ಯಡಿಯೂರಪ್ಪ ಪಕ್ಷವನ್ನು ಬದಿಗಿಟ್ಟು ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಪ್ರಕಟಿಸಿದ್ದ ಬೆನ್ನಲ್ಲೇ ಅದಕ್ಕೆ ಸೆಡ್ಡು ಹೊಡೆಯಲು ತೆರೆಮರೆಯಲ್ಲೆ ಕಸರತ್ತು ನಡೆಸಿದ್ದ ಮಾಜಿ ಸಿಎಂ ಸದಾನಂದಗೌಡ ಬಣ, ಯಡಿಯೂರಪ್ಪರಿಗೆ ಪ್ರತಿತಂತ್ರ ರೂಪಿಸಿದೆ.