ಉತ್ತರಧ್ರುವದ ಸಮುದ್ರ ಮಂಜು ಸದ್ಯದಲ್ಲೇ ನಾಶ
ಲಂಡನ್, ಆ.21: ಹೌದು, ಉತ್ತರಧ್ರುವದಲ್ಲಿ ಹರಡಿರುವ ವಿಶಾಲ ಸಮುದ್ರದ ಮಂಜು ಸದ್ಯದಲ್ಲೇ ಕರಗಲಿದೆ. ಅಷ್ಟೇ ಅಲ್ಲ. ಇನ್ನು ಹತ್ತು ವರ್ಷಗಳಲ್ಲಿ ಅದು ಮಾಯವಾಗಲಿದೆ.

ಇಂತಹ ಆತಂಕವನ್ನು ವಿಜ್ಞಾನಿಗಳು ಹೊರಹಾಕಿದ್ದು, ಈ ಹಿಂದೆ ಅಂದುಕೊಂಡಿದ್ದಕ್ಕಿಂತ ತ್ವರಿತವಾಗಿ ಉತ್ತರಧ್ರುವದ ಅಗಾಧ ಮಂಜು ನೀರಿನಂತೆ ಕರಗಿ, ಮಾಯವಾಗಲಿದೆ. ಇದರಿಂದ ಜಾಗತಿಕ ತಾಪಮಾನದಲ್ಲಿ ಏರಿಕೆಯಾಗುವುದು ದಿಟ ಎಂದು ಎಚ್ಚರಿಸಿದ್ದಾರೆ.
ಕಳೆದೊಂದು ವರ್ಷದಲ್ಲಿ 900 ಘನ ಕಿ. ಮೀಟರ್ ವಿಸ್ತೀರ್ಣದ ಮಂಜು ಉತ್ತರಧ್ರುವ ಸಾಗರದಿಂದ ಮಾಯವಾಗಿದೆ. ಉಪಗ್ರಹ ಚಿತ್ರಗಳಿಂದ ಇದು ದೃಢಪಟ್ಟಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಉತ್ತರಧ್ರುವದಲ್ಲಿ ಮಂಜು ನಾಶವಾಗುವ ಪ್ರಮಾಣ ಶೇ. 50ರಷ್ಟು ತ್ವರಿತಗತಿಯಲ್ಲಿದೆ. ಜಾಗತಿಕ ತಾಪಮಾನ ಏರಿಕೆಯು ಇದರ ಮೇಲೆ ಪರಿಣಾಮ ಬೀರುತ್ತಿದ್ದು, ಮಂಜು ಕರುಗುವ ಪ್ರಮಾಣ ತೀವ್ರವಾಗುತ್ತಿದೆ
ಇನ್ನು ಕೆಲವೇ ವರ್ಷಗಳಲ್ಲಿ ಬೇಸಿಗೆಯ ಸಂದರ್ಭದಲ್ಲಿ ಉತ್ತರಧ್ರುವ ಮಂಜು ಸಾಗರದಲ್ಲಿ ಮಂಜು ಕಂಡುಬರುವುದಿಲ್ಲ. ಸಮುದ್ರ ಖಾಲಿಯಾಗುತ್ತಿದ್ದಂತೆ ಮೀನು ಬೇಟೆಗೆ ಸುವರ್ಣಾವಕಾಶ ಲಭಿಸಲಿದೆ. ಜತೆಗೆ ತೈಲ, ಖನಿಜ ಸಂಪತ್ತು ಉತ್ಖನನಕ್ಕೂ ಅವಕಾಶ ಲಭ್ಯವಾಗಲಿದೆ. ಹಾಗೆಯೇ ಸಮುದ್ರ ಮಾರ್ಗವನ್ನೂ ಕಂಡುಹಿಡಿಯಬಹುದು ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.
ಕೆನಡಾ ಮತ್ತು ಗ್ರೀನ್ ಲ್ಯಾಂಡ್ ನ ಉತ್ತರ ಭಾಗದಲ್ಲಿ ಬೇಸಿಗೆಯ ವೇಳೆ 10 ವರ್ಷಗಳ ಹಿಂದೆ ಐದಾರು ಮೀಟರ್ ದಪ್ಪದ ಮಂಜು ಘನೀಕೃತವಾಗುತ್ತಿತ್ತು. ಆದರೆ ಈಗ ಕೇವಲ 1-2 ಮೀಟರ್ ದಪ್ಪದ ಮಂಜು ಕಾಣುತ್ತದೆ. ಅದೂ ಬಹುತೇಕ ನೀರಿನ ರೂಪದಲ್ಲಿ! ಇದರಿಂದ ಸುತ್ತಮುತ್ತಲ ಸಮುದ್ರಗಳಲ್ಲಿ ನೀರಿನ ಮಟ್ಟ ಏರಲಿದೆ.
ಹಿಮಕರಡಿಯ ಪಾಡೇನಾಗಬೇಕು?: ಇದು ಹಿಮಕರಡಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಮುದ್ರ ಮಂಜು ಇಲ್ಲವಾದಾಗ ಹಿಮ ಕರಡಿಗಳು ಆಹಾರ ಬೇಟೆಗಾಗಿ (ಸೀಲ್ ಗಳು) ತುಂಬಾ ದೂರಕ್ಕೆ ಈಜಿಕೊಂಡು ಹೋಗಬೇಕಾಗುತ್ತದೆ. ಆ ವೇಳೆ ಆಯಾಸಗೊಳ್ಳುವ ಕರಡಿಗಳು ತೂಕ ಕಳೆದುಕೊಳ್ಳಲಿವೆ. ಇದರಿಂದ ಮುಳುಗಿಹೋಗುವ ಅಪಾಯವೂ ಎದುರಾಗುತ್ತದೆ.
ಹೀಗೆ ಬೇಸಿಗೆಯ ಕಾಲಕ್ಕೆ ಮಾತ್ರವೇ ಹೀಗೆ ಮಂಜು ಮಾಯವಾಗುವುದರಿಂದ ಜಾಗತಿಕ ಸಂಕಷ್ಟ ಎದುರಾಗುವುದು ನಿಶ್ಚಿತ. ಹೇಗೆಂದರೆ ಮಂಜು ಕರೆಗುವ ವೇಳೆ ಮಿಥೇನ್ ಅನಿಲ ಉತ್ಪತ್ತಿಯಾಗಿ ವಾಯುಮಂಡಲ ಸೇರಿಕೊಳ್ಳುತ್ತದೆ. ಇದು ಜಾಗತಿಕ ತಾಪಮಾನ ಹೆಚ್ಚಳಕ್ಕೆ ನೆರವಾಗಲಿದೆ.












Click it and Unblock the Notifications