ಅಸ್ಸಾಂಗಿಂತ ಬೆಂಗಳೂರು ಸೇಫ್, ಡೋಂಟ್ ಗೋ

ಬೆಂಗಳೂರಿನಲ್ಲಿ ವಾಸವಿರುವ ಅಸ್ಸಾಂ ನಾಗರಿಕರಿಗೆ ಪ್ರಾಣ ಬೆದರಿಕೆಯ ಸಂದೇಶ ಬಂದಿದೆ ಎಂಬ ವದಂತಿ ಹಬ್ಬಿದ್ದು, ಸಾವಿರಾರು ಜನರು ಅಸ್ಸಾಂಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ, ಅವರ ರಕ್ಷಣೆಗಾಗಿ ಕ್ರಮ ತೆಗೆದುಕೊಳ್ಳುವ ಉದ್ದೇಶದಿಂದ ಜಗದೀಶ್ ಶೆಟ್ಟರ್ ಅವರು ಗುರುವಾರ ಮಧ್ಯಾಹ್ನ ತಮ್ಮ ಗೃಹ ಕಚೇರಿಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದರು.
ಈ ಸಭೆಯಲ್ಲಿ ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವ ಆರ್ ಅಶೋಕ್, ಪೊಲೀಸ್ ಮಹಾನಿರ್ದೇಶಕ ಪಚಾವೋ, ಬೆಂಗಳೂರು ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಮತ್ತಿತರ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಅಸ್ಸಾಂ ಜನರ ಪ್ರತಿನಿಧಿಯಾಗಿ 25 ಯವಕ ಯುವತಿಯರು ಕೂಡ ಶೆಟ್ಟರ್ ಅವರ ಜೊತೆ ಮಾತುಕತೆ ನಡೆಸಿದರು.
ಸಭೆಯ ನಂತರ ಮಾತನಾಡಿದ ಆರ್ ಅಶೋಕ್ ಅವರು, ಅಸ್ಸಾಂ ಜನತೆ ಬೆಂಗಳೂರಿನಲ್ಲಿ ಅತ್ಯಂತ ಸುರಕ್ಷಿತ. ಅವರು ಯಾವುದೇ ಬೆದರಿಕೆಯ ಕರೆಗೆ ಬಗ್ಗುವ ಪ್ರಮೇಯವೇ ಇಲ್ಲ. ಇಲ್ಲಿನ ಪೊಲೀಸ್ ಅವರಿಗೆ ಸಂಪೂರ್ಣ ಸುರಕ್ಷತೆ ನೀಡುತ್ತದೆ. ಜನರು ಕೂಡ ಯಾವುದೇ ವದಂತಿಗಳಿಗೆ ಕಿವಿಗೊಡದೆ ಇಲ್ಲಿಯೇ ಉಳಿಯಬೇಕು. ಈ ಕುರಿತು ಪ್ರಧಾನಿ ಸಿಂಗ್, ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್ ಅವರ ಜೊತೆ ಮಾತನಾಡಲಾಗಿದೆ ಎಂದರು.
ಅಸ್ಸಾಂ ಯವಜನತೆ ಇಲ್ಲಿನ ತಮ್ಮ ರಕ್ಷಣೆಗಿಂತ ಅಲ್ಲಿರುವ ತಮ್ಮ ಸ್ನೇಹಿತರು ಬಂಧುಗಳ ಬಗ್ಗೆ ಚಿಂತಿತರಾಗಿದ್ದು, ಅವರ ರಕ್ಷಣೆಗಾಗಿ ಅಲ್ಲಿಗೆ ತೆರಳುತ್ತಿರುವುದಾಗಿ ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ. ಒಂದು ವರದಿಯ ಪ್ರಕಾರ, ಬುಧವಾರ 5 ಸಾವಿರಕ್ಕೂ ಹೆಚ್ಚು ಜನರು ಅಸ್ಸಾಂಗೆ ತೆರಳಿದ್ದರು, ಗುರುವಾರ ಸುಮಾರು 800 ಟಿಕೆಟ್ಗಳು ರೈಲ್ವೆ ಇಲಾಖೆಯಿಂದ ಬುಕ್ ಆಗಿವೆ.
ಗುರುವಾರ ಕೂಡ ಅಸ್ಸಾಂ ನಾಗರಿಕರ ಮನವೊಲಿಸುವ ಕಾರ್ಯ ಮುಂದುವರಿದಿದೆ. ನಿನ್ನೆ ಅಶೋಕ್ ರೈಲು ನಿಲ್ದಾಣಕ್ಕೆ ತೆರಳಿದ್ದರೆ, ಇಂದು ಸುರೇಶ್ ಕುಮಾರ್ ಅವರು ರೈಲು ನಿಲ್ದಾಣಕ್ಕೆ ಹೋಗಿ, ತಮ್ಮ ಸಾಮಾನು ಸರಂಜಾಮು ಜೊತೆಗೆ ರೈಲಿಗಾಗಿ ಕಾದು ಕುಳಿತಿದ್ದ ನೂರಾರು ಅಸ್ಸಾಂ ಜನತೆಯನ್ನು ಭೇಟಿ ಮಾಡಿ ಅವರ ಮನವೊಲಿಸಲು ಪ್ರಯತ್ನಿಸಿದರು.
ಇದೇ ಸಂದರ್ಭದಲ್ಲಿ, ಅಸ್ಸಾಂ ಜನರು ಬೆಂಗಳೂರು ಬಿಟ್ಟು ತೆರಳಬಾರದು, ಅವರಿಗೆ ಯಾವುದೇ ಸಂಘಟನೆಯಿಂದ ಬೆದರಿಕೆ ಬಂದಿದ್ದರೂ ಅವರನ್ನು ರಕ್ಷಿಸುವ ಭಾರ ತಮ್ಮದು ಎಂದು ಬೆಂಗಳೂರಿನ ಸ್ಟುಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್ ಅಸ್ಸಾಂ ಬಂಧುಗಳಿಗೆ ಕರೆ ನೀಡಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಕೂಡ ಬುಧವಾರ ರೈಲು ನಿಲ್ದಾಣಕ್ಕೆ ತೆರಳಿ ಅಸ್ಸಾಂ ಜನರ ಮನವೊಲಿಸಲು ಪ್ರಯತ್ನ ನಡೆಸಿದ್ದರು.












Click it and Unblock the Notifications