ಅಸ್ಸಾಂ ವಿದ್ಯಾರ್ಥಿಗಳಲ್ಲಿ ಭೀತಿ ಬಿತ್ತಿದವರು ಯಾರು?

ಅಖಿಲ ಅಸ್ಸಾಂ ವಿದ್ಯಾರ್ಥಿಗಳ ಸಂಘಟನೆ, ಈ ಬೆದರಿಕೆ ಕರೆಯ ಹಿಂದೆ ಅಲ್ಪಸಂಖ್ಯಾತರ ನಾಯಕ ಅಖಿಲ ಭಾರತ ಯುನೈಟೆಡೆ ಡೆಮಾಕ್ರೆಟಿಕ್ ಫ್ರಂಟ್ನ ಅಧ್ಯಕ್ಷ ಬದಾರುದ್ದಿನ್ ಅಜ್ಮಲ್ ಎಂಬಾತನೇ ಬೆಂಗಳೂರು ಮತ್ತಿತರ ರಾಜ್ಯಗಳಲ್ಲಿರುವ ಅಸ್ಸಾಂ ವಿದ್ಯಾರ್ಥಿಗಳಲ್ಲಿ ಭೀತಿಯನ್ನು ಬಿತ್ತುತ್ತಿದ್ದಾನೆ ಎಂದು ಆರೋಪಿಸಿರುವುದು ಫಸ್ಟ್ ಪೋಸ್ಟ್ ತಾಣದಲ್ಲಿ ವರದಿಯಾಗಿದೆ.
ಅಜ್ಮಲ್ನೇ ಬೆದರಿಕೆಯೊಡ್ಡುವ ಎಸ್ಎಮ್ಎಸ್ ರವಾನಿಸುತ್ತಿದ್ದು, ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ತೀವ್ರ ಆತಂಕಕ್ಕೀಡಾಗಿರುವ ಅಸ್ಸಾಂ ವಿದ್ಯಾರ್ಥಿಗಳು ತವರೂರಿಗೆ ಮರಳುತ್ತಿದ್ದಾರೆ ಎಂದು ವಿದ್ಯಾರ್ಥಿ ಸಂಘಟನೆ ಹೇಳಿದೆ. ಅಸ್ಸಾಂನಲ್ಲಿ ನಡೆಯುತ್ತಿರುವ ಗಲಭೆಗೆ ಕೋಮು ಬಣ್ಣ ಬಳಿಯಲು ಅಜ್ಮಲ್ ಯತ್ನಿಸಬಾರದು ಮತ್ತು ವಿದ್ಯಾರ್ಥಿಗಳು ಬೇರೆ ರಾಜ್ಯಗಳಿಂದ ಮರಳಲು ಕುಮ್ಮಕ್ಕು ನೀಡಬಾರದು ಎಂದು ಎಚ್ಚರಿದೆ.
ಬೆಂಗಳೂರಿನಿಂದ ಅಸ್ಸಾಂಗೆ ಯಾಕೆ ಮರಳುತ್ತಿದ್ದೇವೆ ಎಂಬ ಬಗ್ಗೆ ಅನೇಕರಿಗೆ ಖಚಿತವಾದ ಮಾಹಿತಿ ಮತ್ತು ನಿರ್ಧಾರವಿಲ್ಲ. ಮರಳದಂತೆ ಯಾರು ಎಷ್ಟೇ ಪ್ರಯತ್ನ ಮಾಡಿದರೂ ಸಮೂಹ ಸನ್ನಿಗೆ ಒಳಗಾದವರಂತೆ ಇನ್ನೂ ಸಾವಿರಕ್ಕೂ ಹೆಚ್ಚು ಜನರು ಅಸ್ಸಾಂಗೆ ಮರಳಲು ಬೆಂಗಳೂರು ರೈಲು ನಿಲ್ದಾಣದಲ್ಲಿ ಬೆಂಗಳೂರು-ಗುವಾಹಾಟಿ ರೈಲಿಗಾಗಿ ಕಾಯುತ್ತಿದ್ದಾರೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್ ಸುರೇಶ್ ಕುಮಾರ್ ಅವರು ಸ್ವತಃ ರೈಲು ನಿಲ್ದಾಣಕ್ಕೆ ಹೋಗಿ ಅಸ್ಸಾಂ ವಿದ್ಯಾರ್ಥಿಗಳ ಮನವೊಲಿಸಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಅಸ್ಸಾಂಗೆ ತೆರಳದಂತೆ ಆರೆಸ್ಸೆಸ್ ಮತ್ತು ಮುಸ್ಲಿಂ ಸಂಘಟನೆಯ ನಾಯಕರು ಕೂಡ ಮನವಿ ಮಾಡಿಕೊಂಡಿದ್ದಾರೆ.
ಪಚಾವೋ ಸಭೆ : ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಿರ್ದೇಶನದ ಮೇರೆಗೆ ಪೊಲೀಸ್ ಮಹಾನಿರ್ದೇಶಕ ಲಾಲ್ರೊಖುಮಾ ಪಚಾವೋ ಅವರ ಕಚೇರಿಯಲ್ಲಿ ಗುರುವಾರ ಸಂಜೆ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ, ಕಾಂಗ್ರೆಸ್ ನಾಯಕರಾದ ರೋಶನ್ ಬೇಗ್, ಹ್ಯಾರಿಸ್, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಾಧಿಕಾರಿಗಳು ಭಾಗವಹಿಸಿದ್ದರು.
"ಬೆಂಗಳೂರಿನಲ್ಲಿ ಯಾವುದೇ ಗಲಭೆ ನಡೆದಿಲ್ಲ. ಜನರು ಹೆದರಿ ಅಸ್ಸಾಂಗೆ ತೆರಳುವ ಅಗತ್ಯವಿಲ್ಲ. ಬೆಂಗಳೂರು ಸುರಕ್ಷಿತವಾಗಿದ್ದು, ಅಸ್ಸಾಂ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಲಾಗುವುದು. ಒಂದು ವೇಳೆ ಬೆದರಿಕೆ ಕರೆ ಬಂದರೆ ಕೂಡಲೆ ಪೊಲೀಸರಿಗೆ ದೂರು ನೀಡಬೇಕು. ಇಂಥ ಬೆದರಿಕೆಯ ಎಸ್ಎಮ್ಎಸ್ ಹರಡುತ್ತಿರುವವರು ಯಾರು ಎಂಬ ಬಗ್ಗೆ ತನಿಖೆ ನಡೆಸಿದ್ದೇವೆ" ಎಂದು ಪಚಾವೋ ಅವರು ಅಸ್ಸಾಂ ಜನರಿಗೆ ಅಭಯ ನೀಡಿದ್ದಾರೆ.












Click it and Unblock the Notifications