ಅಸ್ಸಾಂ ಜನತೆಗೆ ಬೆಂಗಳೂರು ಪೊಲೀಸರ ಅಭಯ

Karnataka urge northeast people not to leave Bangalore
ಬೆಂಗಳೂರು, ಆ. 16 : ನಗರದ ಎಲ್ಲಾ ಪ್ರದೇಶಗಳ ಗಲ್ಲಿಗಲ್ಲಿಗಳಿಗೂ ತೆರಳಿ ಎಲ್ಲೆಲ್ಲಿ ಅಸ್ಸಾಂ ರಾಜ್ಯದ ವಿದ್ಯಾರ್ಥಿಗಳು, ನಿವಾಸಿಗಳು ಬೀಡುಬಿಟ್ಟಿದ್ದಾರೆಂದು ಪೊಲೀಸರು ಗುರುವಾರ ಬೆಳಗ್ಗಿನಿಂದಲೇ ಪರೀಕ್ಷಿಸುತ್ತಿದ್ದಾರೆ. ಅವರು ಈಶಾನ್ಯ ಭಾರತದ ನಿವಾಸಿಗಳನ್ನು ಪರೀಕ್ಷಿಸುತ್ತಿರುವುದು ಯಾರ ಮೇಲೂ ಕ್ರಮ ತೆಗೆದುಕೊಳ್ಳಲಿಕ್ಕಲ್ಲ, ಅವರಿಗೆ ಅಭಯ ನೀಡಲಿಕ್ಕೆ.

ಅಸ್ಸಾಂನಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಪ್ರತೀಕಾರವಾಗಿ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ನಿವಾಸಿಗಳ ಮೇಲೆ ದಾಳಿ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿರುವ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಈಶಾನ್ಯ ಭಾರತದ ನಿವಾಸಿಗಳು ಗುಳೆ ಕೀಳುತ್ತಿದ್ದಾರೆ. ರಂಜಾನ್ ಮುಗಿದ ನಂತರ ಬೆಂಗಳೂರಿನಲ್ಲಿ ನೆಲೆಸಿರುವ ಅಸ್ಸಾಂ ನಿವಾಸಿಗಳನ್ನು ಹತ್ಯೆಗೈಯಲಾಗುವುದು ಎಂಬ ಸಂದೇಶಗಳು ಮೊಬೈಲ್ ಎಸ್ಎಮ್ಎಸ್ ಮುಖಾಂತರ ಹರಿದಾಡುತ್ತಿರುವುದು ಇದಕ್ಕೆ ಕಾರಣವಾಗಿದೆ.

ವಿದ್ಯಾರ್ಥಿಗಳ ಸಂಖ್ಯೆಯೇ ಇಲ್ಲಿ ಅಧಿಕವಾಗಿದೆ. ಈಗಾಗಲೆ ಸುಮಾರು 5 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಗುವಾಹಾಟಿಗೆ ರೈಲು ಹತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ, ಇವರು ಗುಳೆ ಕೀಳದಂತೆ ತಡೆಯುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಕರ್ನಾಟಕ ಸರಕಾರ ಯತ್ನಿಸುತ್ತಿದೆ. ಪ್ರಧಾನಿ ಮನಮೋಹನ ಸಿಂಗ್ ಕೂಡ ಮುಖ್ಯಮಂತ್ರಿ ಶೆಟ್ಟರ್ ಅವರೊಂದಿಗೆ ಮಾತನಾಡಿ ವಿಷಯ ತಿಳಿದುಕೊಂಡಿದ್ದಾರೆ.

ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಗೃಹ ಸಚಿವ ಆರ್ ಅಶೋಕ್, ಪೊಲೀಸ್ ಮಹಾನಿರ್ದೇಶಕ ಲಾಲ್‌ರೊಖುಮಾ ಪಚಾವೋ ಅವರು, ಯಾವುದೇ ಹೆದರಿಕೆಯಿಲ್ಲದೆ ಇಲ್ಲಿಯೇ ಇರುವಂತೆ ಈಗಾಗಲೆ ಕರೆ ನೀಡಿದ್ದಾರೆ. ಆರ್ ಅಶೋಕ್ ಅವರು ಸ್ವತಃ ಮೆಜೆಸ್ಟಿಕ್‌ನಲ್ಲಿರುವ ರೈಲು ನಿಲ್ದಾಣಕ್ಕೆ ತೆರಳಿ, ಜನರು ಗಾಳಿಸುದ್ದಿಗೆ ಕಿವಿಗೊಡಬಾರದು, ಬೆಂಗಳೂರು ಅತ್ಯಂತ ಸುರಕ್ಷಿತವಾಗಿದ್ದು, ಎಲ್ಲರಿಗೂ ಎಲ್ಲ ರೀತಿಯ ರಕ್ಷಣೆ ನೀಡವುದಾಗಿ ವಾಗ್ದಾನ ನೀಡಿದ್ದಾರೆ.

ಬೆಂಗಳೂರು ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು, ನಗರದ ಗಲ್ಲಿಗಲ್ಲಿಗಳಿಗೆ ತೆರಳಿ ಜನರಿಗೆ ಅಭಯ ನೀಡುವಂತೆ ಪೊಲೀಸರಿಗೆ ಆಜ್ಞೆ ನೀಡಿದ್ದರು. ಪೊಲೀಸ್ ಅಧಿಕಾರಿಗಳು ಕೂಡ ಎಲ್ಲ ಪ್ರದೇಶಗಳಿಗೆ ತೆರಳಿ ಈಶಾನ್ಯ ಭಾರತದ ಜನರು ಎಲ್ಲಿ ನೆಲೆಸಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡು, ಅವರನ್ನು ಭೇಟಿಯಾಗಿ ತಮ್ಮ ಊರಿಗೆ ತೆರಳದಂತೆ ಮನವೊಲಿಸಲು ಯತ್ನಿಸುತ್ತಿದ್ದಾರೆ.

ಇಷ್ಟಾದರೂ ಅಲ್ಲಿನ ಜನರಲ್ಲಿನ ಹೆದರಿಕೆ ಸಂಪೂರ್ಣ ಅಳಿಸಿಲ್ಲ. ಇಲ್ಲಿ ದಾಳಿಯಾಗುವುದಕ್ಕಿಂತ, ಅಸ್ಸಾಂನಲ್ಲಿ ತಮ್ಮ ಸ್ನೇಹಿತರು, ಬಂಧುಗಳು ಸುರಕ್ಷಿತವಾಗಿದ್ದಾರೆಯೇ ಎಂಬುದನ್ನು ತಿಳಿಯಲು ಅಲ್ಲಿಗೆ ತೆರಳುತ್ತಿದ್ದಾರೆ. ಇಲ್ಲಿ ದಾಳಿಯಾಗುವ ಹೆದರಿಕೆ ಇದ್ದಿದ್ದರಿಂದ ಅಲ್ಲಿಗೆ ತೆರಳುತ್ತಿರುವುದಾಗಿ ಅನೇಕರು ಒಪ್ಪುತ್ತಿಲ್ಲ. ರೈಲ್ವೆ ಇಲಾಖೆ ಕೂಡ ಐದು ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳನ್ನು ವಿತರಿಸಿದ್ದು, ಅಸ್ಸಾಂಗೆ ತೆರಳುವವರಿಗೆ ವಿಶೇಷ ರೈಲು ವ್ಯವಸ್ಥೆ ಕೂಡ ಮಾಡಿದೆ.

ಕೆಲ ದಿನಗಳ ಹಿಂದೆ, ಅಸ್ಸಾಂನಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಳ್ಳುರಿಯನ್ನು ವಿರೋಧಿಸಿ ಮುಂಬೈನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಆ ಸಮಯದಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಸತ್ತು ಐವತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ನೂರಕ್ಕೂ ಹೆಚ್ಚು ವಾಹನಗಳು ಜಖಂ ಆಗಿದ್ದವು. ಮಾಧ್ಯಮದವರ ಮೇಲೆ ಹಲ್ಲೆ ಮಾಡಲಾಗಿತ್ತು. ಬೆಂಗಳೂರಿನಲ್ಲಿಯೂ ಅದೇ ಬಗೆಯ ಹಿಂಸಾಚಾರ ಭುಗಿಲೇಳಬಹುದು ಎಂಬ ಹೆದರಿಕೆ ಈಶಾನ್ಯ ಭಾರತದ ಜನರಲ್ಲಿ ಮನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+