ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮುಲು ಹೇಳಿಕೆಯಿಂದ ರಾಮುಲು ಬಂಧನ ಸನ್ನಿಹಿತ

By Srinath
|
Google Oneindia Kannada News

bailgate-somashekar-tells-acb-sriramulu-mediated-bribe
ಬೆಂಗಳೂರು, ಆ.7: ಜಾಮೀನಿಗಾಗಿ ಜಡ್ಜುಗಳಿಗೆ ಲಂಚ ತಿನ್ನಿಸಿದ ಪ್ರಕರಣದಲ್ಲಿ ನಿನ್ನೆಯಷ್ಟೇ ಬಂಧನಕ್ಕೊಳಗಾದ ಬಳ್ಳಾರಿ ನಗರದ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಸಮೀಪದ ಗ್ರಾಮಾಂತರ ಶಾಸಕ ಬಿ. ಶ್ರೀರಾಮುಲುವಿನತ್ತ ಸರಿಯಾಗಿ ಮುಳುಗುನೀರು ಹರಿಸಿದ್ದಾರೆ. ತತ್ಫಲವಾಗಿ ಪ್ರಕರಣದಲ್ಲಿ ಮುಂದಿನ ಬಂಧನ ಶ್ರೀರಾಮುಲು ಎಂಬುದರ ಬಗ್ಗೆ ಆಂಧ್ರದ ACBಗೆ ಯಾವುದೇ ಅನುಮಾನ ಉಳಿದಿಲ್ಲ.

ನಾಲ್ಕು ದಿನಗಳಿಂದ ಆಂಧ್ರದ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಿಂದ ನಿರಂತರ ವಿಚಾರಣೆಗೆ ಗುರಿಯಾದ 'ಗೋ ಪಾಲಕ' ಸೋಮಶೇಖರ ರೆಡ್ಡಿ ವಿಚಾರಣಧೀನ ಕೈದಿಯಾಗಿ (ನಂ. 7272) ಚೆರ್ಲಪಲ್ಲಿ ಜೈಲುಪಾಲಾಗುವುದಕ್ಕೂ ಮುನ್ನ ಪ್ರಕರಣದ ಬಗ್ಗೆ ಒಂದಷ್ಟು ವಿಷಯಗಳಿಗೆ ನಿಖರತೆ ನೀಡಿದ್ದಾರೆ. ಈ ಮಧ್ಯೆ, ಸೋಮ ರೆಡ್ಡಿಗೆ ಆಗಸ್ಟ್ 17ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಹೆಚ್ಚಲಿ ಹಣ: ಮೊಟ್ಟಮೊದಲನೆಯದಾಗಿ ನನಗೂ ಮುನ್ನ ಬಂಧಿಯಾದ ಕಂಪ್ಲಿ ಶಾಸಕ ಬಾಬು ಹೇಳಿರುವಂತೆ ಲಂಚದ ಮೊತ್ತ ಕೇವಲ 20 ಕೋಟಿ ಅಲ್ಲ. ಏಕೆಂದರೆ ನನ್ನ ತಮ್ಮುಡು ಜನಾರ್ದನ ರೆಡ್ಡಿಯ ಜಾಮೀನು ಪಡೆಯುವುದಕ್ಕೆ ಲಂಚ ನೀಡಿದ್ದು 25 ಕೋಟಿ ರುಪಾಯಿ. ಆದರೆ ಈ ಹೆಚ್ಚಲಿ ಹಣದ ಬಗ್ಗೆ ಕಂಪ್ಲಿ ಬಾಬು ಬಳಿ ಚರ್ಚಿಸಲಿಲ್ಲ. ಹಾಗಾಗಿ ಅವರಿಗೆ ಇದೆಲ್ಲ ತಿಳಿದಿಲ್ಲ. Infact ನಮ್ಮ ಆಪತ್ಭಾಂಧವುಡು ಶ್ರೀರಾಮುಲು ಮತ್ತು ನನ್ನ ಮಧ್ಯೆ ಈ ಹೆಚ್ಚಲಿ ಮೊತ್ತದ ಬಗ್ಗೆ ಚರ್ಚೆಗಳು ನಡೆದವು ಎಂದು ಹೇಳುವ ಮೂಲಕ ನೇರವಾಗಿ ಶ್ರೀರಾಮುಲು ಅವರನ್ನೂ ಪ್ರಕರಣಕ್ಕೆ ಎಳೆದು ತಂದಿದ್ದಾರೆ.

ಅಷ್ಟೇ ಅಲ್ಲ. ಸೋಮಶೇಖರ ರೆಡ್ಡಿಗಾರು ಆಂಧ್ರ ಪ್ರದೇಶದ ಸಚಿವರೊಬ್ಬರನ್ನೂ ಪ್ರಕರಣದಲ್ಲಿ ಎಳೆದು ತಂದಿದ್ದಾರೆ. Infact ಈ ಹೆಚ್ಚಲಿ ಹಣವನ್ನು ನೀಡಿದ್ದೇ ಆ ಸಚಿವರಿಗೆ ಎಂದಿದ್ದಾರೆ. ಆದರೆ ಆ ಸಚಿವರು ಯಾರು ಎಂಬುದರ ಬಗ್ಗೆ ಸೋಮ ರೆಡ್ಡಿ ಜಪ್ಪಯ್ಯ ಅಂದರೂ ಬಾಯ್ಬಿಟ್ಟಿಲ್ಲ. ಬಹುಶಃ ಅವರು ರೆಡ್ಡಿಯ ದೂರದ ಬಂಧುವೂ ಆಗಿರುವ ಆಂಧ್ರದ ಕಾನೂನು ಸಚಿವ ಆಗಿರಬಹುದು ಎಂಬ ಗುಮಾನಿಯಿದೆ.

ಬೇಲ್ ಡೀಲ್ ಸಂಪೂರ್ಣವಾಗಿ ಈ ಆಂಧ್ರ ಸಚಿವರ ಮಾರ್ಗಸೂಚಿಯಲ್ಲೇ ನಡೆದಿದೆ. ತೆರೆಮರೆಯಲ್ಲಿದ್ದ ಆ ಸಚಿವರೇ ಇಡೀ ಡೀಲ್ ಪ್ರಕರಣವನ್ನು ನಿರ್ವಹಿಸಿದ್ದಾರೆ. ಆದರೆ ಆ ಸಚಿವರ ಹೆಸರು ಕೂಡ ನನಗೆ ಗೊತ್ತಿಲ್ಲ. ಏಕೆಂದರೆ ಅವರೊಂದಗೆ ಸಂಪರ್ಕದಲ್ಲಿದ್ದವರು ನಮ್ಮ ಆಪತ್ಭಾಂಧವುಡು ಶ್ರೀರಾಮುಲು ಮಾತ್ರವೇ. ನನ್ನೊಂದಿಗೆ ಯಾವುದೇ ಸಂದರ್ಭದಲ್ಲಿ ಆ ಸಚಿವರು ಸಂಪರ್ಕ ಮಾಡಿಲ್ಲ.

ಶ್ರೀರಾಮುಲು ಉವಾಚ: 'ನಾನು ಸಚಿವರೊಂದಿಗೆ ಮಾತನಾಡಿದ್ದೇನೆ. ನೀವು ಹೋಗಿ ಮಧ್ಯವರ್ತಿ ಮೂಲಕ ಆ ಸಚಿವರಿಗೆ ಹಣ ತಲುಪಿಸಿ ಎಂದಷ್ಟೇ ರಾಮುಲು ಹೇಳಿದ್ದರು. ರಾಮುಲು ಹೇಳಿದಂತೆ ನಾವು ಕೇಳಿದೆವು ಅಷ್ಟೇ ಎಂದು ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ACB ಮುಂದೆ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆದರೆ ನ್ಯಾಯಾಲಯದ ಆದೇಶದ ಬಳಿಕ ಚೆರ್ಲಪಲ್ಲಿ ಜೈಲಿಗೆ ತೆರಳುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ ರೆಡ್ಡಿ ಬೇರೆಯದೇ ಕತೆ ಹೇಳಿದ್ದಾರೆ. 'ನಾನು ವಿಚಾರಣೆ ವೇಳೆ ಪೊಲೀಸರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದೆ. ಆದರೂ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ನಾನು ಯಾವುದೇ ತಪ್ಪೊಪ್ಪಿಗೆ ಹೇಳಿಕೆ ನೀಡಿಲ್ಲ. ಆದರೆ ಎಸಿಬಿ ಪೊಲೀಸರು ಬಲವಂತವಾಗಿ ನನ್ನ ಸಹಿ ಪಡೆದು ತಪ್ಪೊಪ್ಪಿಗೆ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ' ಎಂದು ಆರೋಪಿಸಿದರು.

ತಪ್ಪು ಮಾಡ್ಬಿಟ್ವಿ: ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕನಸೂ ಕಾಣದಿದ್ದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ನಾವು ಬಹಳ ಶ್ರಮ ಪಟ್ಟಿದ್ದೆವು. ಆದರೆ ಈಗಿನ ಪಕ್ಷದ ಸ್ಥಿತಿ ನೋಡಿದರೆ ನಾವು ಬಿಜೆಪಿ ಸೇರಿ ಮತ್ತು ಪಕ್ಷವನ್ನು ಅಧಿಕಾರಕ್ಕೆ ತಂದು ಬಹಳ ತಪ್ಪು ಮಾಡಿದೆವು ಎಂದೆನಿಸುತ್ತಿದೆ' ಎಂದು ಸೋಮಶೇಖರ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ತಾವು ಜೈಲುಪಾಲಾಗುತ್ತಿರುವ ಘಳಿಗೆಯಲ್ಲಿ ಬಿಜೆಪಿ ಮಂದಿಯನ್ನು ಸೋಮ ರೆಡ್ಡಿ ಏಕೆ ನೆನಪು ಮಾಡಿಕೊಂಡರೋ ಅರ್ಥವಾಗದ ಪ್ರಶ್ನೆಯಾಗಿದೆ.

English summary
The Bellary BJP MLA Somashekar Reddy who is arrested by the ACB sleuths in Hyderabad in the alleged bribe-for-bail case has told ACB that it was his MLA friend Sriramulu who mediated the bribe episode.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X