ಕಿರಿಕ್ ನಿತ್ಯಾನಂದನಿಂದ ಹೈಕೋರ್ಟ್ಗೆ ಮೇಲ್ಮನವಿ

ನ್ಯಾಯಾಲಯಗಳಲ್ಲಿ ತನ್ನ ವಿರುದ್ಧ ಕೇಸು ದಾಖಲಾಗುತ್ತಿದ್ದಂತೆ ವಿಚಾರಣೆಗೆ ತಪ್ಪಿಸಿಕೊಳ್ಳಲು ಬಿಡದಿ ಆಶ್ರಮದ ಈ ಮಹಾಪ್ರಭುಗಳು ಏನೆಲ್ಲ ಆಟವಾಡುತ್ತಾರೆ ಎಂಬುದನ್ನು ಈಗಾಗಲೇ ದಟ್ಸ್ ಕನ್ನಡ ಎಳೆಎಳೆಯಾಗಿ ಬಿಡಿಸಿಟ್ಟಿದೆ. ಸುಮ್ಮನೆ ಸುಮ್ಮನೆ ಮೇಲ್ಮನವಿ ಸಲ್ಲಿಸುವುದೇನು, ಸಾಕ್ಷಿಗಳನ್ನು ಬೆದರಿಸುವುದೇನು, ಅವರಿಗೆ ಆಮಿಷವೊಡ್ಡುವುದೇನು, ಅನಾರೋಗ್ಯದ ನೆಪ ಹೇಳುವುದೇನು, ಕೊನೆಗೆ ಯಾವುದೂ ಬರಕತ್ತಾಗಲಿಲ್ಲವೆಂದರೆ ಧಾರ್ಮಿಕತೆಯ ಹೆಸರಿನಲ್ಲಿ ನಾನು ಮಾನಸ ಸರೋವರಕ್ಕೆ ಹೋಗ್ತಿದ್ದೇನೆ ಏನ್ ಬೇಕಾದ್ರೂ ಮಾಡ್ಕಳ್ಳಿ ಎಂದು ಕಳ್ಳಾಟಗಳು ಆಡುವುದನ್ನು ನೀವು ಬಲ್ಲಿರಿ.
ಮಾನವ ಕುಲಕೋಟಿ ನಿತ್ಯಾನಂದ ಮೆಡಿಕಲ್ ಟೆಸ್ಟ್ ಫಲಿತಾಂಶಕ್ಕೆ ಕಾಯುತ್ತಿದೆ: ಈಗಲೂ ಅಷ್ಟೇ! ಅಯ್ಯಾ ಅದೇನೋ ಸಿಐಡಿದವರು ಕೇಳುತ್ತಿದ್ದಾರೆ, ಜುಲೈ 30ರಂದು ಮೆಡಿಕಲ್ ಟೆಸ್ಟ್ ಮಾಡಿಸ್ಕೋ ಅಂತ ರಾಮನಗರ ಜೆಎಂಎಫ್ ಸಿ ಕೋರ್ಟ್ ಜೂನ್ 12ರಂದು ಸೂಚಿಸಿದ್ದರೂ, ಇವಯ್ಯ ಜಪ್ಪಯ್ಯ ಅನ್ನುತ್ತಿಲ್ಲ. ಮತ್ತೆ ಅದೇ ಟ್ರಿಕ್ಕು ಬಳಸುತ್ತಿದ್ದಾರೆ. 'ಆಗಸ್ಟ್ 25ರ ನಂತರ ಯಾವುದೇ ದಿನವಾದರೂ ಧ್ವನಿ ಮತ್ತು ರಕ್ತ ಪರೀಕ್ಷೆಗೆ ಸಿದ್ಧವಿದ್ದೇನೆ' ಎಂದು ಸ್ವಾಮಿಗಳು ರಾಮನಗರ ಜಿಲ್ಲಾ ಸಿಜೆಎಂ ನ್ಯಾಯಾಲಯಕ್ಕೆ ಜುಲೈ 30ಕ್ಕೆ ಮುನ್ನಾ ದಿನ ಅವಲತ್ತುಕೊಂಡಿದ್ದರು.
ಈ ಮಧ್ಯೆ, ವೈದ್ಯಕೀಯ ಪರೀಕ್ಷೆಗೀಡಾಗಬೇಕಾದ ಮುಜುಗರದಿಂದ ತಪ್ಪಿಸಿಕೊಳ್ಳಲು ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಗಳು ರಾಮನಗರ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಸೋಮವಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
time please ನಿಂದ time pass: ತನ್ನನ್ನು ಪುರುಷತ್ವದ ಪರೀಕ್ಷೆಗೆ ಒಳಪಡಿಸುವಂತೆ ರಾಮನಗರ ಜೆಎಂಎಫ್ ಸಿ ಕೋರ್ಟ್ ಹೊರಡಿಸಿರುವ ಆದೇಶವನ್ನೇ ರದ್ದು ಮಾಡುವಂತೆ ನಿತ್ಯಾನಂದ ಮಾಹಾಸ್ವಾಮೀಜಿ ಕೋರಿದ್ದಾರೆ. ಅಲ್ಲಿಗೆ ಇನ್ನು ಹೈಕೋರ್ಟಿನಲ್ಲಿ ಇದರ ವಾದ-ಪ್ರತಿವಾದಕ್ಕೆ ಒಂದಷ್ಟು ಕಾಲಹರಣ. ಮುಂದೊಂದು ದಿನ ಕೋರ್ಟ್ ಏನು ಆದೇಶ ನೀಡುತ್ತದೋ ಆಗ ನೋಡಿಕೊಂಡರಾಯ್ತು. ಅಲ್ಲಿವರೆಗೂ time pass ಮಾಡಿದರಾಯ್ತು ಎಂಬುದು ಪ್ರಭುಗಳ ಲೆಕ್ಕಾಚಾರ. ಆದರೆ ಇಡೀ ಮಾನವ ಕುಲಕೋಟಿ ನಿತ್ಯಾನಂದ ಪ್ರಭುವಿನ ಮೆಡಿಕಲ್ ಟೆಸ್ಟ್ ಫಲಿತಾಂಶಕ್ಕಾಗಿ ತುದಿಗಾಲಲ್ಲಿ ನಿಂತು ಕುತೂಹಲದಿಂದ ಕಾಯುತ್ತಿದೆ. ಜೈ ಹೋ ನ್ಯಾಯದೇವತೆ!
ನಟಿ ರಂಜಿತಾ ಜತೆ ರಾಸಲೀಲೆ ನಡೆಸಿದ ದೂರಿಗೆ ಸಂಬಂಧಿಸಿದಂತೆ ನಿತ್ಯಾನಂದ ಸ್ವಾಮಿ, ತಮ್ಮ ದೇಹ ಬೆಳೆದಿದ್ದರೂ ಮನಸ್ಸು ಮತ್ತು ನಡವಳಿಕೆ 6 ವರ್ಷದ ಬಾಲಕನ ರೀತಿಯಲ್ಲಿದೆ. ಇದರಿಂದಾಗಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ತನಗೆ ಸಾಧ್ಯವಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ನಿತ್ಯಾನಂದ ಸ್ವಾಮಿಯ ಧ್ವನಿ ಮತ್ತು ರಕ್ತ ಪರೀಕ್ಷೆಗೆ ಅವಕಾಶ ಕೋರಿ ಸಿಐಡಿ ಪೊಲೀಸರು ಕೋರ್ಟ್ ಮೊರೆಹೋಗಿದ್ದರು.












Click it and Unblock the Notifications