ಎಸ್ಸೆಸ್ಸೆಲ್ಸಿ ಬೋರ್ಡ್ ಎಡವಟ್ಟು; ವಿದ್ಯಾರ್ಥಿಗಳು ಕಂಗಾಲು
2009ನೇ ಸಾಲಿನಲ್ಲಿ ಪಾಸಾದ ಸಂದರ್ಭದಲ್ಲಿ ನೀಡಿದ ಅಂಕಪಟ್ಟಿಯಲ್ಲಿ ಅವರ ಹುಟ್ಟಿದ ದಿನಾಂಕವನ್ನು 01.06.1992ಗೆ ಬದಲಾಗಿ 01-06-1990 ಎಂದು ತಪ್ಪಾಗಿ ನಮೂದಿಸಲಾಗಿದೆ. ಮಂಡಳಿಯ ಪ್ರಮಾದ ಗೊತ್ತಾದ ನಂತರ ಶಾಲೆಯವರು ಮೂಲ ಅಂಕಪಟ್ಟಿಯಲ್ಲಿ ತಿದ್ದುಪಡಿಗಾಗಿ ಮಂಡಳಿಗೆ ಕಳಿಸಿಕೊಟ್ಟಿದ್ದಾರೆ. ಈ ಘಟನೆ ನಡೆದು 2 ವರ್ಷಗಳು ಗತಿಸಿದರೂ ಕೂಡಾ ಮೂಲ ಅಂಕಪಟ್ಟಿ ತಿದ್ದುಪಡಿಯಾಗಿ ಬಂದಿಲ್ಲ.
ಇತ್ತ ಅಂಕಪಟ್ಟಿಯ ಜೆರಾಕ್ಸ್ ಪ್ರತಿಯ ಅನ್ವಯ ಪಿಯುಸಿ ಹಾಗೂ ಬೇರೆ ಬೇರೆ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ಈಗ ಎಸ್ಸೆಸ್ಸೆಲ್ಸಿಯ ಮೂಲ ಅಂಕಪಟ್ಟಿ ಒದಗಿಸುವಂತೆ ಆಯಾ ಕಾಲೇಜು ಮಂಡಳಿಗಳು ಹೇಳಿದ್ದರಿಂದ ವಿದ್ಯಾರ್ಥಿಗಳು ಸಂಕಟಕ್ಕೆ ಸಿಲುಕಿ ಮಾದ್ವಾರ ಗ್ರಾಮದ ಶಾಲೆಗೆ ವರ್ಷವಿಡಿ ಅಲೆದಿದ್ದಾರೆ.
ಆದರೆ ಶಾಲೆಯವರು ಏನೇನೂ ಸಬೂಬು ಹೇಳಿ ಕಳಿಸಿದ್ದಾರೆಯೇ ಹೊರತು ಪರಿಹಾರ ಕಂಡುಕೊಂಡಿಲ್ಲ. ಈ ನಡುವೆ ಹಲವಾರು ಮುಖ್ಯ ಶಿಕ್ಷಕಕರು ಹಾಗೂ ಶಿಕ್ಷಕರು ವರ್ಗಾವಾಗಿ ಹೋಗಿದ್ದಾರೆ. ಆದರೆ ವಿದ್ಯಾರ್ಥಿಗಳ ಸಂಕಟ ಇನ್ನೂ ಪರಿಹಾರವಾಗಿಲ್ಲ. ಮೂಲ ಅಂಕಪಟ್ಟಿಯಲ್ಲಿನ ಅನಗತ್ಯ ಗೊಂದಲದಿಂದಾಗಿ ಈಗ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಲ್ಲು ಬಿದ್ದಂತಾಗಿದೆ ಎನ್ನುವ ಆರೋಪ ವಿದ್ಯಾರ್ಥಿಗಳದ್ದು.
ಯಾದಗಿರಿ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದೆ ಎನ್ನುವ ಅಸಮಾಧಾನ ಹಾಗೂ ಆರೋಪ ಎರಡೂ ಒಟ್ಟಿಗೆ ಇದ್ದು ಸರ್ಕಾರದ ದಿವ್ಯ ನಿರ್ಲಕ್ಷ್ಯವೂ ಇದಕ್ಕೆ ಕಾರಣವಾಗಿದೆ ಎನ್ನುವುದಕ್ಕೆ ಈ ಅಂಕಪಟ್ಟಿಯ ಅವಾಂತರವೇ ತಾಜಾ ನಿದರ್ಶನ. ಅಸಮರ್ಪಕ ಮೂಲಭೂತ ಸೌಲಭ್ಯ ಹಾಗೂ ಪೂರ್ವ ತಯಾರಿ ಹೊಂದಿಲ್ಲದ ಮತ್ತು ಕಾಟಾಚಾರಕ್ಕೆ ಎನ್ನುವಂತೆ ಇಲ್ಲಿಗೆ ವರ್ಗವಾಗಿ ಬರುವ ಶಿಕ್ಷಕರಿಗೇನು ಕೊರತೆಯಿಲ್ಲ.
ಹಾಗಾಗಿ ಪ್ರತಿ ವರ್ಷವೂ ಫಲಿತಾಂಶದ ಜೊತೆಗೆ ಈಗ ಅಂಕಪಟ್ಟಿ ಅವಾಂತರವಾಗಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯವೂ ತೂಗುಯ್ಯಾಲೆಯಲಿ ಸಾಗಿದೆ. ಮೂಲ ಅಂಕಪಟ್ಟಿ ತಿದ್ದುಪಡಿ ಮಾಡಿಸಿ ತರಿಸುವಲ್ಲಿ ಈಗಿನ ಮುಖ್ಯ ಶಿಕ್ಷಕಿ ವೀಣಾ ತುಂಬಾ ಪ್ರಯತ್ನ ಪಟ್ಟಿರುವುದಾಗಿ ಹೇಳುತ್ತಾರೆ. ಅಲ್ಲದೇ ಅಂಕಪಟ್ಟಿ ಸಿಗುವವರೆಗೂ ಪ್ರಯತ್ನ ಮುಂದುವೆರಸುವುದಾಗಿ ಅವರು ಹೇಳುತ್ತಾರೆ.
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚಲ್ಲಾಟವಾಡುತ್ತಿರುವ ಮಂಡಳಿ ಈ ಕುರಿತು ಗಂಭೀರವಾಗಿ ಯೋಚಿಸಬೇಕಾಗಿದೆ. ಆಗಿರುವ ಪ್ರಮಾದಕ್ಕೆ ಕೂಡಲೇ ಸರಿಪಡಿಸಲಿ. ಹುಟ್ಟಿದ ದಿನಾಂಕವನ್ನು ಸರಿಯಾಗಿ ನಮೂದಿಸಿ ಮೂಲ ಅಂಕಪಟ್ಟಿಯನ್ನು ದೊರಕಿಸಿ ಕೊಡಲಿ ಎನ್ನುವುದು ವಿದ್ಯಾರ್ಥಿಗಳ ಆಗ್ರಹ. ಮಂಡಳಿ ಈಗಲಾದರೂ ಈ ವಿದ್ಯಾರ್ಥಿಗಳ ಕಷ್ಟಕ್ಕೆ ಸ್ಪಂದಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. (ನೊಂದ ವಿದ್ಯಾರ್ಥಿಗಳು: ನಾಗಪ್ಪ, ಅಶೋಕ, ವಿಜಯಲಕ್ಷ್ಮಿ)