ಮಂಗಳೂರು ದಾಳಿ : ಮೊದಲು ಪೊಲೀಸರಿಗೆ ತಿಳಿಸಿ

ಜುಲೈ 29ರಂದು ಸಂಜೆ ಮಂಗಳೂರಿನ ಹೊರವಲಯದಲ್ಲಿರುವ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇಗೆ ಹಿಂದೂ ಜಾಗರಣ ಸಮಿತಿಯವರು ನುಗ್ಗಿ ಯುವಕ ಯುವತಿಯರ ಮೇಲೆ ದಾಳಿ ನಡೆಸಿದ್ದರು. ಇದನ್ನು ಖಾಸಗಿ ವಾಹಿನಿ ಚಿತ್ರೀಕರಿಸಿ ಪ್ರಸಾರ ಮಾಡಿತ್ತು. ಈ ಘಟನೆಯನ್ನು ಹೈಕೋರ್ಟ್ ತೀವ್ರವಾಗಿ ಟೀಕಿಸಿದೆ. ಈ ಮೂಲಕ, ಈ ಬಗೆಯ ಘಟನೆಗಳನ್ನು ಚಿತ್ರೀಕರಿಸಿ ಎಗ್ಗುಸಿಗ್ಗಿಲ್ಲದೆ ಪ್ರಸಾರ ಮಾಡಿದ ಎಲ್ಲ 8 ಖಾಸಗಿ ಟಿವಿ ವಾಹಿನಿಗಳಿಗೆ ಕರ್ನಾಟಕ ಹೈಕೋರ್ಟ್ ಸ್ಪಷ್ಟ ಸಂದೇಶ ರವಾನಿಸಿದೆ.
ಪೂರ್ವನಿರ್ಧಾರಿತವಾಗಿ ನಡೆಸುವ ಹಿಂಸಾತ್ಮಕ ದಾಳಿಗೆ ಪ್ರಚಾರ ನೀಡುವ ಮೂಲಕ ಉತ್ತೇಜನ ನೀಡಬೇಡಿ. 'ಅನೈತಿಕ' ಚಟುವಟಿಕೆ ನಡೆಯುತ್ತಿದೆ ಎಂದು ದಾಳಿ ನಡೆಸುವವರು, ಮತ್ತು ಅಂತಹ ಘಟನೆಗಳನ್ನು ಚಿತ್ರೀಕರಿಸುವ ಸಿಬ್ಬಂದಿಗಳ ಬಗ್ಗೆ ಪೊಲೀಸರಿಗೆ ವಿವರ ನೀಡಬೇಕು ಎಂದು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿಕ್ರಂಜಿತ್ ಸೇನ್ ಮತ್ತು ನ್ಯಾ. ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಗುರುವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಸುವಾಗ ಹೇಳಿದೆ.
ಎಲ್ಲ ಖಾಸಗಿ ಟಿವಿ ವಾಹಿನಿಗಳು ಹಿಂಸಾತ್ಮಕ ಘಟನೆಯನ್ನು ಉತ್ತೇಜಿಸುತ್ತಿವೆ. ಅಂತಹ ಘಟನೆಗಳ ಚಿತ್ರೀಕರಣ ಮತ್ತು ಪ್ರಸಾರವನ್ನು ತಡೆಹಿಡಿಯಲು ನಿರ್ದೇಶನ ನೀಡಬೇಕು ಎಂದು ಶಕೀಲ್ ಅಹ್ಮದ್ ಮತ್ತಿತರರು ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ನೋಟಿಸ್ ಕಳಿಸಲಾಗಿದ್ದರೂ ಟಿವಿ9, ನ್ಯೂಸ್9 ಇಂಗ್ಲಿಷ್, ಸಮಯ ನ್ಯೂಸ್, ಕಸ್ತೂರಿ ನ್ಯೂಸ್, ಜನಶ್ರೀ ನ್ಯೂಸ್ ಚಾನಲ್ ಪ್ರತಿನಿಧಿಗಳು ಕೋರ್ಟಿಗೆ ಬಂದಿರಲಿಲ್ಲ. ಸುವರ್ಣ ನ್ಯೂಸ್ 24/7 ಪರ ವಕೀಲರು ಪ್ರತಿರೋಧಿಸಿದಾಗ, ಅಫಿಡವಿಟ್ ಸಲ್ಲಿಸಲು ನ್ಯಾಯಮೂರ್ತಿಗಳು ಆದೇಶಿಸಿದರು.
ಅರ್ಜಿದಾರರು ತಮ್ಮ ಅರ್ಜಿಯಲ್ಲಿ ರಾಮನಗರದ ಬೆಥಾನಿ ಶಾಲೆಯಲ್ಲಿ ನಡೆದ ಘಟನೆಯನ್ನು ಪ್ರಸ್ತಾಪಿಸಿದ್ದು, ಇಂತಹ ಘಟನೆಗಳಿಂದ ದೌರ್ಜನ್ಯಕ್ಕೊಳಗಾದವರ ಮಾನ ಹಾನಿಗೀಡಾಗುತ್ತಿದೆ ಮತ್ತು ದಾಳಿ ಮಾಡುವವರಿಗೆ ಪ್ರಚೋದಿಸುತ್ತಿವೆ ಎಂದು ವಾದಿಸಿದ್ದಾರೆ. ಇವುಗಳ ಪ್ರಸಾರದಿಂದ ಸಮಾಜದ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ಹೇಳಿದ್ದಾರೆ. ಮುಂದಿನ ವಿಚಾರಣೆಯನ್ನು ಆಗಸ್ಟ್ 13ಕ್ಕೆ ಮುಂದೂಡಲಾಗಿದೆ.












Click it and Unblock the Notifications