ಮಂಗಳೂರು ದಾಳಿ: ಯಡಿಯೂರಪ್ಪ ಏನನ್ನುತ್ತಾರೆ?
ವಿಧಾನಸೌಧದಲ್ಲಿ ನಿನ್ನೆ ಸೋಮವಾರ ಈ ಬಗ್ಗೆ ಯಡಿಯೂರಪ್ಪ ಮಾತನಾಡಿದ್ದಾರೆ. ದಾಳಿಯನ್ನು ಖಂಡಿಸಿ ಪಕ್ಷಾತೀತವಾಗಿ ಎಲ್ಲರೂ ಕಿಡಿಕಾರುತ್ತಿದ್ದಾಗ ಯಡಿಯೂರಪ್ಪನವರು ಒಮ್ಮೆಲೇ ಚೀರಾಡಿದ್ದಾರೆ.
ಬೆಳಗ್ಗೆ ಸದನದ ಕಲಾ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿ ಎಸ್ ನಾಯಕ ರೇವಣ್ಣ ವಿಷಯ ಪ್ರಸ್ತಾಪಿಸಿದರು. ಮಂಗಳೂರಿನ ಘಟನೆ ಬಗ್ಗೆ ಮಾತನಾಡಲು ಸ್ಪೀಕರ್ ಬೋಪಯ್ಯ ಶೂನ್ಯವೇಳೆಯಲ್ಲಿ ಚರ್ಚೆಗೆ ಅವಕಾಶ ನೀಡಿದರು. ಆ ಸಂದರ್ಭದಲ್ಲಿ ಯಡಿಯೂರಪ್ಪ ಅವರೂ ಪ್ರತಿಪಕ್ಷಗಳ ಬೆಂಬಲಕ್ಕೆ ನಿಂತರು.
ಪ್ರತಿಪಕ್ಷ ನಾಯಕರ ಮಾತಿನ ಮಧ್ಯೆಯೇ ಎದ್ದುನಿಂತ ಯಡಿಯೂರಪ್ಪ, 'ಇದೊಂದು ಅಮಾನುಷ ಕೃತ್ಯ. ನಾಗರಿಕ ಸಮಾಜದಲ್ಲಿ ಇಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ. ಅಲ್ಲಿ ನಡೆದದ್ದು ರೇವ್ ಪಾರ್ಟಿ ಅಲ್ಲ ಎಂಬುದು ತನಿಖೆಯಿಂದ ಖಚಿತವಾಗಿದೆ. ಯುವತಿಯರಮೇಲೆ ದೌರ್ಜನ್ಯ ನಡೆಸಿದವರು ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿ' ಎಂದು ಗುಡುಗಿದರು.
'ಈ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾದರೆ ಮುಂದೆ ಯಾರೂ ಇಂತಹ ದುಸ್ಸಾಹಸಕ್ಕೆ ಕೈಹಾಕುವುದಿಲ್ಲ. ನಮ್ಮ ಮಕ್ಕಳೇ ಇಂತಹ ಕೃತ್ಯ ಎಸಗಿದರೂ ಸಹಿಸಬಾರದು. ಅಂತಹ ಕ್ರಮವನ್ನು ಮುಖ್ಯಮಂತ್ರಿಯವರು ಕೈಗೊಳ್ಳಬೇಕು. ಅವರು ಕೈಗೊಳ್ಳುತ್ತಾರೆ. ಇಡೀ ಸದನ ಈ ಘಟನೆಯನ್ನು ಖಂಡಿಸಬೇಕು' ಎಂದೂ ಯಡಿಯೂರಪ್ಪ ಹೇಳಿದರು.
ತಾಲೀಬಾನಿಗಳು- ಸಿಟಿ ರವಿ: ಮಂಗಳೂರು ಘಟನೆಯನ್ನು ತೀವ್ರವಾಗಿ ಖಂಡಿಸಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸಿಟಿ ರವಿ ಅವರು ತಾಲೀಬಾನ್ ಮಾದರಿಯ ದಾಳಿ ಇದಾಗಿದೆ. ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಅವರು ಯಾವುದೇ ಸಂಘಟನೆಗೆ ಸೇರಿದವರಾಗಿರಲಿ ಶಿಕ್ಷೆಗೆ ಗುರಿಪಡಸಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದರು.