ವಿದ್ಯುತ್ : ಉತ್ತರದ ಕತ್ತಲೆ ಛಾಯೆ ಕರ್ನಾಟಕದ ಮೇಲೆ

ಕರ್ನಾಟಕದಲ್ಲೂ ವಿದ್ಯುತ್ ಸಮಸ್ಯೆ ಆರಂಭಕ್ಕೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಟೈಮರ್ ಸೆಟ್ ಮಾಡಿದ್ದಾರೆ. ಇನ್ನು 15 ದಿನಗಳಲ್ಲಿ ಹೊರಗಿನಿಂದ ವಿದ್ಯುತ್ ಖರೀದಿ ಸಾಧ್ಯವಾಗದಿದ್ದರೆ ಕತ್ತಲೆಯಲ್ಲಿ ಬಾಳಲು ಕಲಿಯಿರಿ ಎಂಬಂಥ ಸಂದೇಶ ಪ್ರಕಾಶಮಾನವಾಗಿ ಹೊರಬಿದ್ದಿದೆ.
ಈ ಬಾರಿ ಕರ್ನಾಟಕಕ್ಕೆ ಗ್ರಿಡ್ ಸಮಸ್ಯೆ, ಕಲ್ಲಿದ್ದಲು ಸಮಸ್ಯೆ ಕಾಡುತ್ತಿಲ್ಲ. ಮಳೆ ಸಮಸ್ಯೆ, ವಿದ್ಯುತ್ ಶೇಖರಣೆ, ಪ್ರಸರಣಾ ವ್ಯವಸ್ಥೆ ವ್ಯತ್ಯಯಗೊಂಡಿದೆ. ಈ ಸಲ ಮಳೆ ಸರಿಯಾಗಿ ಬೀಳದಿರುವ ಕಾರಣ ರಾಜ್ಯದ ವಿವಿಧ ಜಿಲ್ಲೆಗಳು ಮುಂಗಾರು ವೈಫಲ್ಯ ಅನುಭವಿಸಿದೆ.
ಲಿಂಗನಮಕ್ಕಿ ಜಲಾಶಯದಲ್ಲಿ ಜಲಾಶಯಗಳಲ್ಲಿ 30 ಟಿಎಂಸಿ ನೀರು ಮಾತ್ರ ಇದೆ. ಪರಿಸ್ಥಿತಿ ಹೀಗೆ ಮುಂದೆವರೆದರೆ ಭೀಕರ ವಿದ್ಯುತ್ ಕ್ಷಾಮ ಎದುರಾಗಲಿದೆ ಎಂದು ಶೋಭಾ ಕರಂದ್ಲಾಜೆ ಎಚ್ಚರಿಸಿದ್ದಾರೆ.
ಕಳೆದ ವರ್ಷಕ್ಕಿಂತ ಈ ವರ್ಷ ರಾಜ್ಯದ ವಿದ್ಯುತ್ ಬೇಡಿಕೆ ಶೇ. 24 ರಷ್ಟು ಹೆಚ್ಚಿದೆ. ರಾಜ್ಯದ ಜಲಾಶಯ ಭರ್ತಿಯಾಗಿಲ್ಲ. ವಿದ್ಯುತ್ ಖರೀದಿಸಲು ಕಾರಿಡಾರ್ ಸಮಸ್ಯೆ ಎದುರಾಗುತ್ತಿದೆ. ಸೌರಶಕ್ತಿ ವಿದ್ಯುತ್ ಉತ್ಪಾದನೆಗೆ ಸರಿಯಾಗಿ ಚಾಲನೆ ಸಿಕ್ಕಿಲ್ಲ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಗೋಳು ತೋಡಿಕೊಂಡಿದ್ದಾರೆ.
ಉತ್ತರದ ಸಮಸ್ಯೆ: ದೆಹಲಿ, ಉತ್ತರಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಒರಿಸ್ಸಾ, ಪಂಜಾಬ್, ಜಾರ್ಖಂಡ್, ಬಿಹಾರ, ಹರ್ಯಾಣ, ಹಿಮಾಚಲ ಪ್ರದೇಶ ಮತ್ತು ಉತ್ತರಾಂಚಲ ರಾಜ್ಯಗಳ ಜನಜೀವನ ಅಸ್ತವ್ಯಸ್ತಗೊಂಡಿದೆ.
ವಿದ್ಯುತ್ ಸಮಸ್ಯೆ ಗ್ರಿಡ್ ದುರಸ್ತಿ ಕಾರ್ಯ ಪೂರ್ಣಗೊಳ್ಳಲು ಇನ್ನೂ 10ರಿಂದ 12 ತಾಸು ಬೇಕಾಗಬಹುದು ಎಂದು ಕೇಂದ್ರ ಇಂಧನ ಸಚಿವಾಲಯ ಹೇಳಿದೆ. ಎನ್ ಟಿಪಿಸಿ ಸ್ಥಾವರಗಳು ಸ್ಥಗಿತಗೊಂಡಿರುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ.
35,000 MW ಸಾಮರ್ಥ್ಯದ ಗ್ರಿಡ್ ಜಾಲದಲ್ಲಿ ಬಿರುಕು ಮೂಡಿದ್ದು ಹೇಗೆ ಎಂದು ಕಂಡು ಹಿಡಿಯುವಲ್ಲಿ ಇಲಾಖೆ ಮೈಮರೆತ ಪರಿಣಾಮ ಉತ್ತರ ಭಾರತದಲ್ಲಿ ವಿದ್ಯುತ್, ನೀರು ಸರಬರಾಜು, ಸಾರಿಗೆ ಸಂಚಾರ, ಟ್ರಾಫಿಕ್ ಸಿಗ್ನಲ್ ಗಳು ಸ್ತಬ್ಧವಾಗಿದೆ. ದಿಲ್ಲಿ ಮೆಟ್ರೋ ರೈಲು ನಿಂತಿರುವುದರಿಂದ ಸಾವಿರಾರು ಮಂದಿಯ ಕೈ ಕಾಲು ಕಟ್ಟಿ ಹಾಕಿದ್ದಂತಾಗಿದೆ.
ವಿದ್ಯುತ್ ಪೂರೈಕೆ ವ್ಯತ್ಯಯದಿಂದ ಸಣ್ಣ ಪುಟ್ಟ ಸರ್ಕಾರಿ ಆಸ್ಪತ್ರೆಗಳು ಕಷ್ಟಪಡುತ್ತಿದೆ. ಸಫ್ದರ್ಜಂಗ್ ಹಾಗೂ ಏಮ್ಸ್ ನಂಥ ಆಸ್ಪತ್ರೆಗಳು ಭೂತನ್ ನಿಂದ ಹೈಡಲ್ ಪವರ್ ವಿದ್ಯುತ್ ಪೂರೈಕೆಗೆ ಮನವಿ ಇಟ್ಟಿದೆ. ರೈಲು ಸಂಚಾರ ವ್ಯತ್ಯಯವಾಗಿದ್ದರಿಂದ ನಷ್ಟಗೊಂಡಿರುವ ಟಿಕೆಟ್ ಕೊಂಡ ಪ್ರಯಾಣಿಕರಿಗೆ ಹಣ ಮರುಪಾವತಿ ಮಾಡುವ ಭರವಸೆಯನ್ನು ನೀಡಲಾಗಿದೆ.












Click it and Unblock the Notifications