ವಿದ್ಯಾರ್ಥಿನಿಯರಿಗೆ ಹಿಂದಿ ಶಿಕ್ಷಕನಿಂದ ಲೈಂಗಿಕ ಕಿರುಕುಳ
ವಿಜಯನಗರದಲ್ಲಿರುವ ಸಿದ್ಧಗಂಗಾ ವಿದ್ಯಾಸಂಸ್ಥೆಗೆ ಸೇರಿದ ಸಂಗಮೇಶ ವಿದ್ಯಾಕೇಂದ್ರ ಪ್ರೌಢಶಾಲೆಯಲ್ಲಿ ಹಿಂದಿ ವಿಷಯ ಕಲಿಸುತ್ತಿದ್ದ ಎಚ್.ಜಿ. ಬಸವರಾಜ್ ಎಂಬಾತನೇ ಪರಾರಿಯಾಗಿರುವ ಕಾಮುಕ ಶಿಕ್ಷಕ. ಈ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಕುಮಾರ್ ಎಂಬುವವರು ಈ ಸಂಗತಿ ಗೊತ್ತಿದ್ದೂ ಮೂಕಪ್ರೇಕ್ಷಕರಾದ ಆರೋಪ ಎದುರಿಸುತ್ತಿದ್ದಾರೆ.
ಬಸವರಾಜ ಜುಲೈ 5ರಂದು, ಅಂದ್ರೆ ಕೇವಲ 23 ದಿನಗಳ ಹಿಂದೆಯಷ್ಟೇ ಶಾಲೆ ಸೇರಿದ್ದ. ಸೇರಿದ ಮೊದಲ ದಿನದಿಂದಲೇ ತನ್ನ ಕಾಮದಾಟವನ್ನು ಪ್ರಾರಂಭಿಸಿದ್ದ. 8 ಮತ್ತು 9ನೇ ತರಗತಿಯ ವಿದ್ಯಾರ್ಥಿನಿಯನ್ನು ತನ್ನ ಕೊಠಡಿಗೆ ಕರೆಸಿಕೊಂಡು ತೊಡೆಯ ಮೇಲೆ ಕೂಡಿರೆಂದು ಪೀಡಿಸುತ್ತಿದ್ದ ಎಂದು ವಿದ್ಯಾರ್ಥಿನಿಯರ ಪೊಲೀಸರು ದೂರಿದ್ದಾರೆ.
ಈ ವಿಷಯವನ್ನು ಮುಖ್ಯೋಪಾಧ್ಯಾಯರಾದ ಶಿವಕುಮಾರ್ ಅವರ ಗಮನಕ್ಕೆ ತಂದಾಗ, ಈ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ವಿದ್ಯಾರ್ಥಿನಿಯರಿಗೆ ಬೆದರಿಸಿ ಕಳಿಸಿದ್ದರೆಂದು ಪೋಷಕರು ಆರೋಪಿಸಿದ್ದಾರೆ. ಬಸವರಾಜನ ಉಪಟಳ ಜಾಸ್ತಿಯಾದಾಗ ಪೋಷಕರು ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರು ನೀಡಿದ್ದು ತಿಳಿಯುತ್ತಿದ್ದಂತೆ ಬಸವರಾಜ ಶಾಲೆಯಿಂದಲೇ ಪರಾರಿಯಾಗಿದ್ದಾನೆ. ಪೋಷಕರೆಲ್ಲರು ಜಯಕರ್ನಾಟಕ ಕನ್ನಡ ಸಂಘಟನೆಯ ಕಾರ್ಯಕರ್ತರೊಂದಿಗೆ ಶನಿವಾರ ಶಾಲೆಗೆ ಆಗಮಿಸಿದಾಗ ಹಿಂದಿ ಶಿಕ್ಷಕ ಬಸವರಾಜ ಶಾಲೆಯಲ್ಲಿ ಇಲ್ಲದಿರುವುದು ಕಂಡುಬಂದಿದೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಬಸವರಾಜನ ಹುಡುಕಾಟದಲ್ಲಿ ತೊಡಗಿದ್ದಾರೆ.
ಸಂಪಿಗೆ ಬಿದ್ದು ಮಗು ಬಲಿ : ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ತೆರೆದಿಡಲಾಗಿದ್ದ ನೀರಿನ ಸಂಪಿಗೆ 3 ವರ್ಷದ ಮಗುವೊಂದು ಬಿದ್ದು ಮೃತಪಟ್ಟ ದಾರುಣ ಘಟನೆ ನಗರದ ಕೋಡಿಗೆಹಳ್ಳಿಯಲ್ಲಿ ಶನಿವಾರ ನಡೆದಿದೆ. ಪವನ್ ಎಂಬ ಮಗುವೇ ಸಾವಿಗೀಡಾದ ದುರ್ದೈವಿ. ವೆಂಕಟೇಶ್ ಎಂಬುವವರಿಗೆ ಸೇರಿದ ಕಟ್ಟಡದ ಸಂಪಿಗೆ ಬಿದ್ದು ಮಗು ಮೃತಪಟ್ಟಿದೆ.
ಸಂಪು ತೆರೆದಿಟ್ಟ ಬಗ್ಗೆ ವೆಂಕಟೇಶ್ ಅವರಿಗೆ ದೂರು ನೀಡಲಾಗಿತ್ತಾದರೂ ಅವರು ನಿರ್ಲಕ್ಷ್ಯ ವಹಿಸಿದ್ದರೆಂದು ಮಗುವಿನ ಪೋಷಕರು ದೂರಿದ್ದಾರೆ. ಆಟವಾಡುತ್ತ ಪವನ್ ಸಂಪಿಗೆ ಬಿದ್ದಿದ್ದಾನೆ. ಇದು ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮಗುವಿನ ಪೋಷಕರು ಅವನನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಕೆಲ ದಿನಗಳ ಹಿಂದೆ ಬನ್ನೇರುಘಟ್ಟದಲ್ಲಿಯೂ ಇಂಥದೇ ಘಟನೆ ಸಂಭವಿಸಿತ್ತು. ಪೋಷಕರು ಮತ್ತು ಕಟ್ಟಡ ಮಾಲಿಕರ ನಿರ್ಲಕ್ಷ್ಯದಿಂದ ಒಂದು ಮಗು ಸಂಪಿಗೆ ಬಿದ್ದು ಅಸುನೀಗಿತ್ತು.