ಟೆಕ್ಕಿ ಪವನ್ ದೇಹಕ್ಕೆ ಕೊನೆಗೂ ಅಂತ್ಯಸಂಸ್ಕಾರ
ಬುಧವಾರ ಮುಂಜಾನೆ 3.30ರ ಸುಮಾರಿಗೆ ಇಂಡಿಯನ್ ಏರ್ ಲೈನ್ಸ್ ವಿಮಾನದಲ್ಲಿ ಅಮೆರಿಕದ ನ್ಯೂಜೆರ್ಸಿಯಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪವನ್ ಶವ ತರಲಾಯಿತು. ನಂತರ ಆರ್ ಟಿ ನಗರದ ಆನಂದ ನಗರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಪಾರ್ಥಿವ ಶರೀರ ಇಡಲಾಗಿತ್ತು. ಬಳಿಕ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು.
ಕಳೆಬರಹ ಕಂಡು ಪವನ್ ತಾಯಿ ರಂಗರತ್ನಮ್ಮ ಹಾಗೂ ಅಕ್ಕ ಗುಣಶೀಲರ ಆಕ್ರಂದನ ಮುಗಿಲು ಮುಟ್ಟಿತ್ತು. ಮಾಜಿ ಸಚಿವ ಎ. ಕೃಷ್ಣಪ್ಪ, ಸ್ಥಳೀಯ ಮುಖಂಡರು, ಬಂಧುಗಳು, ಪವನ್ ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ನೆರೆ ಹೊರೆಯವರು ಅಂತಿಮ ದರ್ಶನ ಪಡೆದರು.
ನ್ಯೂಜೆರ್ಸಿಯ ಆರೋಗ್ಯ ಇಲಾಖೆ ನೀಡಿರುವ ಮರಣ ಪ್ರಮಾಣದಲ್ಲಿ ಪವನ್ ಸಾವಿಗೆ ಖಚಿತ ಕಾರಣ ನಮೂದಿಸಿಲ್ಲ. ಪವನ್ ಸಾವಿಗೆ ಕಾರಣವೇನು ? ಎಂಬ ಕಲಂನಲ್ಲಿ ಮುಂದಿನ ಅಧ್ಯಯನಕ್ಕಾಗಿ ಕಾಯಲಾಗುತ್ತಿದೆ ಎಂದು ಹೇಳಲಾಗಿದೆ. ಅಲ್ಲದೆ, ಯಾವ ರೀತಿ ಮೃತಪಟ್ಟಿದ್ದಾನೆ ಎಂಬ ಕಲಂನಲ್ಲಿ ತನಿಖೆ ಬಾಕಿಯಿದೆ ಎಂದು ಹೇಳಲಾಗಿದೆ. ಇದರಿಂದ ಪವನ್ ಮೃತಪಟ್ಟು 22 ದಿನಗಳಾದರೂ ಆತನ ಸಾವಿಗೆ ಕಾರಣ ಏನೆಂಬು ಖಚಿತ ನಿರ್ಧಾರಕ್ಕೆ ಬರುವಲ್ಲಿ ಅಮೆರಿಕಾ ಪೊಲೀಸರು ವಿಫಲರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಈ ಮಧ್ಯೆ ಪವನ್ ಬರೆದಿರುವ ಮೂರು ಪುಟಗಳ ಮರಣ ಮುನ್ನ ಬರೆದ ಪತ್ರವನ್ನು (ಡೆತ್ನೋಟ್) ಕಳುಹಿಸಲು ಕನಿಷ್ಠ 14 ರಿಂದ 18 ವಾರಗಳ ಕಾಲಾವಕಾಶ ನೀಡಬೇಕೆಂದು ಅಮೆರಿಕಾ ಅಧಿಕಾರಿಗಳು ಕೋರಿದ್ದಾರೆ. ಯಾವುದೇ ದಾಖಲೆಗಳು ನೀಡಿಲ್ಲ. ಪವನ್ ಸಾವಿಗೆ ಕಾರಣ ಇನ್ನೂ ನಿಗೂಢವಾಗಿದೆ. ಪವನ್ ಮರಣ ಮುನ್ನ ಬರೆದ ಪತ್ರ ಅಮೆರಿಕಾ ಪೊಲೀಸರು ಕಳುಹಿಸುವವರೆಗೂ ಕಾಯುತ್ತೇವೆ. ಇಲ್ಲವಾದರೆ, ಕಾನೂನು ಹೋರಾಟ ನಡೆಸಲಾಗುವುದು ಎಂದು ಪವನ್ ತಂದೆ ಪಿ.ಆಂಜಯ್ಯ ತಿಳಿಸಿದ್ದಾರೆ.