ಡಿಸಿಎಂ ಹುದ್ದೆ ನಿಭಾಯಿಸಲು ಸಿದ್ಧ: ಆರ್ ಅಶೋಕ್

ಇನ್ನೆರಡು ದಿನಗಳಲ್ಲಿ ರಾಜ್ಯ ಬಿಜೆಪಿ ಬಿಕ್ಕಟ್ಟು ಬಗೆಹರಿಯಲಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವರಿಷ್ಠರು ಕೆಲವು ಸೂತ್ರಗಳನ್ನು ಸಿದ್ದಪಡಿಸಿದ್ದಾರೆ ಎಂದು ಅಶೋಕ್ ತಿಳಿಸಿದರು.
ಶನಿವಾರ ಅಥವಾ ಭಾನುವಾರ ದೆಹಲಿಯಲ್ಲಿ ಸಭೆ ಸೇರಲಿರುವ ಪಕ್ಷದ ಸಂಸದೀಯ ಮಂಡಳಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಜಗದೀಶ್ ಶೆಟ್ಟರ್ ಅವರನ್ನು ನೇಮಕ ಮಾಡುವುದರ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಿದ್ದಾರೆ.
ನಂತರ ಶಾಸಕಾಂಗ ಪಕ್ಷದ ಸಭೆಯಲ್ಲಿ ಶೆಟ್ಟರ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿ ಸೋಮವಾರ(ಜು.9) ಅಥವಾ ಜು.11 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ನಡೆದಿದೆ.
ಉಪ ಮುಖ್ಯಮಂತ್ರಿ ಸಾಧ್ಯತೆ?: ಮೊದಲಿನಿಂದಲೂ ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ನಕಾರಾತ್ಮಕ ಹೇಳಿಕೆ ನೀಡುತ್ತಿರುವ ಬಿಜೆಪಿ ಹೈಕಮಾಂಡ್ ಈ ಬಾರಿ ಕೂಡಾ ಡಿಸಿಎಂ ಸೃಷ್ಟಿ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ. ಡಿಸಿಎಂ ಹುದ್ದೆ ಸೃಷ್ಟಿಸಿದರೆ ನನಗೆ ಮೊದಲ ಅವಕಾಶ ನೀಡಿ ಇಲ್ಲದಿದ್ದರೆ ಡಿಸಿಎಂ ಹುದ್ದೆ ಬೇಡವೇ ಬೇಡ ಎಂದು ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಖಡಾಖಂಡಿತವಾಗಿ ಹೇಳಿದ್ದಾರೆ.
ಹೀಗಾಗಿ ಆರ್ ಅಶೋಕ್ ಅವರು ಡಿಸಿಎಂ ಹುದ್ದೆಗೆ ತೀವ್ರ ಲಾಬಿ ನಡೆಸಬೇಕಾಗಿದೆ. ಬೆಂಗಳೂರಿನ ಶಾಸಕರು, ಸಚಿವರನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಶೋಕ್ ಗೆ ಹೊಸ ಸ್ಥಾನ ಕಲ್ಪಿಸಿದರೂ ಅಚ್ಚರಿ ಏನಿಲ್ಲ.
ಸದಾನಂದ ಗೌಡರ ಗತಿ ಏನು?: ಲಭ್ಯ ಮಾಹಿತಿ ಪ್ರಕಾರ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹಾಗೂ ಶಾಸಕ ಯಡಿಯೂರಪ್ಪ ಅವರಿಗೆ ಯಾವುದೇ ಸ್ಥಾನಮಾನದ ಬಗ್ಗೆ ವರಿಷ್ಠರು ಆಲೋಚಿಸಿಲ್ಲ. ಆದರೆ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಯಡಿಯೂರಪ್ಪ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಅಥವಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸುವ ಬಗ್ಗೆ ಚರ್ಚೆ ನಡೆದಿದೆ.ಹೀಗಾಗಿ ಯಡಿಯೂರಪ್ಪ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎದುರಿಸುವುದು ಖಾತ್ರಿಯಾಗಿದೆ.
ಪಕ್ಷದ ನಿಷ್ಠಾವಂತ ನಾಯಕ ಸದಾನಂದ ಗೌಡರಿಗೆ ರಾಜ್ಯಸಭೆಯಲ್ಲಿ ಸ್ಥಾನ ಕಲ್ಪಿಸಲು ಚಿಂತನೆ ನಡೆದಿದೆ. ಸದ್ಯಕ್ಕೆ ರಾಜ್ಯದ ಬಿಜೆಪಿ ಬಿಕ್ಕಟ್ಟು ಪರಿಹಾರವಾದ ಮೇಲೆ ಈ ಬಗ್ಗೆ ಚರ್ಚೆ ನಡೆಯಲಿದೆ. ಶೆಟ್ಟರ್ ಅವರು ಮುಖ್ಯಮಂತ್ರಿಯಾದ ಮೇಲೆ ಸಂಪುಟ ವಿಸ್ತರಣೆಯಲ್ಲೂ ಹೆಚ್ಚಿನ ಬದಲಾವಣೆ ಇಲ್ಲದೆ ಖಾಲಿ ಇರುವ 10-12 ಸ್ಥಾನ ಮಾತ್ರ ತುಂಬುವ ಕಾರ್ಯ ನಡೆಯಲಿದೆ.
ಸಂಘದ ನಾಯಕನಿಗೆ ಸಲಾಂ: ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ(ಜು.4) ಸಂಘ ಪರಿವಾರದ ಸಂಸ್ಥಾಪಕ ನಾಯಕ ಶ್ಯಾಮ ಪ್ರಸಾದ್ ಮುಖರ್ಜಿ ಅವರ 111ನೇ ಜನ್ಮ ಮಹೋತ್ಸವವನ್ನು ಆಚರಿಸಲಾಯಿತು. ಶ್ಯಾಮ ಪ್ರಸಾದ್ ಅವರ ಬೃಹತ್ ಚಿತ್ರಕ್ಕೆ ಗಡ್ಕರಿ ಅವರು ಮಾಲಾರ್ಪಣೆ ಮಾಡಿ ಸಂಘದ ಪರಿವಾರದ ಹಿರಿಯ ನಾಯಕನಿಗೆ ಗೌರವ ಸೂಚಿಸಿದರು.












Click it and Unblock the Notifications