ಶಿಕ್ಷಣ ಲಂಚ: ನ್ಯಾಯಾಂಗ ಬಂಧನಕ್ಕೆ ಸ್ವರ್ಣಲತಾ

ನಿನ್ನೆ ಏನಾಗಿತ್ತು?: ಶಿಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಮಹಿಳಾ ಅಧಿಕಾರಿಯೊಬ್ಬರು ಲಂಚಕ್ಕಾಗಿ ಕೈಯೊಡ್ಡಿದಾಗ red handed ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಶಿಕ್ಷಣ ಇಲಾಖೆಯಲ್ಲಿದ್ದುಕೊಂಡು ಸಾಕ್ಷಾತ್ ಸರಸ್ವತಿಯಾಗಬೇಕಿದ್ದ ಮಹಿಳಾ ಅಧಿಕಾರಿಯೇ ಲಂಚಕ್ಕಾಗಿ ಬಾಯ್ಬಿಟ್ಟಿದ್ದನ್ನು ಕಂಡು ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಮಧ್ಯಾಹ್ನ, ಲೋಕಾಯುಕ್ತ ಪೊಲೀಸರು ನಗರದ ಬಹುಮಹಡಿ ಕಟ್ಟಡದಲ್ಲಿನ (MS Building) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಉಪ ಕಾರ್ಯದರ್ಶಿ ಸ್ವರ್ಣಲತಾ ಎಂ. ಭಂಡಾರಿ ಅವರ ಕಚೇರಿ ಹಾಗೂ ನಿವಾಸದ ಮೇಲೆ ಏಕಕಾಲದಲ್ಲಿ ದಿಢೀರ್ ದಾಳಿ ನಡೆಸಿದರು. ಕಚೇರಿಯಲ್ಲಿದ್ದ ಸ್ವರ್ಣಲತಾರ ವ್ಯಾನಿಟಿ ಬ್ಯಾಗ್ನಲ್ಲಿ ರೂ 95,000 ಲಂಚದ ಹಣ ಇರಿಸಿಕೊಂಡಿದ್ದರು.
ಕುತೂಹಲದ ಸಂಗತಿಯೆಂದರೆ ಇದೇ MS Buildingನಲ್ಲಿ ಲೋಕಾಯುಕ್ತ ಕಚೇರಿ ಮತ್ತು ಲೋಕಾಯುಕ್ತ ಕೋರ್ಟ್ ಇದೆ!
ಲೋಕಾಯುಕ್ತ ಡಿವೈಎಸ್ಪಿಗಳಾದ ಗಿರೀಶ್ ಹಾಗೂ ಅಬ್ದುಲ್ ಅಹಮದ್ ನೇತೃತ್ವದ ಪೊಲೀಸರ ತಂಡ ಆಕೆಯ ಕಚೇರಿ ಹಾಗೂ ನಿವಾಸದ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಕಚೇರಿಯಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ವೇತನ ಬಿಡುಗಡೆ ಸಂಬಂಧದ ಕಡತ ವಿಲೇವಾರಿಗೆ ಲಂಚ ಸ್ವೀಕರಿಸುತ್ತಿದ್ದು, ಒಂದು ಕಡತ ವಿಲೇವಾರಿಗೆ 20 ಸಾವಿರ ರೂ. ನಂತೆ ಲಂಚ ಪಡೆಯುತ್ತಿದ್ದರು ಎಂಬುದು ವಿಚಾರಣೆಯಿಂದ ಪತ್ತೆಯಾಗಿದೆ.
'ಹಣ ಇರಿಸಿದ್ದ ಲಕೋಟೆಗಳೂ ಸ್ವರ್ಣಲತಾ ಕಚೇರಿಯಲ್ಲಿ ದೊರೆತಿವೆ. ಅವುಗಳಲ್ಲಿ ಲಂಚ ನೀಡಿದ ಶಿಕ್ಷಣ ಸಂಸ್ಥೆಯ ಹೆಸರು, ವಿಳಾಸ ಮತ್ತು ಆ ಸಂಸ್ಥೆಗೆ ಸಂಬಂಧಿಸಿದಂತೆ ಬಾಕಿ ಇರುವ ಕಡತದ ಸಂಖ್ಯೆಯನ್ನು ನಮೂದಿಸಲಾಗಿತ್ತು. ಲಕೋಟೆಗಳ ಮೇಲಿರುವ ಮಾಹಿತಿಯನ್ನು ಆಧರಿಸಿ ಸಂಬಂಧಿಸಿದ ಎಲ್ಲ ಕಡತಗಳನ್ನೂ ತನಿಖಾ ತಂಡ ವಶಕ್ಕೆ ಪಡೆದುಕೊಂಡಿದೆ. ಪ್ರಾಥಮಿಕ ವಿಚಾರಣೆಯ ಬಳಿಕ ಆರೋಪಿ ಸ್ವರ್ಣಲತಾರನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
'ರಾಜಾಜಿನಗರದಲ್ಲಿರುವ ಆರೋಪಿ ಮನೆ ಮೇಲೂ ದಾಳಿ ನಡೆಸಲಾಗಿದೆ. ನಗದು, ಚಿನ್ನಾಭರಣ, ಸ್ಥಿರಾಸ್ತಿ ಒಡೆತನದ ದಾಖಲೆಗಳು, ಬ್ಯಾಂಕ್ ಖಾತೆ ಪುಸ್ತಕಗಳ ಪರಿಶೀಲನೆ ಮುಂದುವರಿದಿದೆ. ಶೋಧ ಪೂರ್ಣಗೊಂಡ ಬಳಿಕ ಆರೋಪಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ನ್ಯಾ ಸುಧೀಂದ್ರರಾವ್ ಎದುರು ಹಾಜರುಪಡಿಸಲಾಗುವುದು' ಎಂದು ಅವರು ಹೇಳಿದ್ದಾರೆ.












Click it and Unblock the Notifications