ಭ್ರಷ್ಟಾಚಾರ ಕೇಸ್ : ಜಾಫರ್ ಶರೀಫ್ ಗೆ ಸುಪ್ರೀಂ ರಿಲೀಫ್
ನ್ಯಾ. ಪಿ ಸಾಥಾಶಿವಮ್ ಹಾಗೂ ನ್ಯಾ. ರಂಜನ್ ಗೊಗಾಯ್ ಅವರಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ಅಲ್ಲದೆ, ಮಾಜಿ ರೈಲ್ವೆ ಸಚಿವರ ಮೇಲಿನ ಪ್ರಕರಣದ ಬಗ್ಗೆ ಸ್ಪಷ್ಟನೆ ಕೋರಿ 2 ವಾರದಲ್ಲಿ ಉತ್ತರಿಸುವಂತೆ ಸಿಬಿಐಗೆ ನ್ಯಾಯಪೀಠ ನೋಟಿಸ್ ಜಾರಿ ಮಾಡಿದೆ.
1995 ರಲ್ಲಿ ಸಿಕೆ ಜಾಫರ್ ಶರೀಫ್ ಅವರು ಕೇಂದ್ರ ಸಚಿವರಾಗಿದ್ದಾಗ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಪ್ರಕರಣದ ತನಿಖೆ ಹಲವು ಬಾರಿ ಸ್ಥಗಿತಗೊಂಡಿತ್ತು. ಹೀಗಾಗಿ ಪ್ರಕರಣ ಮುಚ್ಚಿ ಹೋಗಲಿದೆ ಎಂಬ ಶಂಕೆ ವ್ಯಕ್ತವಾಗಿತ್ತು.
ಆದರೆ, ಸಿಬಿಐ ತಂಡ ಮಂಗಳವಾರ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಶೇಷ ಸಿಬಿಐ ನ್ಯಾ ಎನ್.ಕೆ. ಕೌಶಿಕ್ ಅವರು ಭ್ರಷ್ಟಾಚಾರ ತಡೆ ಕಾಯ್ದೆ ವಿವಿಧ ವಿಭಾಗಗಳ ಅಡಿಯಲ್ಲಿ ಜಾಫರ್ ಶರೀಫ್ ವಿರುದ್ಧ ವಿಚಾರಣೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದ್ದರು. ಅ.21ರಿಂದ ವಿಚಾರಣೆ ಪುನರಾರಂಭಿಸಲು ಸಿಬಿಐ ಮುಂದಾಗಿತ್ತು. ಆದರೆ, ಸುಪ್ರೀಂಕೋರ್ಟ್ ನ ತೀರ್ಪಿನಿಂದ ಸಿಬಿಐ ತನಿಖೆಗೆ ಹಿನ್ನಡೆ ಉಂಟಾಗಿದೆ.
ಪ್ರಕರಣದ ಹಿನ್ನೆಲೆ: 1995ರಲ್ಲಿ ಶರೀಫ್ ಅವರು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಲು ಲಂಡನ್ಗೆ ತೆರಳಿದ್ದರು.
ಆ ಸಂದರ್ಭದಲ್ಲಿ ತಮ್ಮ ಜತೆಯಲ್ಲಿ ಅಂದಿನ ಹೆಚ್ಚುವರಿ ಖಾಸಗಿ ಕಾರ್ಯದರ್ಶಿ ಬಿ.ಎನ್. ನಾಗೇಶ್, ಸ್ಟೆನೋಗಳಾದ ಎಸ್.ಎಂ ಮಸ್ತಾನ್, ವಿ. ಮುರುಳಿಧರನ್ ಮತ್ತು ಚಾಲಕ ಸಿ.ಎಚ್. ಸಾಮಾವುಲ್ಲಾ ಕರೆದೊಯ್ದಿದ್ದರು. ಆದರೆ, ಈ ನಾಲ್ವರನ್ನು ಲಂಡನ್ ಗೆ ಕರೆದುಕೊಂಡು ಹೋಗಲು ಸರ್ಕಾರದ ಪೂರ್ವಾನುಮತಿ ಪಡೆದಿರಲಿಲ್ಲ. ಅನಧಿಕೃತವಾಗಿ ಕರೆದುಕೊಂಡು ಹೋಗಿದ್ದರು. ಇದರಿಂದ ಸರ್ಕಾರದ ಬೊಕ್ಕಸಕ್ಕೆ 7 ಲಕ್ಷ ರೂ.ನಷ್ಟವುಂಟಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು.
ಈ ಕುರಿತು 1998ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐಗೆ ತನಿಖೆ ನಡೆಸಲು ಸರಿಯಾದ ಅನುಮತಿ ಸಿಕ್ಕಿರಲಿಲ್ಲ. ಹೀಗಾಗಿ ತನಿಖೆ ಕೈಬಿಡಲು ಸಿಬಿಐ ನಿರ್ಧರಿಸಿತ್ತು.
ಕುತೂಹಲದ ಸಂಗತಿ ಎಂದರೆ, ಸಿಬಿಐ ಸಲ್ಲಿಸುವ ದೋಷರೋಪ ಪಟ್ಟಿಯನ್ನು ಪುರಸ್ಕರಿಸದಂತೆ ಸುಪ್ರೀಂ ಕೋರ್ಟಿಗೆ ಜಾಫರ್ ಶರೀಫ್ ಮನವಿ ಸಲ್ಲಿಸಿದ್ದರು. ಆದರೆ. ಮೇ10, 2012ರಂದು ತಡೆ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್ ಸಿಬಿಐಗೆ ಪೂರಕವಾಗಿ ಆದೇಶ ನೀಡಿತ್ತು.
ಇದರಂತೆ ವಿವಿಧ ಭ್ರಷ್ಟಾಚಾರ ಪ್ರಕರಣಗಳ ಅಡಿಯಲ್ಲಿ ಜು.3ರಂದು ದೋಷರೋಪಣ ಪಟ್ಟಿ ಸಲ್ಲಿಸಿ, ತನಿಖೆಗೆ ಅನುಮತಿ ಪಡೆದಿದ್ದ ಸಿಬಿಐಗೆ ಸುಪ್ರೀಂ ಆದೇಶದಿಂದ ಮತ್ತೆ ಹಿನ್ನೆಡೆಯಾಗಿದೆ.