ರೆಡ್ಡಿ ಕಥೆ ಮುಗಿಯಿತು; ಲಕ್ಷ್ಮಿನಾರಾಯಣ ಕೈಗೆ ಪಟ್ಟಾಭಿ
ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಇದಕ್ಕೆ ತಥಾಸ್ತು ಅನ್ನುವ ಎಲ್ಲ ಸಾಧ್ಯತೆಯೂ ಇದೆ. ಅಲ್ಲಿಗೆ ಜನಾರ್ದನ ರೆಡ್ಡಿಯ ಕಥೆ ಮುಗಿಯಿತು. ನ ಭೂತೋ ನ ಭಿವಿಷ್ಯತ್ ಎಂಬಂತೆ ತಾನು ಯಾವ ನ್ಯಾಯಮೂರ್ತಿಯ ಮುಂದೆ ಕೈಕಟ್ಟಿಕೊಂಡು ತನಿಖಾ ವರದಿಯನ್ನು ಒಪ್ಪಿಸಬೇಕಿತ್ತೋ ಅದೇ ಜಡ್ಜ್ ನನ್ನು ತನ್ನ ಬಲೆಗೆ ಕೆಡವಿದ್ದೂ ಅಲ್ಲದೆ ಆತನನ್ನು ತನ್ನ ಎದುರಿಗೆ ಕೂರಿಸಿಕೊಂಡು ಒಂದೊಂದೇ ಪ್ರಶ್ನೆಗಳನ್ನು ಕೇಳುವ ಪರಿಸ್ಥಿತಿಯನ್ನೂ ನಿರ್ಮಿಸಿಬಿಟ್ಟಿದ್ದಾರೆ ಸಿಬಿಐ ಲಕ್ಷ್ಮಿನಾರಾಯಣ.
ಅಂದಹಾಗೆ, ಜಡ್ಜ್ ಪಟ್ಟಾಭಿ ಪ್ರಸ್ತುತ ಭ್ರಷ್ಟಾಚಾರ ನಿಗ್ರಹ ದಳದ (ACB) ಬಂಧನದಲ್ಲಿದ್ದಾರೆ. ಈ ಮಧ್ಯೆ, ಮೀಡಿಯಾ ಡಾರ್ಲಿಂಗ್ ಸಿಬಿಐ ಲಕ್ಷ್ಮಿನಾರಾಯಣರನ್ನು ಆಂಧ್ರ ಹೈಕೋರ್ಟ್ ಸ್ವಲ್ಪಮಟ್ಟಿಗೆ ಗದರಿಕೊಂಡಿದ್ದು, ಎಲ್ಲದಕ್ಕೂ ಮೀಡಿಯಾಗಳ ಮುಂದೆ ಹೋಗಬೇಡಿ. ನಿಮ್ಮ ಪಾಡಿಗೆ ನಿಮ್ಮ ಕೆಲಸ ಮಾಡಿ. ಜನ ಗುರುತಿಸುತ್ತಾರೆ ಎಂದು ಕಿವಿ ಹಿಂಡಿದೆ.
KMF ಸೋಮ ರೆಡ್ಡಿ ಬಂಧನ ಈಗ್ಲೋ ಆಗ್ಲೋ: ಜನಾರ್ದನ ರೆಡ್ಡಿಗೆ ಜೈಲು ಸಂಕಟ ಹೆಚ್ಚಾಗಿದೆ. ಏನಾದರೂ ಮಾಡಿ ತಮ್ಮನನ್ನು ಜೈಲಿನಿಂದ ಬಿಡಿಸಿಕೊಂಡು ಹೋಗಬೇಕೆಂದು ಬಂಡ ಅಣ್ಣ KMF ಸೋಮಶೇಖರ ರೆಡ್ಡಿಯನ್ನು ಯಾವುದೇ ಕ್ಷಣ ಸಿಬಿಐ ಲಕ್ಷ್ಮಿನಾರಾಯಣ ಬಂಧಿಸಬಹುದಾಗಿದೆ.
ಸಾಕ್ಷಾತ್ ನ್ಯಾಯಪುತ್ರರಿಗೇ ಲಂಚ ತಿನ್ನಿಸೋಕ್ಕೆ ಆಗುತ್ತೇನ್ರೀ ಎಂದು ಬಳ್ಳಾರಿಯಲ್ಲಿ ಅಮಾಯಕ ನಾಟಕವಾಡಿದ್ದ ಸೋಮಶೇಖರ ರೆಡ್ಡಿಯೇ ನನ್ನ ಕೈಗೆ ಕೋಟ್ಯಂತರ ರುಪಾಯಿ ಕೊಟ್ಟು (ಬರೋಬ್ಬರಿ 9.5 ಕೋಟಿ ನಗದು) ತಮ್ಮನನ್ನು ಬಿಡಿಸಿಕೊಮಡು ಹೋಗಲು ಜಾಮೀನು ಕೊಡಿಸು ಎಂದು ಮನವಿ ಮಾಡಿದ್ದರು ಎಂದು ನಿನ್ನೆಯಷ್ಟೇ ACB ಬಂಧನಕ್ಕೀಡಾದ ರೌಡಿ ಶೀಟರ್ ಯಾದಗಿರಿ ರಾವ್ ಹೇಳುವ ಮೂಲಕ KMF ಸೋಮ ರೆಡ್ಡಿಗೆ ಮುಳುಗು ನೀರು ತಂದಿದ್ದಾರೆ.
ಇನ್ನು, ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿಗೆ ಜೈಲು ಕಾಟ ಶುರುವಾದಂತಿದೆ. ಇದೇ ತಿಂಗಳ 9ರಂದು ಕೋರ್ಟಿಗೆ ಬನ್ನಿ ಎಂದು ಬೆಂಗಳೂರು ಸಿಬಿಐ ನ್ಯಾಯಾಲಯ ಜನಾ ರೆಡ್ಡಿ ಪತ್ನಿ ಅರುಣಾಗೆ ಆದೇಶಿಸಿದೆ. ಇದರಿಂದ ತಕ್ಷಣಕ್ಕೆ ಅರುಣಾ ನಿರೀಕ್ಷಣ ಜಾಮೀನು ಅರ್ಜಿ ಸಲ್ಲಿಸಬೇಕು. ಈ ಅರ್ಜಿಯ ವಿಚಾರಣೆ ವೇಳೆಯೇ ಬಂಧನಕ್ಕೀಡಾದರೂ ಆಶ್ಚರ್ಯವೇನಿಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.