ಗೌಡರಿಗೆ ವರವಾಗಲಿರುವ ಶೆಟ್ಟರ್ ಬಣದ ರಾಜೀನಾಮೆ
ನಿತಿನ್ ಗಡ್ಕರಿ ಮಗನ ಮದುವೆ ಆರತಕ್ಷತೆ ಸಮಾರಂಭಕ್ಕೆ ಯಡಿಯುರಪ್ಪ ಹಾಗೂ ಸದಾನಂದ ಗೌಡ ಹೋಗುವ ಮುನ್ನ ರಾಜ್ಯ ಬಿಜೆಪಿ ಬಿಕ್ಕಟ್ಟು ಪರಿಹಾರವಾಗಬೇಕೆಂದು ಯಡಿಯೂರಪ್ಪ ಬಣ ಪಟ್ಟು ಹಿಡಿದಿದೆ. ಆದರೆ, ದೆಹಲಿಯಿಂದ ಇನ್ನೂ ಯಾವುದೇ ಸೂಚನೆ ಹೊರಬಿದಿಲ್ಲ. ಇನ್ನೂ ಒಮ್ದು ವಾರ ಕಾದು ನೋಡಿ ಎಂಬ ಸಂದೇಶವಷ್ಟೇ ಸಿಕ್ಕಿದೆ. ಗಡ್ಕರಿ ಮಗನ ಮದುವೆ ಆರತಕ್ಷಣೆ ನಂತರ ಮುಂದಿನ ಮಾತುಕತೆಗೆ ಕೂರಬಹುದು.
ಮುಂದಿನ ಸಿಎಂ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಜಗದೀಶ್ ಶೆಟ್ಟರ್ ಸೇರಿದಂತೆ 9 ಸಚಿವರುಗಳು ನೀಡಿರುವ ರಾಜೀನಾಮೆ ಅಂಗೀಕರಿಸುವುದು ಬೇಡ ಎಂದಿರುವ ಹೈಕಮಾಂಡ್ ಆದೇಶ, ಸದಾನಂದ ಗೌಡರನ್ನು ಕಟ್ಟಿ ಹಾಕಿದೆ. ಇಲ್ಲದಿದ್ದರೆ ಸದಾನಂದ ಗೌಡರು ತೆಗೆದುಕೊಳ್ಳಬಹುದಿದ್ದ ಅತ್ಯಂತ ಜಾಣ್ಮೆಯ ನಡೆಯತ್ತ ಗಮನ ಹರಿಸೋಣ...ಈ ನಡುವೆ ಯಥಾಪ್ರಕಾರ ಶೆಟ್ಟರ್ ನಿವಾಸದಲ್ಲಿ ಸಂಸದರು, ಸಚಿವರು, ಶಾಸಕರ ಸಭೆ ಮುಂದುವರೆದಿದೆ.
ಸಂಪುಟ ವಿಸ್ತರಣೆ ನೆಪ: ಸುಮಾರು 21ಕ್ಕೂ ಹೆಚ್ಚು ಖಾತೆಗಳನ್ನು ಹೊಂದಿದ್ದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ತಲೆ ಮೇಲೆ ಇನ್ನೂ 9 ಖಾತೆಗಳು ಸೇರಿದೆ. ಖಾತೆ ಹಂಚಿಕೆ ಅನಿರ್ವಾಯ ಎಂದು ಹೈಕಮಾಂಡ್ಗೆ ಸದಾನಂದ ಅವರು ಮನವರಿಕೆ ಮಾಡಿಕೊಟ್ಟು, ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ. ಹೀಗಾಗಿ ಹೈಕಮಾಂಡ್ ಸೂಚನೆ ನೀಡಿದರೆ ರಾಜೀನಾಮೆ ಅಂಗೀಕರಿಸಿ ಹೊಸಬರಿಗೆ ಸಂಪುಟದಲ್ಲಿ ಜಾಗ ನೀಡುವುದು ಈ ಮೂಲಕ ಯಡಿಯೂರಪ್ಪ ಬಣದ ಸಚಿವರ ಬೆನ್ನುಲುಬು ಮುರಿಯುವುದು ಸದಾನಂದ ಗೌಡರ ಬಳಿ ಇರುವ ಅಸ್ತ್ರವಾಗಿದೆ.
ಡಾ.ವಿ.ಎಸ್. ಆಚಾರ್ಯ ನಿಧನ ಹಿನ್ನೆಲೆ ಕರಾವಳಿ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಲು ಸುಳ್ಯದ ಅಂಗಾರ ಅಥವಾ ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಮಂತ್ರಿ ಸ್ಥಾನ ನೀಡವ ಸಾಧ್ಯತೆ ನಿಚ್ಚಳವಾಗಿದೆ. ಆಚಾರ್ಯ ಅವರಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಜು.25ರಲ್ಲಿ ಚುನಾವಣೆ ನಡೆಯಲಿದೆ.
ರೇಸ್ ನಲ್ಲಿ ಯಾರಿದ್ದಾರೆ: ತುಮಕೂರು ಭಾಗದಿಂದ ಸೊಗಡು ಶಿವಣ್ಣ, ಕೊಡಗಿನಿಂದ ಅಪ್ಪಚ್ಚು ರಂಜನ್, ಚಿಕ್ಕಮಗಳೂರು ಭಾಗದಿಂದ ಸಿ.ಟಿ. ರವಿ, ಜೀವರಾಜ್, ಎಂಪಿ ಕುಮಾರಸ್ವಾಮಿ...
ಮಂಗಳೂರು ಭಾಗದಿಂದ ಅಂಗಾರ, ಉಡುಪಿಯಿಂದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಬಳ್ಳಾರಿಯಿಂದ ಆನಂದ್ ಸಿಂಗ್, ಬಿಜಾಪುರದಿಂದ ಅಪ್ಪು ಪಟ್ಟಣಶೆಟ್ಟಿ, ಬೆಂಗಳೂರಿನಿಂದ ಅರವಿಂದ ಲಿಂಬಾವಳಿ ಅಥವಾ ಎಂ. ಶ್ರೀನಿವಾಸ್ ಈ ಬಾರಿಯ ಮಂತ್ರಿ ಸ್ಥಾನ ಗಿಟ್ಟಿಸುವ ನಿರೀಕ್ಷೆ ಹೊಂದಿದ್ದಾರೆ. ಈ ಪೈಕಿ ಇತ್ತೀಚೆಗೆ ಲೋಕಾಯುಕ್ತ ದಾಳಿಗೊಳಲಾದ ಎಂ ಶ್ರೀನಿವಾಸ್ ಅವರಿಗೆ ಸ್ಥಾನ ಸಿಗುವುದು ಕಷ್ಟ.
ಇವರೆಲ್ಲರ ಜೊತೆಗೆ ಬೇಳೂರು ಗೋಪಾಲಕೃಷ್ಣ ಕೂಡಾ ರೇಸ್ ನಲ್ಲಿದ್ದು, ಆರು ಕೊಟ್ಟರೆ ಯಡಿಯೂರಪ್ಪ ಕಡೆ ಸಚಿವ ಸ್ಥಾನ ಸಿಕ್ಕರೆ ಸದಾನಂದ ಗೌಡರ ಕಡೆ ಎಂಬಂತೆ ಆಡುತ್ತಿದ್ದಾರೆ. ಹಿಂದುಳಿದ ವರ್ಗಕ್ಕೆ, ಪ್ರದೇಶವಾರು ಆದ್ಯತೆ, ಕೊಡಗಿಗೆ ಒಂದು ಸಚಿವ ಸ್ಥಾನ ಎಂದು ಸದಾನಂದ ಗೌಡರು ಹೇಳಿದ್ದಾರೆ.
ರಾಜೀನಾಮೆ ನೀಡಿದ ಎಲ್ಲಾ ಸಚಿವರುಗಳು ತಮ್ಮ ಶಾಸಕ ಸ್ಥಾನವನ್ನು ಹಾಗೆ ಉಳಿಸಿಕೊಂಡಿರುವುದು. ಹೈಕಮಾಂಡ್ ಸಚಿವರ ಮೇಲೆ ಶಿಸ್ತುಕ್ತಮ ಜರುಗಿಸದಿರುವುದು, ರಾಜೀನಾಮೆ ಅಂಗೀಕರಿಸದಿರುವುದು ಮುಂದುವರೆದರೆ ಯಥಾ ಪ್ರಕಾರ ಪರ್ಯಾಯ ನಾಯಕತ್ವ ಅಥವಾ ವಿಧಾನಸಭೆ ವಿಸರ್ಜನೆ ಒಂದೇ ದಾರಿ. ಎಲ್ಲವೂ ನಿತಿನ್ ಗಡ್ಕರಿ ಮಗನ ಮದುವೆ ಆರತಕ್ಷತೆ ಸಮಾರಂಭದಲ್ಲಿ ನಿರ್ಧಾರವಾಗಲಿದೆ.