ಉದ್ರೇಕ, ಸ್ಖಲನ ನನ್ನಿಂದ ಸಾಧ್ಯವಿಲ್ಲ : ನಿತ್ಯಾನಂದ
ಇಂತಹದೊಂದು ರೋಮರೋಮಗಳು ನಿಮಿರುವಂತಹ ಹೇಳಿಕೆ ನೀಡಿ ವಿವಾದಾತ್ಮಕ ಸ್ವಾಮೀಜಿ ನಿತ್ಯಾನಂದ ಅವರನ್ನು ಟೀಕಿಸುವವರನ್ನು ಮಾತ್ರವಲ್ಲ, ಬೆಂಬಲಿಗರನ್ನು ಕೂಡ ಬೆಚ್ಚಿ ಬೀಳಿಸಿದ್ದಾರೆ. "ನನ್ನಿಂದ ಉದ್ರೇಕ, ನಿಮಿರುವಿಕೆ ಮತ್ತು ಸ್ಖಲನ ಸಾಧ್ಯವೇ ಇಲ್ಲ. ಯಾಕೆಂದರೆ, ಆಧ್ಯಾತ್ಮಿಕವಾಗಿ ನನ್ನ ದೇಹ ಹಾಗೆ ರೂಪುಗೊಂಡಿದೆ. ಸಂಭೋಗಿಸಲು ನಾನು ಅಸಮರ್ಥ" ಎಂದು ಹೇಳಿ ತನ್ನ ಸುತ್ತ ಇರುವ ವಿವಾದಕ್ಕೆ ವಿಚಿತ್ರ ತಿರುವು ಕೊಟ್ಟಿದ್ದಾರೆ, ತಮ್ಮ ಪುರುಷತ್ವದ ಬಗ್ಗೆ ಪ್ರಶ್ನೆ ಎತ್ತಿದವರ ಸಂದೇಹವನ್ನು ಬಗೆಹರಿಸಿದ್ದಾರೆ.

ಪತ್ರಕರ್ತ ದೀಪಕ್ ತಿಮ್ಮಯ್ಯ ಅವರೊಂದಿಗೆ ಮಧುರೈನ ಅಧೀನಂ ಪೀಠದಲ್ಲಿ ನಡೆಸಿದ ಸಂದರ್ಶನದಲ್ಲಿ, ತನ್ನ ಮೇಲೆ ಹೊರಿಸಲಾಗಿರುವ ಅತ್ಯಾಚಾರದ ಆರೋಪ, ಲೈಂಗಿಕ ಸಂಬಂಧ, ದೈಹಿಕ ಸ್ಥಿತಿಗತಿಯ ಬಗ್ಗೆ ಮುಚ್ಚುಮರೆಯಿಲ್ಲದೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಔಟ್ ಲುಕ್ ಪತ್ರಿಕೆಗಾಗಿ ನಡೆಸಲಾಗಿರುವ ಈ ಸಂದರ್ಶನದ ಆಯ್ದ ಭಾಗ ಜುಲೈ 2ರ ಸಂಚಿಕೆಯಲ್ಲಿ ಪ್ರಕಟವಾಗಲಿದೆ.
ವಿವಾದಾತ್ಮಕ ಸ್ವಾಮಿ ನಿತ್ಯಾನಂದ ಎದುರಿಸುತ್ತಿರುವ ತರಹೇವಾರಿ ಆರೋಪಗಳು, ಅಪವಾದಗಳು, ಅವಮಾನಗಳು, ಅವರಿರುವಂಥ ಪರಿಸ್ಥಿತಿಯಲ್ಲಿ ಬೇರೆ ಯಾರೇ ಸ್ವಾಮೀಜಿ ಇದ್ದರೂ ಇಷ್ಟೊತ್ತಿಗೆ ಎಂಥ ನಿರ್ಧಾರ ತೆಗೆದುಕೊಳ್ಳುತ್ತಿದ್ದರೋ ಗೊತ್ತಿಲ್ಲ. ಆದರೆ, ನಿತ್ಯಾನಂದ ಮಾತ್ರ ಬಂಡೆಗಲ್ಲಿನಂತೆ ಅಚಲವಾಗಿ ನಿಂತಿದ್ದಾರೆ. ತಮ್ಮ ಎಲ್ಲಾ ನಡೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ಸನ್ಯಾಸಿನಿಯರೊಂದಿಗೆ ಇರುವ ಸಂಬಂಧ, ಹೆಸರು ಕೆಡಿಸಲು ನಡೆಸಿರುವ ಹುನ್ನಾರ ಮುಂತಾದ ಸಂಗತಿಗಳನ್ನು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.
"ವಿವಾದದಿಂದ ಹೊರತಾದ ಸ್ವಾಮೀಜಿ ಈ ಜಗತ್ತಿನಲ್ಲಿಯೇ ಇಲ್ಲ. ಸೆಕ್ಸ್ ಸ್ವಾಮಿ ಎಂಬ ಪಟ್ಟ ನೀಡಿದ್ದಕ್ಕೆ ನನ್ನ ವಿರೋಧವಿದೆ. ಇಲ್ಲಿಯವರೆಗೆ ನಾನು ಯಾವ ಹೆಂಗಸನ್ನೂ ಮುಟ್ಟಿಲ್ಲ. ಯಾವುದೇ ಹೆಂಗಸಿನೊಂದಿಗೆ ಸರಸವಾಡಿರುವ ವಿಡಿಯೋ ಇದ್ದರೂ ಅದನ್ನು ಸೃಷ್ಟಿಸಲಾಗಿದೆ. ಇದನ್ನು ಅಮೆರಿಕಾನೇ ದೃಢಪಡಿಸಿದೆ. ಯಾವ ಹೆಂಗಸನ್ನು ನನ್ನ ಬಳಿ ಸುಳಿಯಲು ಬಿಟ್ಟಿಲ್ಲ. ನನ್ನ ಬಳಿ ಕಾಯಿಲೆ ವಾಸಿ ಮಾಡುವ ಮಂತ್ರ ದಂಡವಿದೆ. ಅದರಿಂದಲೇ ಕಾಯಿಲೆಗಳನ್ನು ವಾಸಿ ಮಾಡುತ್ತೇನೆ."
ತಾನೇ ಗಂಡು ಅಥವಾ ಹೆಣ್ಣು ದೇವರು ಎಂಬಂತೆ ಚಿತ್ರವಿಚಿತ್ರ ದಿರಿಸುಗಳನ್ನು ಧರಿಸುವ ಬಗ್ಗೆ, "ದೈಹಿಕವಾಗಿ ನಾನು ಗಂಡಸೇ ಆಗಿದ್ದರೂ, ಆಧ್ಯಾತ್ಮಿಕವಾಗಿ ಮತ್ತು ಮಾನಸಿಕವಾಗಿ ಆಯಾ ದೇವರುಗಳು ನನ್ನಲ್ಲಿ ಆವಾಹನೆಗೊಳ್ಳುತ್ತಾರೆ. ಹಾಗೆ, ಆ ದೇವರಂತೆಯೇ ದಿರಿಸು ಧರಿಸಬೇಕಾಗುತ್ತದೆ. ಶಿವನ ಪೂಜೆ ಮಾಡುವಾಗ ರುದ್ರಾಕ್ಷ ಧರಿಸಬೇಕು, ದೇವಿ ಪೂಜೆ ಮಾಡುವಾಗ ಕುಂಕುಮ ಇಟ್ಟುಕೊಳ್ಳಬೇಕು" ಎಂಬ ವಿವರಣೆಯನ್ನು ಸಂದರ್ಶನದಲ್ಲಿ ನಿತ್ಯಾನಂದ ನೀಡಿದ್ದಾರೆ.
ನನಲ್ಲಿ ದೈಹಿಕ ವಾಂಛೆ ಎಂಬುದೇ ಸರ್ವನಾಶವಾಗಿದೆ. 22ನೇ ವಯಸ್ಸಿನಲ್ಲಿದ್ದಾಗ ಆಧ್ಯಾತ್ಮಿಕ ಶಕ್ತಿಯಿಂದಾಗಿ ಸಂಭೋಗದ ಶಕ್ತಿಯನ್ನು ಕಳೆದುಕೊಂಡುಬಿಟ್ಟೆ. ನನ್ನಲ್ಲಿ ಕಾಮನೆಗಳು ಇದ್ದಿದ್ದರೆ ಎಂದೋ ಮದುವೆಯಾಗಿಬಿಡುತ್ತಿದ್ದೆ. ಯಾವುದೇ ರೀತಿಯ ವೈದ್ಯಕೀಯ ಪರೀಕ್ಷೆಗೆ ನಾನು ಸಿದ್ಧನಿದ್ದೇನೆ ಎಂದು ವಿವರಣೆ ನೀಡಿರುವ ನಿತ್ಯಾನಂದ ತಮ್ಮ ಮೇಲೆ ಹೊರಿಸಲಾಗಿರುವ ಅತ್ಯಾಚಾರದ ಆರೋಪಗಳಿಗೆ, ಪುರುಷನೋ ಸ್ತ್ರೀಯೋ ಎಂಬ ಜಿಜ್ಞಾಸೆಗೆ ಪ್ರತ್ಯುತ್ತರ ನೀಡಿದ್ದಾರೆ. ಆ ಸಂದರ್ಶನದ ಸಂಪೂರ್ಣ ಭಾಗವನ್ನು ಇಲ್ಲಿ ಓದಿರಿ.












Click it and Unblock the Notifications