ಯಡಿಯೂರಪ್ಪ ಜಾಮೀನು ತೀರ್ಪು ಮುಂದೂಡಿಕೆ
ಜಿಂದಾಲ್ ಸಮೂಹದ ಗಣಿ ಕಂಪನಿಯಿಂದ ಲಂಚ ಪಡೆದ ಆರೋಪ ಹೊತ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅವರ ಪುತ್ರರಾದ ಬಿ.ವೈ. ರಾಘವೇಂದ್ರ, ಬಿ.ವೈ. ವಿಜಯೇಂದ್ರ ಹಾಗೂ ಅಳಿಯ ಸೋಹನ್ ಕುಮಾರ್ ಅವರುಗಳು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಬಗ್ಗೆ ಹೈಕೋರ್ಟ್ ಬುಧವಾರ ಆದೇಶ ಪ್ರಕಟಿಸದೇ ಹೋಯಿತು.
ಆರೋಪಿಗಳು ಮತ್ತು ಸಿಬಿಐ ವಕೀಲರ ವಾದ-ಪ್ರತಿವಾದಗಳನ್ನು ಆಲಿಸಿ ಮುಗಿಸಿರುವ ನ್ಯಾಯಮೂರ್ತಿ ಸುಭಾಷ ಬಿ. ಆದಿ ಅವರು ಆದೇಶವನ್ನು ಬುಧವಾರಕ್ಕೆ ಕಾಯ್ದಿರಿಸಿದ್ದರು. ಆದರೆ ಇಂದೂ ತೀರ್ಪು ನೀಡದೆ, ನಾಳೆಗೆ ಅಂದರೆ ಗುರುವಾರ ಯಡಿಯೂರಪ್ಪ ಜಾಮೀನು ಅರ್ಜಿ ಭವಿಷ್ಯ ನಿರ್ಧರಿಸುವುದಾಗಿ ಅವರು ಹೇಳಿದರು.
ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ಇವರೆಲ್ಲರೂ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ಅದಕ್ಕೂ ಮುನ್ನ, ಇಂದು ಬೆಳಗ್ಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಬಿಎಸ್ ಯಡಿಯೂರಪ್ಪಗೆ ಮತ್ತು ಅವರ ಜತೆ ಜತೆಗೆ ವಸತಿ ಸಚಿವ ವಿ. ಸೋಮಣ್ಣ ಅವರ ವಿರುದ್ಧದ ನಾಗದೇವನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದ ವಿಚಾರಣೆಯನ್ನು ಜೂನ್ 30ಕ್ಕೆ ಮುಂದೂಡಿದೆ. ತನ್ಮೂಲಕ ಲೋಕಾಯುಕ್ತ ಕೋರ್ಟ್ ಸಮನ್ಸ್ ಆದೇಶದಂತೆ ಇಬ್ಬರೂ ಕೋರ್ಟಿಗೆ ಹಾಜರಾಗಿದ್ದರೂ ಹೆಚ್ಚಿನ ವಿಚಾರಣೆ ನಡೆಯದೆ ಪ್ರಕರಣ ಮುಂದೂಡಲ್ಪಟ್ಟಿತು.