ಇಂಡಿಗೋ ವಿಮಾನದಲ್ಲಿ ಹೃದಯಾಘಾತ, ಟೆಕ್ಕಿ ಸಾವು

32 ವರ್ಷದ ಶುಜಾ ಉರ್ ರೆಹಮಾನ್ ಎಂಬುವರು ಕೋಲ್ಕತ್ತಾದಲ್ಲಿ ತಮ್ಮ ಗೆಳೆಯರನ್ನು ಭೇಟಿ ಮಾಡಿ ಬೆಂಗಳೂರಿಗೆ ಇಂಡಿಗೋ ವಿಮಾನ(6E 156)ದ ಮೂಲಕ ಭಾನುವಾರ(ಜೂ.17) ಬರುತ್ತಿದ್ದರು. ಆದರೆ, ಮಾರ್ಗಮಧ್ಯದಲ್ಲಿ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ.
ವಿಮಾನ ಸಿಬ್ಬಂದಿ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲು ಯತ್ನಿಸಿದ್ದಾರೆ. ಕೆಲವು ಮಾತ್ರೆ ನೀಡಿದ್ದಾರೆ. ಶುಜಾರಿಗೆ ಪ್ರಜ್ಞೆ ತಪ್ಪಿದೆ. ಹೆಚ್ಚಿನ ವೈದ್ಯಕೀಯ ನೆರವು ನೀಡಲು ಅಸಮರ್ಥರಾದ ಇಂಡಿಗೋ ಸಿಬ್ಬಂದಿ, ಪೈಲಟ್ ಗೆ ವಿಷಯವನ್ನು ತಿಳಿಸಿದ್ದಾರೆ.
ವಿಮಾನದಲ್ಲಿದ್ದ ಪ್ರಯಾಣಿಕರ ಪೈಕಿ ಒಬ್ಬ ಡಾಕ್ಟರ್ ಹಾಗೂ ನರ್ಸ್ ನೆರವಿಗೆ ಬಂದಿದ್ದಾರೆ. ಉಸಿರಾಟಕ್ಕಾಗಿ ಚಿಕಿತ್ಸೆ ನೀಡಿದ ನಂತರ Digene ಇಂಜೆಕ್ಷನ್ ಹಾಗೂ Metocophramite (Perynom) ನೀಡಲಾಗಿದೆ. ವಿಮಾನ ಬೆಂಗಳೂರು ತಲುಪವಷ್ಟರಲ್ಲಿ ಸ್ವಲ್ಪ ಚೇತರಿಕೆ ಕಂಡಿದ್ದ ಶುಜಾ ಬಿಐಎಎಲ್ ತಲುಪಿದ ಮೇಲೆ ಕಣ್ಮುಚ್ಚಿದ ಎಂದು ಅವರ ಗೆಳೆಯ ಜತಿನ್ ಹೇಳುತ್ತಾರೆ.
ಕೂಡಲೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ವಿಷಯ ತಿಳಿಸಿ ಹೆಚ್ಚಿನ ನೆರವು ಕೇಳಲಾಗಿದೆ. ಎಂಎಸ್ ರಾಮಯ್ಯ ಮೆಡಿಕಲ್ ಕಾಲೇಜಿನ ನುರಿತ ವೈದ್ಯರನ್ನು ಕರೆಸಿಕೊಳ್ಳಲಾಗಿದೆ.
ಸಂಜೆ 4 ಗಂಟೆ ವೇಳೆಗೆ ವಿಮಾನ ಬೆಂಗಳೂರು ತಲುಪಿದೆ. ವಿಮಾನ ನಿಲ್ದಾಣದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲು ಯತ್ನಿಸಲಾಗಿದೆ. ಆದರೆ, ಬೆಂಗಳೂರಿಗೆ ಬರುವಷ್ಟರಲ್ಲೇ ಸುಜಾ ಅವರ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ವೈದ್ಯರು ಹೇಳಿದ್ದಾರೆ.
ಉತ್ತರಪ್ರದೇಶದ ಲಖ್ನೋ ಮೂಲದ ರೆಹಮಾನ್ ಅವರ ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಬೆಂಗಳೂರಿನ ಕಮ್ಮನಹಳ್ಳಿ ನಿವಾಸಿಯಾಗಿದ್ದ ಶುಜಾ ಕನ್ವರ್ಜಿಸ್ ಸಂಸ್ಥೆಯಲ್ಲಿ ಸಹಾಯಕ ವ್ಯವಸ್ಥಾಪಕ ಹಾಗೂ ಟೀಮ್ ಲೀಡ್ ಆಗಿ ಉದ್ಯೋಗದಲ್ಲಿದ್ದರು. ಶುಜಾ ಅವರು ಹೃದಯಾಘಾತಕ್ಕೆ ಒಳಗಾಗಿದ್ದರೂ ಸೂಕ್ತ ಚಿಕಿತ್ಸೆ ಸಿಕ್ಕಿದ್ದರೆ ಪ್ರಾಣ ಉಳಿಯುವ ಸಾಧ್ಯತೆಯಿತ್ತು. ವಿಮಾನದಲ್ಲಿ ನುರಿತ ವೈದ್ಯರೊಬ್ಬರನ್ನು ಸಿಬ್ಬಂದಿಯಾಗಿ ನೇಮಿಸುವ ಅಗತ್ಯತೆ ಇದೆ.
ಇಂಡಿಗೋ ಸಿಬ್ಬಂದಿ ತಮಗೆ ತಿಳಿದ ಪ್ರಥಮ ಚಿಕಿತ್ಸೆ ವಿಧಾನಗಳನ್ನು ಪ್ರಯೋಗಿಸಿದ್ದಾರೆ. ಆದರೆ, ಪ್ರಜ್ಞೆ ತಪ್ಪಿದ ಪ್ರಯಾಣಿಕರಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದು ಅನುಭವಿ ವೈದ್ಯರಿಗೆ ಮಾತ್ರ ತಿಳಿದಿರುತ್ತದೆ. ಈ ವಿಷಯದಲ್ಲಿ ಯಾರನ್ನೂ ಟೀಕಿಸುವುದು ಸರಿಯಲ್ಲ ದುರಾದೃಷ್ಟ ಎನ್ನಬಹುದು. ವಿಮಾನಯಾನದಲ್ಲಿ ಇನ್ನಷ್ಟು ಮುನ್ನಚ್ಚರಿಕೆ ಆಗತ್ಯ ಎಂದು ಎಂದು ಸಹ ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಹೆಸರಾಂತ ಪತ್ರಕರ್ತ ವೈಎನ್ಕೆ ಅವರು 1999 ಅಕ್ಟೋಬರ್ 15 ರಂದು ನ್ಯೂಯಾರ್ಕ್ ನಿಂದ ಬೆಂಗಳೂರಿಗೆ ವಾಯುಮಾರ್ಗದಲ್ಲಿ ಹಿಂದಿರುಗುವಾಗ ಮುಂಬೈ ಬಳಿ ವಿಮಾನದಲ್ಲೇ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications