ನಿರಾಣಿಯಿಂದ ಕಪಾಳಮೋಕ್ಷ : ಮುಧೋಳ ಬಂದ್ ಯಶಸ್ವಿ
ನೂರಾರು ರೈತರು ಮುಧೋಳ ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ತಡೆ ನಡೆಸಿ, ಪಟ್ಟಣ ಬಂದ್ ಮಾಡಿ ಸಮೀಪದ ಜೀರಗಾಳ ಗ್ರಾಮ ಹತ್ತಿರ ಸ್ಟೇಟ್ ಹೈವೆಯಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ಸಚಿವರು ನೈತಿಕ ಹೊಣೆ ಹೊತ್ತು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ರೈತರು ಬೇಡಿಕೆ ಮುಂದಿಟ್ಟಿದ್ದಾರೆ.
ಸಚಿವರು ಕ್ಷುಲ್ಲಕ ಕಾರಣಕ್ಕೆ ಕಪಾಳಮೋಕ್ಷ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಮಂಟೂರ ಗ್ರಾಮದ ರೈತ ಶಿವಾನಂದ ತಿಮಸಾನಿ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಂಟೂರ ಸಮೀಪದ ತೊಟದ ಮನೆಗೆ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಮುಂದೆ ಹೋಗುತ್ತಿದ್ದ ಟಿಪ್ಪರ್ (ಲಾರಿ) ಹಿಂದಿಕ್ಕುವ ಸಂದರ್ಭದಲ್ಲಿ ಎದುರಿನಿಂದ ಸಚಿವರ ಕಾರು ವೇಗವಾಗಿ ಬಂತು. ಈ ಸಂದರ್ಭದಲ್ಲಿ ಸಂಚಾರಕ್ಕೆ ಅಡಚಣೆಯಾಯಿತು. ತಕ್ಷಣ ಸಚಿವರು ಕಾರನ್ನು ನಿಲ್ಲಿಸಿ ನಿಂದಿಸಿದರು. ಕ್ಷಮೆ ಯಾಚಿಸಿದರೂ ಬಿಡದೆ ಮತ್ತೆ ನಮ್ಮ ತೋಟದ ಮನೆಗೆ ಆಗಮಿಸಿ ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹೊರಟ ರೈತರ ಪ್ರತಿಭಟನಾ ರ್ಯಾಲಿ ಶಿವಾಜಿ ವೃತ್ತದ ಮಾರ್ಗವಾಗಿ ತಹಸಿಲ್ದಾರ ಕಚೇರಿಯ ಆವರಣಕ್ಕೆ ಆಗಮಿಸಿ ಅಲ್ಲಿ ಸಭೆ ನಡೆಸಿದರು. ಸಚಿವರ ವಿರುದ್ಧ ಘೋಷಣೆಗಳನ್ನು ಹಾದಿಯುದ್ದಕ್ಕೂ ಕೂಗುತ್ತಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರೈತರ ಮುಖಂಡ ರಮೇಶ ಗಡದನ್ನವರ ಅವರು, ನಿರಾಣಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ರ್ಯಾಲಿ ಶಿವಾಜಿ ವೃತ್ತದ ಹತ್ತಿರ ಬರುತ್ತಿದ್ದಂತೆ ಪೊಲೀಸ್ ಹಾಗೂ ರೈತರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಯಾವುದೇ ವ್ಯಾಪಾರ ವಹಿವಾಟು ಇಂದು ನಡೆದಿಲ್ಲ. ಬಂದ್ ಕರೆಗೆ ಭಾರೀ ಪ್ರತಿಸ್ಪಂದನೆ ವ್ಯಕ್ತವಾಯಿತು. ಸ್ಥಳಿಯ ವಾಹನಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದ್ದು. ಇದರಿಂದಾಗಿ ಸಾರ್ವಜನಿಕರು ಸಾಕಷ್ಟು ಪರದಾಡಬೇಕಾಯಿತು. ಪ್ರತಿಭಟನೆಯಲ್ಲಿ ಮಂಟೂರ, ಶಿರೋಳ, ಮಧೋಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ರೈತರು ಆಗಮಿಸಿದ್ದರು.