ಸದಾ ಸಂಪುಟ ವಿಸ್ತರಣೆ: ಮತ್ತೆ ನಾಟಕ ಶುರು
ರವಿ ಹೀಗೆ ಗುಟುರು ಹಾಕುತ್ತಿದ್ದಂತೆ ಹಲವು ಶಾಸಕರೂ ಅವರಿಗೆ ಕೋರಸ್ ಆಗಿದ್ದಾರೆ. ರವಿ ಮತ್ತು ಎಂಪಿ ಅಪ್ಪಚ್ಚು ರಂಜನ್ ಜಂಟಿ ಕಾರ್ಯಾಚರಣೆಗೂ ಇಳಿದಿದ್ದಾರೆ. ಇನ್ನು ಬಿಜೆಪಿ ವರಿಷ್ಠರಂತೂ ಸಂಪುಟದಲ್ಲಿ ಕೆಲವು ಸ್ಥಾನಗಳು ತಾನಾಗಿ ಖಾಲಿಯಾದ ದಿನದಿಂದಲೂ ಸಂಪುಟ ವಿಸ್ತರಣೆ ಎಂಬ ಕ್ಯಾರೆಟ್ಟನ್ನು ಕೈಯಲ್ಲಿ ಹಿಡಿದೇ ಇದೆ. ಆದರೆ ಒಂದಲ್ಲಾ ಒಂದು ಕಂಟಕ ಎದುರಾಗುತ್ತಲೇ ಇದೆ... ಆಕಾಂಕ್ಷಿಗಳು ಚಾತಕಪಕ್ಷಿಗಳಾಗಿ ಹಾಗೇ ನರಳುತ್ತಲೇ ಇದ್ದಾರೆ.
ಇನ್ನು, ಸದಾನಂದ ಗೌಡರೋ ಸ್ವತಃ 21 ಖಾತೆಗಳನ್ನು ಹೊತ್ತಿರುವುದು ಇಡೀ ಜಗತ್ತಿಗೇ ತಿಳಿದ ವಿಷಯ. ಈ ಸಲ ಸಂಪುಟ ವಿಸ್ತರಣೆ ಗ್ಯಾರಂಟಿ. ಜೂನ್ 16ಕ್ಕೆ ಬಿಜೆಪಿಯ ಅನೇಕ ಮಂದಿ ನನ್ನ ಕ್ಯಾಬಿನೆಟ್ ಗೆ ಸೇರ್ಪಡೆಯಾಗುವುದು ಖಚಿತ ಎಂದು ಸದಾನಂದ ಗೌಡರು ಖಚಿತವಾದ ದನಿಯಲ್ಲೇ ಹೇಳಿದ್ದರಾದರೂ ಯಾಕೋ ಅದಿನ್ನೂ ಕೈಗೂಡುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಉಳಿದಿರೋ 10 ತಿಂಗಳಲ್ಲಿ ಮಂತ್ರಿಯಾಗಿ ಏನು ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸೋಕೇ ಆಗುತ್ತೆ? ನೀವೇ ಹೇಳಿ ಎಂದು ಸಿಕ್ಕ ಸಿಕ್ಕ ನಾಯಕರು, ಆತ್ಮೀಯ ಪತ್ರಕರ್ತರ ಮುಂದೆ ರವಿ ತಮ್ಮ ಅಜೆಂಡಾ ಇಡುತ್ತಿದ್ದಾರೆ. ಕೊನೆಗೆ ಬೆದರಿಕೆಯ ದನಿಯಲ್ಲಿ ನಾನು ಮಿನಿಸ್ಟರ್ ಆಗಲೇಬೇಕು ಎಂದು ರಾಜದ್ಯಾಧ್ಯಕ್ಷ ಸನ್ಮಾನ್ಯ ಈಶ್ವರಪ್ಪನವರನ್ನೂ ಅಟಕಾಯಿಸಿಕೊಂಡಿದ್ದಾರೆ. ಆದರೆ ಉಹುಃ ಬಿಜೆಪಿ ಹಿರಿತಲೆಗಳು ಜೇನುಗೂಡಿಗೆ ಕೈಹಾಕುವ ದುಸ್ಸಾಹಸಕ್ಕೆ ಮುಂದಾಗುತ್ತಿಲ್ಲ.
ಬಿಜೆಪಿ ಹೈಕಮಾಂಡ್ ಕಾಣದೇ ಇರುವುದು ರವಿ ಕಣ್ಣಿಗೆ ಬಿದ್ದಿದ್ದು - ನಿಷ್ಠಾವಂತರಿಗೆ ಸುಣ್ಣ; ಸಮಯಸಾಧಕರಿಗೆ ಮಣೆ ಹಾಕಲಾಗಿದೆ. ಈ ಅನ್ಯಾಯವನ್ನು ಇನ್ನಾದರೂ ಸರಿಪಡಿಸಿ - ಎಂದು ಗುಡುಗಿದ್ದಾರೆ. ಮೇಲ್ಮನೆ ಚುನಾವಣೆಯಲ್ಲಿ 12 ಮಂದಿ ಶಾಸಕರು ಅಡ್ಡ ಮತ ಹಾಕಿ, ಪಕ್ಷಕ್ಕೆ ಇರುಸುಮುರುಸು ತಂದಿದ್ದಾರೆ. ಪಕ್ಷ ಅಂಥವರಿಂದ ಹಾಳಾಗುತ್ತಿದೆ. ಮೊದಲು ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದೂ ರವಿ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ. ರವಿ ನೇತೃತ್ವದಲ್ಲಿ ಇದೇ ವಾರಾಂತ್ಯ 15 ಶಾಸಕ ದಂಡು ದೆಹಲಿ ವರಿಷ್ಠರ ಮೇಲೆ ದಂಡೆತ್ತಿ ಹೋಗುವ ಸಮರ ಸಿದ್ಧತೆಯಲ್ಲಿದೆ.