ನಿತ್ಯಾನಂದನ ಬೆಡ್ ರೂಂ ನಿರ್ಮಾಣವೂ ಅಕ್ರಮವೇ
ವಿವಾದಿತ ನಿತ್ಯಾನಂದ ಮಹಾಪ್ರಭುಗಳ ಇಂದ್ರ ವೈಭೋಗವನ್ನೂ ನಾಚಿಸುವ ಬೆಡ್ ರೂಂ ಸಹ ಅಕ್ರಮ ನಿರ್ಮಾಣದ್ದು ಎನ್ನಲಾಗಿದೆ. ಈ ಮಧ್ಯೆ, ಅತ್ತ ನಿತ್ಯಾಶ್ರಮಕ್ಕೆ ಜಿಲ್ಲಾ ಎಸ್ಪಿ ಅಗರವಾಲ್ ಭೇಟಿ ನೀಡಿ, ಶೋಧ ಮುಂದಿವರಿಸಿದ್ದರೆ ಇತ್ತ ನಿತ್ಯಾನಂದನ ವಕೀಲರು ತನ್ನ ಕಕ್ಷಿದಾರರ ಜಾಮೀನು ಅರ್ಜಿ ತೀರ್ಪಿಗೆ ಚಾತಕಪಕ್ಷಿಯಂತೆ ಬುಧವಾರ ಬೆಳಗ್ಗೆ ಹೈಕೋರ್ಟ್ ಅಂಗಳದಲ್ಲಿ ಜಡ್ಜ್ ಬರುವುದಕ್ಕೇ ಕಾದುಕುಳಿತಿದ್ದಾರೆ.
ಬಿಡದಿ ನಿತ್ಯಾಶ್ರಮದಿಂದ ಓಡಿಹೋಗಿರುವ ನಿತ್ಯಾನಂದನನ್ನು ಮತ್ತಷ್ಟು ತೊಂದರೆಗಳು ಬೆನ್ನುಹತ್ತಿವೆ. ಕಲ್ಲುಗೋಪನಹಳ್ಳಿ ಸಮೀಪವಿರುವ ಬಿಡದಿ ನಿತ್ಯಾಶ್ರಮ 42 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿದೆ. ಆಶ್ರಮದಲ್ಲಿ ವಿವಾದದ ಹುತ್ತಗಳು ಎದ್ದಿವೆ. ನಿತ್ಯಾಶ್ರಮದಲ್ಲಿ ತಲೆ ಎತ್ತಿರುವ ಅನೇಕ ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ.
ಕಲ್ಲುಗೋಪನಹಳ್ಳಿಯಲ್ಲಿ 21/7 ಸಂಖ್ಯೆಯ ಸರ್ವೆ ನಂಬರಿನಲ್ಲಿರುವ ನಿತ್ಯಾನಂದನ ಧ್ಯಾನಪೀಠಂ ಬೆಂಗಳೂರು ಮೆಟ್ರೋಪಾಲಿಟಿನ್ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (BMRDA) ವ್ಯಾಪ್ತಿಗೆ ಒಳಪಡುತ್ತದೆ. BMRDA ಉನ್ನತ ಮೂಲಗಳ ಪ್ರಕಾರ BMRDA ಕಾಯಿದೆ 10ರ ಅನುಸಾರ ಯಾವುದೇ ನಿರ್ಮಾಣ ಚಟುವಟಿಕೆ ಕೈಗೊಳ್ಳಲು ಪ್ರಾಧಿಕಾರದ ಯೋಜನಾ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯ.
ಆದರೆ ನಿತ್ಯಾನಂದ ಮಹಾಪ್ರಭುಗಳು ತಮ್ಮ ಆಶ್ರಮದಲ್ಲಿ ಅನೇಕ ಬಿಲ್ಡಿಂಗುಗಳನ್ನು ಹಾಗೆಯೇ ಎಬ್ಬಿಸಿದ್ದಾರೆ. BMRDAಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಆತ ಯಾವುದೇ ಕಾನೂನು ಭಯವಿಲ್ಲದೆ ಕನಿಷ್ಠ 50 ಅಕ್ರಮ ಕಟ್ಟಡಗಳನ್ನು ಎಬ್ಬಿಸಿದ್ದಾನೆ.
ಒಂದು ಬಹು ಅಂತಸ್ತಿನ ಕಟ್ಟಡ, 20 ಕಾಟೇಜುಗಳು, 20 ಏಕಾಂಗಿ ಮನೆಗಳು ಮತ್ತೊಂದು ನಿರ್ಮಾಣ ಹಂತದಲ್ಲಿರುವ ಬಹು ಅಂತಸ್ತಿನ ಕಟ್ಟಡ ನಿತ್ಯಾಶ್ರಮದಲ್ಲಿ ಅನಧಿಕೃತವಾಗಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಇಂತಹ ಅಕ್ರಮ ಕಟ್ಟಡಗಳು ಎಲ್ಲೇ ನಿರ್ಮಾಣವಾಗಿರಲಿ ಅವುಗಳನ್ನು ಒಂದು ವಾರದಲ್ಲಿ ಕೆಡವಿ ಬೀಳಿಸುವ ಅಧಿಕಾರ ಪ್ರಾಧಿಕಾರಕ್ಕೆ ಇದೆ. ವಿವರಣೆ ಕೋರಿ ಆಶ್ರಮ ಹೆಬ್ಬಾಗಿಲಿಗೆ ನೋಟಿಸ್ ಅಂಟಿಸಿಬಂದರೆ ಮುಗಿಯಿತು ಆಶ್ರಮ ಕಥೆ. ಒಂದು ವಾರದಲ್ಲಿ ಸಮಂಜಸ ಉತ್ತರ ದೊರಕದಿದ್ದಲ್ಲಿ ಮರುಕ್ಷಣವೇ ಜೆಸಿಬಿ ಯಂತ್ರಗಳು ಧ್ಯಾನಪೀಠಂ ಆಶ್ರಮದೊಳಕ್ಕೆ ಧಾಂಗುಡಿಯಿಡಬಹುದು.
ನಿತ್ಯಾನಂದ ಮಹಾಪ್ರಭುವಿಗೆ ಮತ್ತೊಂದು ಆತಂಕದ ವಿಷಯವೆಂದರೆ ಕರ್ನಾಟಕ ಭೂ ಸುಧಾರಣೆ ಕಾಯಿದೆಯೂ ಅಟಕಾಯಿಸಿಕೊಳ್ಳುವ ಸಾಧ್ಯತೆಯಿದೆ. ಕಾಯಿದೆಯಡಿ ಎಲ್ಲವೂ ಸಕ್ರಮವಾಗಿದೆಯೇ ಎಂದು ಪತ್ತೆಹಚ್ಚಲು ನಿತ್ಯಾನಂದನ ಕೃಷಿ ಭೂಮಿಗೆ ಭೂತಗನ್ನಡಿ ಹಿಡಿಯಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.