ಕೊನೆಗೂ KAS ಮಹಾಂತೇಶ್ ಹಂತಕರ ಬಂಧನ
ಬೆಂಗಳೂರು, ಜೂನ್ 7: ದಕ್ಷ ಕೆಎಎಸ್ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದ ಮಹಾಂತೇಶ್ ಅವರ ದುರಂತ ಸಾವಿಗೆ ಹೊಸ ತಿರುವು ಸಿಕ್ಕಿದೆ. ಆದರೆ ಅವರ ಕೊಲೆಗೆ ಕುಶಾಲನಗರದ ಪ್ರೇಮಪಾಶ ಕಾರಣವಲ್ಲ. ವೃತ್ತಿ ಮತ್ಸರದಿಂದಾಗಿ ಅವರ ಹತ್ಯೆಯಾಗಿದೆ ಎಂದು ಸಿಸಿಬಿ ಪೊಲೀಸ್ ಮೂಲಗಳು ಪಿಸುಗುಟ್ಟಿವೆ.
ತಾಜಾ ವರದಿ:ಸಹಕಾರ ನಗರದ ಪತ್ತಿನ ಸಹಕಾರ ಸಂಘದ ಕ್ಯಾಷಿಯರ್, 23 ವರ್ಷದ ಕಿರಣ್ ಎಂಬಾತ ಸುಮಾರು 50 ಲಕ್ಷ ರುಪಾಯಿ ಅಕ್ರಮ ನಡೆಸಿದ್ದ. ಇದರ ವಿರುದ್ಧ ಸಹಕಾರ ಸಂಘಗಳ ಇಲಾಖೆ ಉಪನಿರ್ದೇಶಕ ಎಸ್.ಪಿ. ಮಹಾಂತೇಶ್ ತನಿಖೆಗೆ ಮುಂದಾಗಿದ್ದರು. ಇದರ ಅಪಾಯವರಿತ ಕ್ಯಾಷಿಯರ್ ಕಿರಣ್ ಖಡಕ್ ಅಧಿಕಾರಿ ಮಹಾಂತೇಶರಿಗೆ ಬೆದರಿಸಲು ನಿರ್ಧರಿಸಿದ್ದ. ಈ ಸಂಬಂಧ ನಾಲ್ವರು ಸುಪಾರಿ ಹಂತಕರನ್ನು ನಿಯೋಜಿಸಿದ.

ಆದರೆ ಮಹಾಂತೇಶನಿಗೆ ಸುಮ್ಮನೆ ಬೆದರಿಕೆ ಹಾಕಿ ಎಂದಷ್ಟೇ ಸೂತ್ರಧಾರಿ ಕಿರಣ್ ಆಜ್ಞಾಪಿಸಿದ್ದ. ಅದಕ್ಕಾಗಿ 45 ಸಾವಿರ ರುಪಾಯಿಯನ್ನೂ ನೀಡಿದ್ದ. ಆದರೆ ಸುಪಾರಿ ಹಂತಕರು ಘಟನೆಯ ವೇಳೆ ಮಹಾಂತೇಶರನ್ನು ಕೊಲೆಯೇ ಮಾಡಿಬಿಟ್ಟರು ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಇದೀಗತಾನೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಚಿಕ್ಕ ಸುಳಿವನ್ನೂ ಬಿಟ್ಟಿರದಿದ್ದ ಹಂತಕರನ್ನು ಹೆಡೆಮುರಿಗೆ ಕಟ್ಟಲು ಸುಮಾರು 200 ಪೊಲೀಸ್ ಅಧಿಕಾರಿಗಳು ಶ್ರಮವಹಿಸಿದ್ದಾರೆ ಎಂದು ಮಿರ್ಜಿ ಹೇಳಿದ್ದಾರೆ.
ಸೂತ್ರಧಾರಿ ಕಿರಣ್, ಶಾಂತಿನಗರದ ಅಯ್ಯಪ್ಪ, ಮುರಳಿ ಮತ್ತು ಶಿವಕುಮಾರ್ ಬಂಧಿತ ಆರೋಪಿಗಳು (ಮೇಲಿನ ಚಿತ್ರದಲ್ಲಿರುವವರು). ಆರೋಪಿಗಳು ಬಳಸಿದ್ದ ಕಾರನ್ನೂವಶಪಡಿಸಿಕೊಳ್ಳಲಾಗಿದೆ. ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲವನ್ನುಂಟುಮಾಡಿದ್ದ ಮಹಾಂತೇಶ್ ಕೊಲೆ ಪ್ರಕರಣವನ್ನು ಕಳೆದ ವಾರವಷ್ಟೇ ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರಿಗೆ ಒಪ್ಪಿಸಲಾಗಿತ್ತು.
ಪತ್ತೇದಾರಿ ಮೊಬೈಲ್: ಕ್ಷಿಪ್ರಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಸಹಕಾರ ಸಂಘಗಳ ಇಲಾಖೆ ಉಪನಿರ್ದೇಶಕ ಎಸ್.ಪಿ. ಮಹಾಂತೇಶ್ ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೂತ್ರಧಾರಿ ಕಿರಣ್, ಸುಪಾರಿ ಹಂತಕರ ಮೊಬೈಲ್ ಫೋನ್ಗಳಿಗೆ ಹಲವು ಬಾರಿ ಕರೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಪ್ರಕರಣವನ್ನು ಭೇದಿಸಲಾಗಿದೆ.












Click it and Unblock the Notifications