ದೇವ್ರು ಕೊಟ್ಟ ಕಾಸುಳಿಯೋಲ್ಲಾ, ಇನ್ನು ಮುಂಡಾಯ್ಸಿದ್ದು?
ಹಣದ ದುರಾಸೆಗೆ ಬಿದ್ದು ದಿನಕ್ಕೊಂದು ಹಗರಣಗಳು ಜಗಜ್ಜಾಹೀರಾಗುತ್ತಿರ ಬೇಕಾದರೆ ಪತ್ರಿಕೆಯಲ್ಲಿ ಫೋಟೋ ಸಮೇತ ಇದರ ವರದಿ ಪ್ರಕಟವಾದಾಗ ಅವರಿಗೆ ಅದು ಅವಮಾನ ಎನಿಸುವುದಿಲ್ಲವೇ? ಅಥವಾ ದುಡ್ಡೇ ಮುಖ್ಯ ಎಂದು ಮೂರೂ ಬಿಟ್ಟ ಕ್ಯಾಟಗರಿಗೆ ತಮ್ಮನ್ನು ಸೇರಿಸಿ ಕೊಂಡಿದ್ದಾರೋ?
ದೇವರು ಕೊಡೊ ದುಡ್ಡೇ ಶಾಶ್ವತ, ಮಿಕ್ಕಿದೆಲ್ಲಾ ಕ್ಷಣಿಕ ಎನ್ನುವ ವಾಸ್ತವತೆ ಇವರಿಗೆ ತಿಳಿಯುವುದು ಯಾವಾಗ? ಕೋಟೆ ಕಟ್ಟಿ, ತಲೆ ಹೊಡೆದು ಸಂಪಾದಿಸಿದ ಅನೈತಿಕ ಹಣ ಇಂದಲ್ಲಾ ನಾಳೆ ಮುಗ್ಗಲ ಮುಳ್ಳಾಗುವುದು ಎನ್ನುವುದಕ್ಕೆ ಈ ಕಲಿಯುಗದಲ್ಲಿ ಜನಾರ್ಧನ ರೆಡ್ಡಿ, ಜಗನ್, ಎ ರಾಜಾ, ಕಲ್ಮಾಡಿ, ಕನಿಮೋಳಿ, ಯಡಿಯೂರಪ್ಪ, ಸಂಪಂಗಿ ಈ ರೀತಿ ಸಾಗುವ ಪಟ್ಟಿ ನೋಡಿಯಾದರೂ ಇವರಿಗೆ ಜ್ಞಾನೋದಯವಾಗುವುದಿಲ್ಲವೇ?
ಬಿಜೆಪಿ ಅಧಿಕಾರಕ್ಕೆ ಬಂದ ಹೊಸದರಲ್ಲಿ ತನ್ನ ದುಡ್ಡಿನ ಮದದಿಂದ ರಾಜಕೀಯ ವ್ಯವಸ್ಥೆಯನ್ನೇ ಗಿರಿಗಿಟ್ಲೆ ಆಡಿಸಿದ ಜನಾರ್ಧನ ರೆಡ್ಡಿಯ ಪಾಡೇನು? ಭೂಗರ್ಭವನ್ನು ತನ್ನ ಇಚ್ಚಾನುಸಾರವಾಗಿ ಕೊರೆದು, ದೇವಾಲಯವನ್ನೂ ಬಿಡದೆ ನೆಲಸಮಗೊಳಿಸಿ, ಚಿನ್ನದ ಸಿಂಹಾಸನದಲ್ಲಿ ಕೂತು, ಚಿನ್ನದ ತಟ್ಟೆಯಲ್ಲಿ ಉಂಡು ಸಾರ್ವಭೌಮನಂತೆ ಮೆರೆದಿದ್ದ ಗಣಿಧಣಿಯ ಇಂದಿನ ಬಾಳೇನು?
ಎರಡು ರಾಜ್ಯದ ಗಡಿಯ ನಕ್ಷೆಯನ್ನೇ ಬದಲಾಯಿಸಿ, ಅಧಿಕಾರಿಗಳನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿ, ಬಳ್ಳಾರಿ, ಸಂಡೂರು, ಹೊಸಪೇಟೆಯ ಜನರು ಮಣ್ಣು ಮಿಶ್ರಿತ ನೀರು ಕುಡಿಯುವಂತೆ ಮಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಸರಕಾರೀ ಯಂತ್ರವನ್ನು ತನಗೆ ಬೇಕಂತೆ ಆಟವಾಡಿಸಿ ತಿಂಗಳು ತಿಂಗಳು ಕಳೆದರೂ ಜೈಲಿನಿಂದ ಹೊರಬರಲಾರದೆ ಪರಿತಪಿಸುತ್ತಿರುವ ಇವರ ಇಂದಿನ ಬಾಳಿಗೆ ಆ ಭಾಗದ ಅದೆಷ್ಟು ಜನರ ಶಾಪವಿರಬೇಡ?
ಈ ರಾಜಕಾರಿಣಿಗಳು, ಅಧಿಕಾರಿಗಳು ಭ್ರಸ್ಟಾಚಾರದಿಂದ ಜೈಲು ಸೇರಬೇಕಾದರೆ ಅವರವರ ಕುಟುಂಬದವರು, ಕೆಲ ಹಿತೈಷಿಗಳು, ಕೆಲ ಬೆಂಬಲಿಗರು ಕೊರಗುವುದು ಬಿಟ್ಟರೆ ಇವರಿಗಾಗಿ ಕಣ್ಣೀರು ಹಾಕುವವರು ಯಾರಿದ್ದಾರೆ. ವಾಮಮರ್ಗದಲ್ಲಿ ದುಡ್ಡು ಸಂಪಾದಿಸಿ ತಿಮ್ಮಪ್ಪನಿಗೆ ಕಿರೀಟ ಕೊಟ್ಟರೆ ಆತ ಇಂತ ಸೇವೆಯನ್ನು ಮತ್ತು ಇಂಥಹ ಭಕ್ತರನ್ನು ಮೆಚ್ಚಾನ?
ಕೆಲ ದಿನಗಳ ಹಿಂದೆ ಬಿಜೆಪಿ ಶಾಸಕರೊಬ್ಬರನ್ನು ಪೊಲೀಸರು ಜೈಲಿಗೆ ಕರೆದುಕೊಂಡು ಹೋಗುತ್ತಿರ ಬೇಕಾದರೆ ಹೆತ್ತ ತಾಯಿಯ ರೋದನೆ ಮನ ಕಲಕುವಂತೆ ಇದ್ದರೂ ಹರಾಮ್ ಕಾ ಪೈಸಾ ಇಂದಲ್ಲಾ ನಾಳೆ ಕಕ್ಕಲೇ ಬೇಕು ಎನ್ನುವ ದೇವರು ಬರೆದಿಟ್ಟ ನ್ಯಾಯ ಭ್ರಷ್ಟ ಅಧಿಕಾರಿಗಳಿಗೆ, ರಾಜಕಾರಿಣಿಗಳಿಗೆ ಒಂದು ಪಾಠವಾಗುವುದು ಯಾವಾಗ ?
ನ್ಯಾಯದೇಗುಲದಲ್ಲಿ ಅನ್ಯಾಯ ಮಾಡಿ ಸಿಬಿಐ ಅಧಿಕಾರಿಗಳ ಕೈಲಿ ಸಿಕ್ಕಿಬಿದ್ದ ಆಂಧ್ರ ರಾಜ್ಯದ ನ್ಯಾಯಮೂರ್ತಿಗೆ ಇಂದು ಏನು ಬೆಲೆ ಇದೆ ? ಕೋಟಿ ರೂಪಾಯಿಗೆ ಅಡವಿಟ್ಟ ಇವರ ಮತ್ತು ಇವರ ಕುಟುಂಬದ ಮಾನ ಮರ್ಯಾದೆ, ಅದಕ್ಕಿಂತ ಹೆಚ್ಚಾಗಿ ಕೋರ್ಟ್ ಮೇಲೆ ಜನರು ಇಟ್ಟ ನಂಬಿಕೆಗೆ ದ್ರೋಹ ಬಗೆದಿದಲ್ಲವೇ?