ನಾನ್ಯಾಕೆ ರಾಜೀನಾಮೆ ನೀಡಲಿ ಚಿದು ತಿರುಗೇಟು
ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಗೃಹ ಸಚಿವ ಪಿ ಚಿದಂಬರಂ ಅವರ ವಿರುದ್ಧ ತನಿಖೆಗೆ ಆದೇಶ ಹೊರಡಿಸಿತ್ತು.
2009ರಲ್ಲಿ ಚಿದಂಬರಂ ಅವರು ಚುನಾವಣಾ ಅಕ್ರಮಗಳನ್ನು ನಡೆಸಿ ಗೆಲುವ ಸಾಧಿಸಿದ್ದಾರೆ ಎಂದು ಪರಾಜಿತ ಅಭ್ಯರ್ಥಿ ಎಐಎಡಿಎಂಕೆ ಮುಖಂಡ ರಾಜಕಣ್ಣಪ್ಪ ಅವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಚಿದಂಬರಂ ಅವರ ವಿರುದ್ಧ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿತ್ತು.
15ನೇ ಲೋಕಸಭಾ ಸದಸ್ಯರ ಮೇಲೆ ಸುಮಾರು 111ಕ್ಕೂ ಅಧಿಕ ಚುನಾವಣಾ ಅವ್ಯವಹಾರ ಪ್ರಕರಣಗಳು ದಾಖಲಾಗಿದೆ. ಮದ್ರಾಸ್ ಹೈಕೋರ್ಟ್ ನಾನು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ ಎಂದ ಮಾತ್ರಕ್ಕೆ ನಾನು ಅಪರಾಧಿ ಎಂದು ನಿರ್ಧರಿಸುವುದು ಸರಿಯಲ್ಲ ಎಂದು ಚಿದಂಬರಂ ಹೇಳಿದ್ದಾರೆ.
ಹೈಕೋರ್ಟ್ ಆದೇಶ ಹೊರಬಿದ್ದ ಮೇಲೆ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಹಾಗೂ ಎಐಎಡಿಎಂಕೆ ಮುಖ್ಯಸ್ಥೆ ಜೆ ಜಯಲಲಿತಾ ಅವರು ತಕ್ಷಣವೇ ಚಿದಂಬರಂ ಅವರ ರಾಜೀನಾಮೆಗೆ ಆಗ್ರಹಿಸಿದ್ದರು. ಪ್ರಧಾನಿ ಮನಮೋಹನ್ ಸಿಂಗ್ ಅವರು ಕೂಡಲೇ ಸಂಪುಟದಿಂದ ಕಿತ್ತುಹಾಕುವಂತೆ ಕೇಳಿಕೊಂಡಿದ್ದರು. ಅದರೆ, ಚಿದಂಬರಂ ಅವರು ಎಲ್ಲಾ ಆರೋಪಗಳನ್ನು ಬದಿಗೊತ್ತಿ, ರಾಜೀನಾಮೆಯನ್ನು ನೀಡುವುದಿಲ್ಲ ಎಂದಿದ್ದಾರೆ. (ಪಿಟಿಐ)