ಬೇಲ್ ಗಾಗಿ ಲಂಚ ನನ್ನ ಕೈವಾಡವಿಲ್ಲ : ಕೆಎಂಎಫ್ ರೆಡ್ಡಿ
ನ್ಯಾಯಾಂಗ ವ್ಯವಸ್ಥೆ ಮೇಲೆ ನಮಗೆ ನಂಬಿಕೆ ಹಾಗೂ ಗೌರವವಿದೆ. ನ್ಯಾಯಯುತವಾಗಿ ಕಾನೂನು ಹೋರಾಟ ನಡೆಸಿ ನ್ಯಾಯ ಪಡೆಯುತ್ತೇವೆ ವಿನಃ ಅನ್ಯ ಮಾರ್ಗ ಅನುಸರಿಸುವುದಿಲ್ಲ.
ಕಳೆದ 9 ತಿಂಗಳಿನಿಂದ ಜನಾರ್ದನ ರೆಡ್ಡಿ ಅವರು ಸಿಬಿಐ ನ್ಯಾಯಾಲಯದ ವಶದಲ್ಲಿದ್ದಾರೆ. ಆರೋಪಿಯಾದವರು ನ್ಯಾಯಾಲಯದಲ್ಲಿ ಜಾಮೀನು ಪಡೆಯುವುದು ಸಂವಿಧಾನ ಬದ್ಧ ಹಕ್ಕು, ಇದನ್ನು ಕಾನೂನು ಮೂಲಕವೇ ಪಡೆದುಕೊಳ್ಳುತ್ತೇವೆ ಹೊರತೂ ವಾಮಮಾರ್ಗ ಅನುಸರಿಸುವುದಿಲ್ಲ ಎಂದು ಸೋಮಶೇಖರ ರೆಡ್ಡಿ ಅವರು ನೀಡಿರುವ ಪತ್ರಿಕಾ ಪ್ರಕಟಣೆ ಹೇಳುತ್ತಿದೆ.
ಸಿಬಿಐ ಸಂಸ್ಥೆ ಕೆಲವು ಘಟನಗಳಲ್ಲಿ ತಪ್ಪು ಅಭಿಪ್ರಾಯ ಬರುವಂತೆ ನಡೆದುಕೊಳ್ಳುತ್ತಿದೆ. ಅದರೆ, ಭಗವಂತನ ಅನುಗ್ರಹದಿಂದ ನಮಗೆ ಜಯ ಸಿಗಲಿದೆ ಎಂದು ಸೋಮಶೇಖರ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಡ್ಜ್ ಗೆ ಕೋಟಿಗಟ್ಟಲೇ ಹಣ ನೀಡಿರುವುದು ಸುಳ್ಳು. ನಾವು ಎಂದೂ ಆ ರೀತಿ ಖರೀದಿ ಯತ್ನ ಮಾಡಿಲ್ಲ ಎಂದು ಕೆಎಂಎಫ್ ರೆಡ್ಡಿ ಪುನರುಚ್ಚರಿಸಿದ್ದಾರೆ.
ಹಿರೇಮಠ್ ಪಟ್ಟಿ : ಹುಬ್ಬಳ್ಳಿಯಲ್ಲಿ ಸೋಮವಾರ(ಜೂ.4) ಪತ್ರಿಕಾಗಷ್ಠಿ ನಡೆಸಿದ ಸಮಾಜ ಪರಿವರ್ತನಾ ಸಂಸ್ಥೆ ಮುಖ್ಯಸ್ಥ, ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಸ್ ಆರ್ ಹಿರೇಮಠ್ ಅವರು, ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮಶೇಖರ್ ರೆಡ್ಡಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುವಂತೆ ಆಗ್ರಹಿಸಿದ್ದರು. ಜಡ್ಜ್ ಗೆ ಲಂಚ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕೆ ವ್ಯಕ್ತವಾದ ರೆಡ್ಡಿ ಆಪ್ತರು ಹೆಸರುಗಳನ್ನು ಬಹಿರಂಗಪಡಿಸಿದ್ದರು.
ಇದಕ್ಕೂ ಮುನ್ನ ಜಡ್ಜ್ ಟಿ ಪಟ್ಟಾಭಿರಾಮರಾವ್ ಅವರು ಗಾಲಿ ಜನಾರ್ದನ ರೆಡ್ಡಿಗೆ ಜಾಮೀನು ನೀಡುವಂತೆ ಡೀಲ್ ಕುದುರಿಸಿದ್ದೆ ಕಾನೂನು ಮತ್ತು ಸಂಸದೀಯ ಸಚಿವ ಎರಸು ಪ್ರತಾಪ್ ರೆಡ್ಡಿ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ನಂತರ ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಎರಸು ಸ್ಪಷ್ಟಪಡಿಸಿದ್ದರು.
ರೆಡ್ಡಿ ಆಪ್ತರಾದ ಕಂಪ್ಲಿ ಶಾಸಕ ಸುರೇಶ್ ಬಾಬು, ಕೂಡ್ಲಿಗಿ ಶಾಸಕ ನಾಗೇಂದ್ರ ಸೇರಿದಂತೆ ಸುಮಾರು 12ಕ್ಕೂ ಅಧಿಕ ಪ್ರಭಾವಿ ನಾಯಕರು ಜಾಮೀನಿಗಾಗಿ ಲಂಚ ಪ್ರಕರಣದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಸಿಬಿಐ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ, ಎಫ್ಐಆರ್ ಆಗಲಿ ಹಾಕಿಲ್ಲ.
ಓಬಳಾಪುರಂ ಗಣಿ ಸಂಸ್ಥೆ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಎಂಡಿ ಶ್ರೀನಿವಾಸ್ ಅವರಿಗೆ ಹೈದರಾಬಾದಿನ ಸಿಬಿಐ ವಿಶೇಷ ನ್ಯಾಯಾಲಯ ಕಳೆದ ಮೇ 11 ರಂದು ಜಾಮೀನು ಮಂಜೂರು ಮಾಡಿತ್ತು. ಗಮನಾರ್ಹವೆಂದರೆ ಮತ್ತೊಂದು ಗಣಿ ಅಕ್ರಮ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ಗಾಲಿ ರೆಡ್ಡಿಗೆ ಬಿಡುಗಡೆ ಭಾಗ್ಯ ಒದಗಿ ಬಂದಿರಲಿಲ್ಲ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿಗೆ ಬೇಲ್ ನೀಡಿದ್ದ ನಾಂಪಲ್ಲಿ ಸಿಬಿಐ ನ್ಯಾಯಾಧೀಶ ರಾಮರಾವ್ ಅವರು 5 ಲಕ್ಷ ರೂಪಾಯಿ ಶ್ಯೂರಿಟಿ ಸಲ್ಲಿಸುವಂತೆ ಆದೇಶಿಸಿದ್ದರು. ಜತೆಗೆ, ದೇಶಬಿಟ್ಟು ಹೊರಗೆ ಹೋಗಬಾರದು ಎಂದೂ ಆದೇಶ ನೀಡಿದ್ದರು.