BMTC ಕಂಡಕ್ಟರ್ ಕಾಮಣ್ಣ ಕೊನೆಗೂ ಸಿಕ್ಕಿಬಿದ್ದ

ಟಿಕೆಟ್ ಗಾಳ: ಇಂತಿಪ್ಪ ಕಂಡಕ್ಟರ್ ತಮ್ಮ ವರಸೆಯನ್ನು ಹೇಗೆ 'ಕಂಡಕ್ಟ್' ಮಾಡುತ್ತಿದ್ದರು ಅಂದರೆ ... ಆತ ತನ್ನ ಕಾಮತೃಷೆಗೆ ಗುರಿಯಾಗಿಸಿಕೊಳ್ಳುತ್ತಿದ್ದುದು ಬಡ ಕುಟುಂಬದ ಯುವತಿಯರನ್ನು. ತನ್ನ ಬಸ್ಸಿನಲ್ಲಿ ಬರುವ ಯುವತಿಯರಿಗೆ ಹಣ ಪಡೆಯದೆ ಟಿಕೆಟ್ ನೀಡುವ ಮೂಲಕ ಗಾಳ ಹಾಕುತ್ತಿದ್ದ. ಋಣಕ್ಕೆ ಗಂಟುಬಿದ್ದು ಯುವತಿಯರು ಅವನ ಸ್ನೇಹಕ್ಕೆ ಮಾರಿಹೋಗುತ್ತಿದ್ದರು.
ಕಂಡಕ್ಟರ್ ಸಿದ್ಧಾರ್ಥನ ಖದೀಮತನ ಪ್ರಕಟವಾಗುತ್ತಿದ್ದುದೇ ಆವಾಗ. ಋಣಕ್ಕೆ ಬಿದ್ದ ಹೆಣ್ಣುಮಕ್ಕಳನ್ನು ಪುಸಲಾಯಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವು ವರ್ಷಗಳಿಂದ BMTC ಬಸ್ಸಿನಲ್ಲಿ ಚಾಲಕ ಕಂ ನಿರ್ವಾಹಕನಾಗಿ ಕೆಲಸ ಮಾಡುತ್ತಿರುವ ಸಿದ್ಧಾರ್ಥ, ಪ್ರತಿದಿನ ಬಸ್ಸಿನಲ್ಲಿ ಬರುವ ಯುವತಿಯರು, ಅಮಾಯಕ ಮಹಿಳೆಯರಿಗೆ ಟಿಕೆಟ್ ನಿಡುತ್ತಿದ್ದ. ಆದರೆ ಹಣ ಪಡೆಯುತ್ತಿರಲಿಲ್ಲ. ಹೀಗೆ ಕ್ರಮೇಣ ಅವರ ಪರಿಚಯ ಮಾಡಿಕೊಂಡು, ಅವರ ಮೊಬೈಲ್ ನಂಬರ್ ಪಡೆಯುತ್ತಿದ್ದ. ತಕ್ಷಣ ಸಮಯಾವಕಾಶ ಮಾಡಿಕೊಂಡು ಅವರಿಗೆ ರಿಂಗಣಿಸುತ್ತಿದ್ದ.
ಹೀಗೆ ಸ್ನೇಹ ಬೆಳೆದಂತೆಲ್ಲ ರಜೆ, ಅದೂ ಇದೂ ಎಂದು ಸಂದರ್ಭೋಚಿತವಾಗಿ ಕರೆಯುತ್ತಿದ್ದ. ಮುಂದೆ ಅವರ ಜತೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದ. ಅಂತಹ ಯುವತಿಯರನ್ನು ತನ್ನ ಬೈಕ್ ಮೇಲೆ ನಿರ್ಜನ ಪ್ರದೇಶಗಳಿಗೆ ಕರೆದೊಯ್ಯುತ್ತಿದ್ದ. ಅಲ್ಲಿ ಆ ಹೆಂಗೆಳೆಯರ ಮೇಲೆ ಅತ್ಯಾಚಾರ ಮಾಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನೂ ಒಂದು ಆಟ ಶುರುವಿಟ್ಟುಕೊಂಡ: ಖದೀಮ ಕಂಡಕ್ಟರ್ ಸಿದ್ಧಾರ್ಥ ಇನ್ನೂ ಒಂದು ಆಟ ಶುರುವಿಟ್ಟುಕೊಳ್ಳುತ್ತಿದ್ದ. BMTCಯಲ್ಲಿ ಕೆಲಸ ಖಾಲಿಯಿದೆ. ಕೆಲಸ ಕೊಡಿಸುವುದಾಗಿ ಯುವತಿಯರಿಗೆ ಗಾಳ ಹಾಕುತ್ತಿದ್ದ. ಅವರಿಂದ ಅಂಕಪಟ್ಟಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದ.
ಕೆಲ ದಿನಗಳ ನಂತರ ಅವರಿಗೆ ಫೋನ್ ಮಾಡಿ, ಕೆಲಸ ಸಿಕ್ಕಿದೆ. ನನ್ನಲ್ಲಿಗೆ ಬಂದು appointment order ತೆಗೆದುಕೊಂಡು ಹೋಗಬಹುದು ಎಂದು ಬಾಣ ಬಿಡುತ್ತಿದ್ದ. ಅಷ್ಟೇ ಅಲ್ಲ, ಮನೆಯ ವಿಳಾಸ ನೀಡಿದರೆ ಖುದ್ದು ತಾನೇ ಬಂದು ಅವರನ್ನು ಕರೆದುಕೊಂಡು ಹೋಗುವುದಾಗಿ ಸಖತ್ತಾಗಿ ಬಿಸ್ಕತ್ ಹಾಕುತ್ತಿದ್ದ. ಹೀಗೆ ಮಡಿಕೇರಿ ಮೂಲದ ಯುವತಿಯನ್ನು ವಂಚಿಸುವ ಸಂದರ್ಭದಲ್ಲಿ ಕಾಮಾಂಧ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಮಡಿಕೇರಿ ಮೂಲದ ಯುವತಿಯು ಬೆಂಗಳೂರಿನ ಯಶವಂತಪುರದಲ್ಲಿರುವ ತನ್ನ ಮನೆ ವಿಳಾಸ ನೀಡುತ್ತಿದ್ದಂತೆ ತನ್ನ ವಿಲಾಸಕ್ಕೆ ಮೀನು ಸಿಕ್ಕಿದೆ ಎಂದು plan ಹಾಕಿದ ಭಡವ, ಸೀದಾ ಆಕೆಯ ಮನೆಗೆ ಹೋಗಿದ್ದಾನೆ. ಸದರಿ ಯುವತಿಯನ್ನು ಹಾಗೆ ಮನೆಯಿಂದ ಎಬ್ಬಿಸಿಕೊಂಡು ಹೋದ ಭೂಪ appointment order ಕೊಡಿಸುವುದಾಗಿ ಯಶವಂತಪುರದಲ್ಲಿರುವ BMTC ಕಚೇರಿಗೆ ಕರೆದುಕೊಂಡು ಹೋಗಿದ್ದಾನೆ.
ಹಾಗೆ ಮೇಲ್ಮಹಡಿಗೆ ಕರೆದೊಯ್ದ ಕಂಡಕ್ಟರ್ ಸಿದ್ಧಾರ್ಥ ಅದು ನಿರ್ಜನವಾಗಿರುವುದನ್ನು ಗಮನಿಸಿ, ತನ್ನ ವರಸೆ ಶುರುವಿಟ್ಟುಕೊಂಡ. ಆಕೆಯ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ. ಅದಕ್ಕೆ ಪ್ರತಿರೋಧ ವ್ಯಕ್ತವಾದಾಗ ಮಾಂಗಲ್ಯ ಸರ ಕಿತ್ತುಕೊಂಡು, ಆಕೆಯನ್ನು ಅಲ್ಲೇ ಕೊಠಡಿಯೊಂದರಲ್ಲಿ ಕೂಡಿ ಹಾಕಿ, ಓಡಿಹೋದ.
ಮುಂದೆ, ಸಾರ್ವಜನಿಕರಿಂದ ಹೊರ ಬಂದ ಯುವತಿ, ಪೊಲೀಸರಿಗೆ ಸವಿವರ ಮಾಹಿತಿ ನೀಡಿದರು. ಕಾರ್ಯಾಚರಣೆಗಿಳಿದ ಪೊಲೀಸರು ಆರೋಪಿಯನ್ನು ತಕ್ಷಣ ಬಂಧಿಸುವಲ್ಲಿ ಯಶಸ್ವಿಯಾದರು. ವಿಚಾರಣೆ ವೇಳೆ ಕಂಡಕ್ಟರ್ ಸಿದ್ಧಾರ್ಥ ತನ್ನ ಒಂದೊಂದೇ 'ಸಾಧನೆಗಳ' ವಿವರ ನೀಡಿದ್ದಾನೆ.
ಕಂಡಕ್ಟರ್ ಸಿದ್ಧಾರ್ಥ ಕಳೆದ 4 ವರ್ಷಗಳಿಂದ BMTCಯಲ್ಲಿ ಕೆಲಸದಲ್ಲಿದ್ದಾನೆ. ಡಿಪೋ 17, 7, 8 ಮತ್ತೊ 30ರಲ್ಲಿ ಕೆಲಸದಲ್ಲಿದ್ದ. ಗಮನಾರ್ಹವೆಂದರೆ ಈ ಆರೋಪಿ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದಾನೆ. ಆದರೆ ಪದೇ ಪದೆ ಪತ್ನಿಯನ್ನು ಊರಿಗೆ ಕಳುಹಿಸಿ, ಇತ್ತ ತನ್ನ ಖದೀಮ ಕೆಲಸ ಮಾಡುತ್ತಿದ್ದ.












Click it and Unblock the Notifications