ನಟಿ ತಾರಾ, ಟಿವಿ9 ಮೇಲೆ ಬುಸುಗುಟ್ಟಿದ್ದು ಏಕೆ?
ಜಾಮೀನು ಸಿಗಲು ಕಾರಣ ಏನು ಆಮೇಲೆ ನೋಡೋಣ..ಮೊದಲಿಗೆ ಜೈಲಿನಿಂದ ಹೊರಬಿದ್ದ ತಾರಾ ಬುಸುಗುಟ್ಟಿದ್ದು ಏಕೆ? ಯಾರ ಮೇಲೆ? ತಿಳಿಯೋಣ...
ಚಂಚಲಗೂಡ ಜೈಲಿನಲ್ಲಿದ್ದ ತಾರಾ, ಜಾಮೀನು ಪಡೆದು ಜೈಲಿನಿಂದ ಹೊರಬಿದ್ದ ಮೇಲೆ ಟಿವಿ9 ಸುದ್ದಿ ವಾಹಿನಿ ಮೇಲೆ ಕೆಂಡಕಾರಿದ್ದಾರೆ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರೆಸಿ, ರೋಚಕ ಕತೆ ಕಟ್ಟಿ ವರದಿ ಮಾಡಿರುವ ಟಿವಿ9 ಮೇಲೆ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇನೆ.
ಎರಡು ತಿಂಗಳ ನಂತರ ಹೊರ ಪ್ರಪಂಚ ನೋಡುತ್ತಿರುವುದಕ್ಕ ಸಂತೋಷವಾಗುತ್ತಿದೆ. ಶೀಘ್ರದಲ್ಲೇ ಪತ್ರಿಕಾಗೋಷ್ಠಿ ಕರೆದು ಹಲವು ರಹಸ್ಯಗಳನ್ನು ಹೊರಗೆಡವುತ್ತೇನೆ ಎಂದಿದ್ದಾರೆ.
ಇದಲ್ಲದೆ ಟಿವಿ9ನ ವರದಿಗಾರನೊಬ್ಬ ನನ್ನ ಜೊತೆ ಅನುಚಿತವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ, ಇದನ್ನು ಮುಚ್ಚಿ ಹಾಕಲು ಟಿವಿ9 ನನ್ನ ವಿರುದ್ಧ ಮಿಥ್ಯಾರೋಪ ಮಾಡಿದೆ ಎಂದು ತಾರಾ ಹೇಳಿದ್ದಾರೆ. ತಾರಾ ಪತ್ರಿಕಾಗೋಷ್ಠಿ ಬಗ್ಗೆ ಆಂಧ್ರಪ್ರದೇಶದಲ್ಲಿ ಭಾರಿ ಕುತೂಹಲ ಉಂಟಾಗಿದೆ.
ತಾರಾಗೆ ಜಾಮೀನು ಸಿಕ್ಕಿದ್ದು ಹೇಗೆ?:
ಸುಮಾರು ಎರಡು ತಿಂಗಳ ಕಾಲ ಚಂಚಲಗೂಡ ಜೈಲಿನಲ್ಲಿದ್ದ ನಟಿ ತಾರಾ ಚೌಧರಿ ಅಲಿಯಾಸ್ ರಾಜೇಶ್ವರಿ ಎಂಬ ಪ್ರಮುಖ ಜೈಲುಹಕ್ಕಿ ಹೊರ ಬೀಳಲು ತನಿಖಾಧಿಕಾರಿಗಳ ವೈಫಲ್ಯವೇ ಕಾರಣ ಎನ್ನಬಹುದು. ಹೈಕೋರ್ಟ್ ನ್ಯಾ ಬಿ ಚಂದ್ರ ಕುಮಾರ್ ಅವರು ಈ ಪ್ರಕರಣದಲ್ಲಿ ತಾರಾ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಲು ಕಾರಣವೇ ಸಿಗಲಿಲ್ಲ.
ಮಾನವ ಕಳ್ಳಸಾಗಣೆ, ವೇಶ್ಯಾವಾಟಿಕೆಯಂಥ ಪ್ರಮುಖ ಆರೋಪಗಳನ್ನು ಹೊತ್ತಿದ್ದರು ತಾರಾ ನ್ಯಾಯಾಂಗ ಬಂಧನದಿಂದ ಹೊರಬಿದ್ದಿದ್ದಾರೆ. ತಾರಾ ಚೌಧರಿಯನ್ನು ಬಂಧಿಸಿ 60 ದಿನಗಳಾದರೂ ಚಾರ್ಚ್ ಶೀಟ್ ಸಲ್ಲಿಸಲು ವಿಫಲವಾಗಿದ್ದೇ ತಾರಾ ಬಿಡುಗಡೆಗೆ ಕಾರಣವಾಯಿತು.
Criminal Procedure Code ಪ್ರಕಾರ ನಿಗಿದಿತ ಅವಧಿಯಲ್ಲಿ ತನಿಖಾಧಿಕಾರಿಗಳು ಚಾರ್ಚ್ ಶೀಟ್ ಸಲ್ಲಿಸಲು ವಿಫಲರಾದರೆ ಜಾಮೀನು ನೀಡಬಹುದು ಎಂದಿದೆ.
ಚಾರ್ಚ್ ಶೀಟ್ ಸಲ್ಲಿಸಲು ವಿಫಲರಾದ ತನಿಖಾ ತಂಡ ಹೆಚ್ಚಿನ ವಿಚಾರಣೆಗಾಗಿ ಕೂಡಾ ಮನವಿ ಸಲ್ಲಿಸದ ಕಾರಣ, ತಾರಾಗೆ ಅನಾಯಾಸವಾಗಿ ಜಾಮೀನು ಸಿಕ್ಕಿದೆ. ಆರೋಪಿ ತಾರಾಗೆ ಜಾಮೀನು ನೀಡಬಹುದು ಎಂದು ಕ್ರಿಮಿನಲ್ ಕೋರ್ಟಿಗೆ ಹೈಕೋರ್ಟ್ ನ್ಯಾ ಚಂದ್ರಕುಮಾರ್ ಅವರು ನಿರ್ದೇಶನ ನೀಡಿದ್ದಾರೆ.
ಉದ್ಯಮಿಗಳು, ನಟರು, ರಾಜಕಾರಣಿಗಳು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಬೆಲೆವಣ್ಣುಗಳನ್ನು ಒದಗಿಸಿ ಅವರ ರಾಸಲೀಲೆಯನ್ನು ರಹಸ್ಯವಾಗಿ ಚಿತ್ರೀಕರಿಸುತ್ತಿದ್ದ ತಾರಾ ಬಳಿ ಅನೇಕ ಗಣ್ಯರ ರಹಸ್ಯ ಖಜಾನೆ ಇದೆ ಎನ್ನಲಾಗಿದೆ.
ತಾರಾಳ ಲ್ಯಾಪ್ ಟಾಪ್, ಸ್ಪೈ ಕ್ಯಾಮರಾ ಹಾಗೂ ಪರ್ಸನಲ್ ಡೈರಿಯನ್ನು ಬಂಜಾರಾ ಹಿಲ್ಸ್ ಪೊಲೀಸರ ಕೈಲಿದ್ದು, ಅದರ ರಹಸ್ಯ ಇನ್ನೂ ಹೊರಬಿದ್ದಿಲ್ಲ. ಕಡಪ ಜಿಲ್ಲೆ ಇಬ್ಬರು ರಾಜಕಾರಣಿಗಳ ವಿವರ ಮಾತ್ರ ಬಹಿರಂಗವಾಗಿತ್ತು.
ಅದೃಶ್ಯಂ, ರಾಕ್ಷಸುಡು, ಪ್ರಿಯಾ ಸಖಿ, ಲವ್ ಟಿಕೆಟ್ ಮುಂತಾದ ಚಿತ್ರಗಳಲ್ಲಿ ಈಕೆ ಅಭಿನಯಿಸಿದ್ದಾಳೆ. ಅಂದಿನ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಜೊತೆ ಕೂಡಾ ಫೋಟೋ ತೆಗೆಸಿಕೊಂಡಿದ್ದ ತಾರಾ, ಗಣ್ಯರನ್ನು ಸೆಳೆಯುವ ತಂತ್ರವನ್ನು ಕರಗತ ಮಾಡಿಕೊಂಡಿದ್ದಳು ಎಂದು ತಿಳಿದುಬಂದಿದೆ.