ಗಡ್ಕರಿ, ಬಿಎಸ್ ವೈ ಮೇಲೆ ಸಿಟ್ಟು ರ್ಯಾಲಿಗೆ ಅಡ್ವಾಣಿ ಇಲ್ಲ
ಗುರುವಾರ(ಮೇ.24) ಆರಂಭವಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಯಲ್ಲಿ ನಿತಿನ್ ಗಡ್ಕರಿ ಅವರನ್ನು ಇನ್ನೊಂದು ಅವಧಿಗೆ ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನ ಮುಂದುವರಿಸುವ ನಿರ್ಣಯ ಕೈಗೊಳ್ಳಲಾಯಿತು. ಇದಕ್ಕೆ ಒಕ್ಕೊರಲ ಸಮ್ಮತಿ ವ್ಯಕ್ತವಾಯಿತು. ಆದರೆ, ಹಿರಿಜೀವ ಎಲ್ ಕೆ ಅಡ್ವಾಣಿ ಅವರು ಮಾತ್ರ ಮುಖಗಂಟಿಕ್ಕಿಕೊಂಡಿದ್ದರು.
ಶುಕ್ರವಾರ(ಮೇ.25) ಸಭೆಗೆ ಕಳಂಕಿತ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬರುತ್ತಿದ್ದಂತೆ ಎಲ್ ಕೆ ಆಡ್ವಾಣಿ ಸಿಡಿಮಿಡಿಗೊಂಡಿದ್ದಾರೆ. ಮುಂಬೈನಲ್ಲಿ ನಡೆದಿರುವ ಸಭೆ ಮುಗಿದರೆ ಸಾಕು 84 ವರ್ಷ ವಯಸ್ಸಿನ ದೇಹ ಹೊತ್ತುಕೊಂಡು ರ್ರ್ಯಾಲಿ ಮಾಡಲು ನನ್ನಿಂದ ಆಗುವುದಿಲ್ಲ ನಾನು ಡೆಲ್ಲಿಗೆ ವಾಪಸ್ ಆಗುತ್ತೇನೆ ಎಂದು ಅಡ್ವಾಣಿ ಆಪ್ತ ಸಹಾಯಕರಲ್ಲಿ ಹೇಳಿದ್ದಾರೆ.
ಅಡ್ವಾಣಿ ಸಿಟ್ಟಿಗೆ ಕಾರಣವೇನು?: ಆಸಲಿಗೆ ಅಡ್ವಾಣಿ ಸಿಟ್ಟಿರುವುದು ನಿತಿನ್ ಗಡ್ಕರಿ ಮೇಲಲ್ಲ. ಬಿಎಸ್ ಯಡಿಯೂರಪ್ಪ ಮೇಲೆ ಎಂಬುದು ಸ್ಪಷ್ಟವಾಗಿ ಹೇಳಬಹುದು. ಗಡ್ಕರಿ ಎರಡನೇ ಬಾರಿ ರಾಷ್ಟ್ರಾಧ್ಯಕ್ಷರಾಗುವುದಕ್ಕೆ ಅಡ್ವಾಣಿ ಈ ಹಿಂದೆ ಅಸಮ್ಮತಿ ಸೂಚಿಸಿದ್ದು ನಿಜವಾದರೂ, ಇಂದಿನ ಕೋಪಕ್ಕೆ ಯಡಿಯೂರಪ್ಪ ಪ್ರವೇಶ ಹಾಗೂ ಮೋದಿ ಹೊಗಳಿಕೆ ಕಾರಣ.
ಮುಂಬೈಗೆ ಕಾಲಿಟ್ಟ ಯಡಿಯೂರಪ್ಪ, 'ನರೇಂದ್ರ ಮೋದಿ ನಮ್ಮ ನಾಯಕ, ಪ್ರಧಾನಮಂತ್ರಿಯಾಗಲು ಸೂಕ್ತ ಅಭ್ಯರ್ಥಿ. ಮೋದಿಯನ್ನು ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್ ಕೆ ಅಡ್ವಾಣಿ ಅವರಿಗೆ ಹೋಲಿಸಲು ಸಾಧ್ಯವಿಲ್ಲ' ಎಂದಿದ್ದರು. ಈ ಮಾತುಗಳು ಅಡ್ವಾಣಿ ಅವರನ್ನು ಕೆರಳಿಸಿದೆ.
ಬಿಎಸ್ ವೈ ಸಭೆಗೆ ಬಂದಿದ್ದು ಏಕೆ?: ಮೋದಿ ಪರ ಸಭೆಯಲ್ಲಿ ಮಾತನಾಡುವುದಾಗಿ ಯಡಿಯೂರಪ್ಪ ಬಹಿರಂಗವಾಗಿ ಹೇಳಿದರೂ ಯಡಿಯೂರಪ್ಪ ಸಭೆಗೆ ಬಂದಿದ್ದು ಬೇರೆ ಕಾರಣಕ್ಕೆ ಎಂಬುದು ತಿಳಿದು ಬಂದಿದೆ.
ನಾನು ಸಭೆಗೆ ಬರಬೇಕಾದರೆ ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಕಾರ್ಯತಂತ್ರದ ಬಗ್ಗೆ ಚರ್ಚಿಸುವುದರ ಜೊತೆಗೆ ಕರ್ನಾಟಕ ಸರ್ಕಾರ, ಚುನಾವಣೆ ಬಗ್ಗೆ ಕೂಡಾ ಮಾತನಾಡಬೇಕು ಎಂದು ಗಡ್ಕರಿ ಅವರಿಗೆ ಯಡಿಯೂರಪ್ಪ ತಾಕೀತು ಮಾಡಿದ್ದಾರೆ.
ಉಳಿದಂತೆ ಸಭೆಯಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನ ಮುಂದುವರಿಕೆ ಮತ್ತು ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿಯ ಬಗ್ಗೆ ಚರ್ಚೆ ನಡೆದಿದೆ. ಆದರೆ, ಈ ಬಗ್ಗೆ ಪಕ್ಷದ ಹಿರಿಯನಾದ ನನ್ನನ್ನು ಯಾರೂ ಪ್ರಶ್ನಿಸಿಲ್ಲ ಏಕೆ ಎಂದು ಅಡ್ವಾಣಿ ಕೋಪಗೊಂಡಿದ್ದಾರೆ.
ಗುಜರಾತ್ ಚುನಾವಣೆ ಸಾರಥ್ಯ ವಹಿಸಿಕೊಂಡಿದ್ದ ಸಂಜಯ್ ಜೋಶಿ ರಾಜೀನಾಮೆ ನೀಡಿರುವುದರಿಂದ ಮೋದಿಗೆ ಮೇಲುಗೈ ದೊರೆತಿದೆ. ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ನಿತಿನ್ ಗಡ್ಕರಿ ಇನ್ನೂ ಮೂರು ವರ್ಷಗಳ ಕಾಲ ಮುಂದುವರೆಯಲಿದ್ದಾರೆ.
ಬಿಜೆಪಿಯ ಅಘೋಷಿತ ಪ್ರಧಾನಿ ಅಭ್ಯರ್ಥಿ ಎನಿಸಿರುವ ಮೋದಿ ಅವರ ಬಗ್ಗೆ ಕೆಲ ಹಿರಿಯ ನಾಯಕರು ಅಪಸ್ವರ ಹಾಡುತ್ತಿದ್ದರೂ, ಯಡಿಯೂರಪ್ಪ ಸೇರಿದಂತೆ ಇನ್ನಿತರ ಪ್ರಮುಖ ನಾಯಕರ ಬೆಂಬಲ ಹೆಚ್ಚುತ್ತಿದ್ದು, ಅನಿವಾರ್ಯವಾಗಿ ಮೋದಿ ಜನಪ್ರಿಯತೆಗೆ ಬಿಜೆಪಿ ತಲೆ ಬಾಗಲೇಬೇಕಾಗಿದೆ.