ಹೈಕಮಾಂಡಿಗೆ ಯಡಿಯೂರಪ್ಪ ಭಯ ಕಮ್ಮಿಯಾಗಿಲ್ಲ
2004 ರ ನಂತರ ಬಿಜೆಪಿಗೆ ಆರ್ಥಿಕವಾಗಿ ಆಧಾರವಾಗಿ ನಿಂತವರು ಯಡಿಯೂರಪ್ಪ. ಹತ್ತು ಹಲವು ಚುನಾವಣೆಗಳನ್ನು ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಬಿಜೆಪಿ ಗೆದ್ದಿರುವುದನ್ನು ತೆಗೆದು ಹಾಕುವಂತಿಲ್ಲ. ಮುಂದಿನ ದಿನಗಳಲ್ಲಿ ಚುನಾವಣೆ ಎದುರಿಸಬೇಕಾದರೂ ಲಿಂಗಾಯತ ಮತಗಳು, ಆರ್ಥಿಕ ನೆರವು ಬೇಕಾದರೆ ಮತ್ತೊಮ್ಮೆ ಯಡಿಯೂರಪ್ಪ ಅವರನ್ನೇ ಹೈಕಮಾಂಡ್ ನೆಚ್ಚಿಕೊಂಡಿದೆ. ಹೀಗಾಗಿ ಯಡಿಯೂರಪ್ಪ ತಮ್ಮ ಆಟವನ್ನು ಸಮರ್ಥವಾಗಿ ಆಡುತ್ತಾ ಬಂದರು.
ಈಗ ಬಿಜೆಪಿ ಮೆಕ್ ಡೊನಾಲ್ಡ್ ರೀತಿ ಆಗಿ ಬಿಟ್ಟಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಫ್ರಾಂಚೈಸಿ ಗಳನ್ನು ಹೊಂದಿರುವ ಒಂದು ಸಂಸ್ಥೆ ರೀತಿ ಆಗಿದೆ. ಗುಜರಾತ್ ನಲ್ಲಿ ನರೇಂದ್ರ ಮೋದಿ ಇರಬಹುದು, ರಮಣ್ ಸಿಂಗ್ ಇರಬಹುದು ಅಥವಾ ಇಲ್ಲಿ ಯಡಿಯೂರಪ್ಪ ಇರಬಹುದು. ಹೈಕಮಾಂಡ್ ನೇರ ಪ್ರಭಾವ ಇಲ್ಲದೆ ರಾಜ್ಯ ಭಾರ ನಡೆಸಿದರು.
ಯಡಿಯೂರಪ್ಪ played a nice politics.. ಅಧಿಕಾರ ಕಳೆದುಕೊಂಡ ನಂತರವೂ ಸದಾ ಕಾಲ ಅಧಿಕಾರದ ಬಗ್ಗೆ ಮಾತಾಡುತ್ತಾ ಇದ್ದರು. ಜನರ ಮನಸ್ಸಿನಲ್ಲಿ ಸದಾ ನಾನೊಬ್ಬನೇ ರಾಜ ಎನ್ನುವ ರೀತಿ ಯಾತ್ರೆಗಳನ್ನು ಆಯೋಜಿಸಿದರು. ಶಾಸಕರನ್ನು ಒಟ್ಟುಗೂಡಿಸಿದರು. ಕೆಲವು ಕಡೆ ಅವರು ಬಳಸಿದ ಮಾರ್ಗ ಸರಿ ಇಲ್ಲದೆ ಇರಬಹುದು. ಅದರ ಬಗ್ಗೆ ಚರ್ಚಿಸಿದರೆ ದೊಡ್ಡ ಕತೆಯಾಗುತ್ತೆ. ಆದರೆ, ಹೈಕಮಾಂಡ್ ಗೆ ಯಡಿಯೂರಪ್ಪ ಎಂದರೆ ಇನ್ನೂ ಭಯ ಇದ್ದೇ ಇದೆ. ಆ ಕಾರಣಕ್ಕೆ ರಾಜ್ಯದಲ್ಲಿ ಬಿಜೆಪಿ ಬಿಕ್ಕಟ್ಟು ಮುಂದುವರೆಯುತ್ತಲೇ ಇದೆ.
ಹಿಪಾಕ್ರಾಸಿ ಹೇಗಿದೆ ನೋಡಿ : ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಎಲ್ಲಾ ಸಿಎಂಗಳ ಕಾಲದ ತನಿಖೆಯಾಗಲಿ ಎಂದು ಬಿಎಸ್ ಯಡಿಯೂರಪ್ಪ ಆಗ್ರಹಿಸುತ್ತಿದ್ದಾರೆ. ಇದೇ ರೀತಿ ಕೇಂದ್ರದಲ್ಲಿ 2ಜಿ ತರಂಗ ಗುಚ್ಛ ಹಗರಣಕ್ಕೆ ಸಂಬಂಧಿಸಿದಂತೆ ಎ ರಾಜಾ ಕಾಲದ ತನಿಖೆ ಮಾತ್ರ ಯಾಕೆ? ಎನ್ ಡಿಎ ಸರ್ಕಾರದ ಕಾಲದ ಅಕ್ರಮದ ತನಿಖೆಯೂ ಆಗಲಿ ಎಂದು ಆಗ್ರಹಿಸುತ್ತಿದೆ.
ಕರ್ನಾಟಕದ ಇಮೇಜ್ ಹಾಳು ಮಾಡಿದ್ದು ಚೀನಾ ಎಂಬುದನ್ನು ಮರೆಯುವಂತಿಲ್ಲ. ಗಣಿಗಾರಿಕೆ ಪ್ರಕರಣಕ್ಕೂ 2 ಜಿ ಹಗರಣಕ್ಕೂ ಸಮಾನತೆಯನ್ನು ಕಾಣಬಹುದು. ಬರೀ ಸಿಬಿಐ ತನಿಖೆಯಾಗಿ ಇದು ಉಳಿದಿಲ್ಲ. ಸುಪ್ರೀಂಕೋರ್ಟ್ ಪ್ರತಿ ಹಂತವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಗಣಿಗಾರಿಕೆ ಆರಂಭದ ದಿನದಿಂದ ಆಗಿರುವ ಅಕ್ರಮಗಳನ್ನು ಬಾಲಿಗೆಳೆಯುವವರೆಗೂ ರಾಜ್ಯಕ್ಕೆ ಉಳಿಗಾಲವಿಲ್ಲ ಎಂದು ಕೃಷ್ಣಪ್ರಸಾದ್ ಹೇಳಿದರು.