ಮುತ್ತಯ್ಯ-ರಾಜು ರಾಮುಲು ಪಕ್ಷದ ಕ್ಯಾಂಡಿಡೇಟ್?
ಆದರೆ ಅವರ ಆಂತರ್ಯದಲ್ಲಿ ಬೇರೆಯದೇ ಉದ್ದೇಶ ನೆಲೆಸಿತ್ತು ಎನ್ನುತ್ತಿದೆ ಮುತ್ತಯ್ಯನವರ ಆಪ್ತವಲಯ. ಇನ್ನು, ಮುತ್ತಯ್ಯ ಜತೆಜತೆಗೆ ಬಂಧನಕ್ಕೀಡಾದ ಗಣಿ ಇಲಾಖೆಯ ನಿವೃತ್ತ ನಿರ್ದೇಶಕ ಎ.ಪಿ. ರಾಜು ಅವರಿಗೂ ರಾಜಕೀಯ ಪ್ರವೇಶದ ಬಯಕೆಯಿತ್ತು ಎನ್ನಲಾಗಿದೆ. ರಾಜು ಕಳೆದ ಆಗಸ್ಟಿನಲ್ಲಿ ನಿವೃತ್ತಿಗೊಂಡಿದ್ದರೆ ಮುತ್ತಯ್ಯ ಅವರು ಆರು ತಿಂಗಳ ಹಿಂದೆ ಅಮಾನತುಗೊಂಡರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯ ಏಣಿ ಹತ್ತುವುದು ಅವರ ಎಣಿಕೆಯಾಗಿತ್ತು. ಮೊಳಕಾಲ್ಮೂರು ಮೀಸಲು (ಪರಿಶಿಷ್ಟ ವರ್ಗ) ಕ್ಷೇತ್ರದಿಂದ ರಾಜಕೀಯ ಆರಂಗೇಟ್ರಂ ಹಾಕಲು ಮುತ್ತಯ್ಯ ಸದ್ದಿಲ್ಲದೆ ಸಿದ್ಧತೆ ನಡೆಸಿದ್ದರೆ ರಾಜು ಅವರು ಚಳ್ಳಕೆರೆ ಮೀಸಲು (ಪರಿಶಿಷ್ಟ ವರ್ಗ) ಕ್ಷೇತ್ರದಿಂದ ರಾಜಕೀಯಕ್ಕೆ ಧುಮುಕಲು ಸನ್ನದ್ಧರಾಗಿದ್ದರು ಎನ್ನಲಾಗಿದೆ.
'ಮೂಲತಃ ಚಿತ್ರದುರ್ಗದವರಾದ ಈ ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಮ್ಮ ಸಮುದಾಯದ ಅಖಂಡ ಬೆಂಬಲ ಹೊಂದಿದ್ದಾರೆ. ಈ ಕ್ಷೇತ್ರಗಳಲ್ಲಿನ ಪ್ರತಿ ಹಳ್ಳಿಯಲ್ಲೂ ಬೆಂಬಲಿಗರನ್ನು ಹೊಂದಿದ್ದಾರೆ. ಗ್ರಾಮಹಬ್ಬ, ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಇತ್ತೀಚೆಗೆ ಅವರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ದೇವಾಲಯಗಳು ಮತ್ತಿತರ ಸಾರ್ವತ್ರಿಕ ಯೋಜನೆಗಳಿಗೆ ಕೊಡುಗೈ ದಾನಿಗಳಾಗಿದ್ದರು. ಅದೆಲ್ಲ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧಪಡಿಸಿಕೊಳ್ಳುವ ಪ್ರಯತ್ನವಾಗಿತ್ತು' ಎನ್ನುತ್ತಿವೆ ಮೂಲಗಳು.
2009ರಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಮುತ್ತಯ್ಯ ಮತ್ತು ರಾಜು ಅವರನ್ನು ವರ್ಗಾಯಿಸಿದಾಗ ಹಠಕ್ಕೆ ಬಿದ್ದ ಜನಾರ್ದನ ರೆಡ್ಡಿ ಆ ವರ್ಗಾವಣೆಗಳನ್ನು ರದ್ದುಪಡಿಸುವಲ್ಲಿ ಯಶಸ್ವಿಯಾಗಿದ್ದರು.
ಹಾಗೆ ನೊಡಿದರೆ ಮುತ್ತಯ್ಯ ಅವರು ರಾಜಕೀಯ ಮಹತ್ವಾಕಾಂಕ್ಷಿಯೇ. ಹಾಗಾಗಿಯೇ ಜನಾರ್ದನ ರೆಡ್ಡಿಯವರ ಆಶಯಕ್ಕೆ ವಿರುದ್ಧವಾಗಿ ಎಂದೂ ಅವರು ನಡೆದುಕೊಳ್ಳಲಿಲ್ಲ. ಅಷ್ಟೇ ಈ ಹಿಂದೆಯೇ ಶ್ರೀರಾಮುಲು ಅವರ ಕೃಪಾಕಟಾಕ್ಷದಿಂದ 2008ರಲ್ಲಿ ಮೊಳಕಾಲ್ಮೂರು ಮತ್ತು ಜಗಳೂರು ತಮ್ಮ ಸಮೀಪ ಬಂಧುಗಳಿಬ್ಬರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾದರು. ಆದರೆ ಅವರು ಜಯಗಳಸದೇ ಮುತ್ತಯ್ಯ ತಾತ್ಕಾಲಿಕ ಅಪಜಯ ಅನುಭವಿಸಿದರು ಎಂದು ಮುತ್ತಯ್ಯ ಸಮೀಪವರ್ತಿಗಳು ಹೇಳುತ್ತಾರೆ.
ಇದೀಗ ಖುದ್ದಾಗಿ ಇಬ್ಬರೂ ಶ್ರೀರಾಮುಲು ಅವರ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವ ಸೂಚನೆಗಳಿವೆ. ಗಣಿ ಅಕ್ರಮ ಋಣ ಸಂದಾಯ ಮಾಡುತ್ತಾ, ತನ್ಮೂಲಕ ರಾಜಕೀಯವಾಗಿಯೂ ಬಳ್ಳಾರಿ ಸೋದರರ ಬೆಂಬಲಕ್ಕೆ ನಿಲ್ಲುವುದು ಅವರ ಇರಾದೆಯಾಗಿತ್ತು.