ಈಶ್ವರಪ್ಪ-ಸದಾ ಪ್ರಯತ್ನಕ್ಕೆ ಹೈಕಮಾಂಡ್ ತಣ್ಣೀರು

ಸಂಪುಟ ವಿಸ್ತರಣೆ ಮಾಡಿದರೆ ಯಡಿಯೂರಪ್ಪ ಬಣ ಬಂಡಾಯ ಏಳುವ ಸಾಧ್ಯತೆ ಇದೆ. ಆದ್ದರಿಂದ ಸದ್ಯಕ್ಕೆ ಸಂಪುಟ ವಿಸ್ತರಣೆ ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಸಲಹೆ ನೀಡಿದೆ.
ಗಣಿ ಕಂಪನಿಗಳು ಯಡಿಯೂರಪ್ಪ ಸಂಬಂಧಿಗಳು ಇರುವ ಟ್ರಸ್ಟ್ಗೆ ಹಣ ವರ್ಗಾಯಿಸಿರುವ ಆರೋಪದ ಕುರಿತಂತೆ ಸುಪ್ರೀಂಕೋರ್ಟ್ ನೇಮಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ತನಿಖೆ ನಡೆಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ. ಆದ್ದರಿಂದ ಸಿಇಸಿ ಏಪ್ರಿಲ್ 20ರಂದು ನೀಡುವ ವರದಿಗಾಗಿ ಎದುರು ನೋಡುವ ಎಂದು ವರಿಷ್ಠರು ಕಿವಿಮಾತು ಹೇಳಿದ್ದಾರೆ.
ಬಹುತೇಕ ಶಾಸಕರು ಯಡಿಯೂರಪ್ಪ ಅವರಿಗೆ ನಿಷ್ಠರಾಗಿರುವುದರಿಂದ ಈ ಹಂತದಲ್ಲಿ ಸಂಪುಟ ವಿಸ್ತರಣೆಯಾದಲ್ಲಿ ಅದರಿಂದ ಪಕ್ಷದ ಸಂಘಟನೆಗೆ ಭಾರಿ ಹಾನಿಯಾಗಲಿದೆ. ವರದಿಯಲ್ಲಿ ಯಡಿಯೂರಪ್ಪ ತಪ್ಪಿತಸ್ಥರು ಎಂದು ಹೇಳಿದಲ್ಲಿ ಅವರಿಗೆ ಪಕ್ಷದಲ್ಲಿ ಯಾವುದೇ ಹುದ್ದೆ ನೀಡದೇ ಇರುವುದಕ್ಕೆ ಸೂಕ್ತ ಸಮರ್ಥನೆ ಲಭಿಸಲಿದೆ ಎಂಬುದು ಪಕ್ಷದ ಕೇಂದ್ರ ನಾಯಕರ ಎಣಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಬಹುತೇಕ ಬಿಜೆಪಿ ನಾಯಕರು ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಬದಲಾಯಿಸಲು ಉತ್ಸುಕತೆ ತೋರುತ್ತಿಲ್ಲ. ಆದರೆ, ಮುಂಬರುವ ಚುನಾವಣೆಯ ದೃಷ್ಟಿಯಿಂದ ಯಡಿಯೂರಪ್ಪ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನ ಕಲ್ಪಿಸಲು ಯೋಜಿಸುತ್ತಿದ್ದಾರೆ. ಸದಾನಂದಗೌಡರು ಸೋಮವಾರ ಬೆಂಗಳೂರಿಗೆ ಮರಳುವ ಮುನ್ನ ಬಿಜೆಪಿ ಹಿರಿಯ ನಾಯಕ ಆಡ್ವಾಣಿ ಅವರನ್ನು ಭೇಟಿಯಾಗಿ ಒಂದು ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ.












Click it and Unblock the Notifications