ಹೌದು, ಮೊನ್ನೆ ಭೂಕಂಪಕ್ಕೆ ಬಲಿಯಾದವರೆಷ್ಟು ಮಂದಿ?
ಜಕಾರ್ತ, ಏ.13: ಇಂಡೋನೇಶ್ಯಾದ ಸುಮಾತ್ರ ದ್ವೀಪದಲ್ಲಿ ಬುಧವಾರ ಸಂಭವಿಸಿದ ಪ್ರಬಲ ಭೂಕಂಪದಿಂದ ಸದ್ಯ ಯಾರೂ ಸಾಯಲಿಲ್ಲ ಎಂದು ಸಮಾಧಾನದ ನಿಟ್ಟುಸಿರು ಬಿಟ್ಟವರಷ್ಟೋ. ಆದರೆ ರಿಕ್ಟರ್ ಮಾಪಕದಲ್ಲಿ 8.7ರಷ್ಟಿದ್ದ ಭೂಕಂಪ ಹೆಮ್ಮಾರಿ ಯಾರನ್ನೂ ಬಲಿ ತೆಗೆದುಕೊಳ್ಳದೇ ಇರುತ್ತದಾ? ಹೌದು, ಆ ಭೂಕಂಪವು ಐದು ಮಂದಿಯನ್ನು ಬಲಿತೆಗೆದುಕೊಂಡಿದೆ.
ಸತ್ತವರೆಲ್ಲ ಭೂಕಂಪ ಕೇಂದ್ರೀಕೃತವಾಗಿದ್ದ ಆಚೆ ಪ್ರಾಂತ್ಯದವರು. 8.6 ಮತ್ತು 8.2 ಪ್ರಮಾಣದ ಭೂಕಂಪದಿಂದ ಇಬ್ಬರು ಹೃದಯಾಘಾತದಿಂದ ಹಾಗೂ ಮೂವರು ಆಘಾತದಿಂದಾಗಿ ಸತ್ತಿದ್ದಾರೆ. ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭೂಕಂಪದ ಹಾನಿ ಮತ್ತು ಸಂತ್ರಸ್ತರ ಮಾಹಿತಿಗಳನ್ನು ಸಂಗ್ರಹಿಸುವಾಗ ಐದು ಮಂದಿ ಸತ್ತಿರುವುದು, ಒಬ್ಬ ಗಂಭೀರವಾಗಿ ಗಾಯಗೊಂಡಿರುವುದು ಹಾಗೂ ಆರು ಮಂದಿಗೆ ಚಿಕ್ಕಪುಟ್ಟ ಗಾಯಗಳಾಗಿರುವುದಾಗಿ ತಿಳಿದುಬಂತು ಎಂದು ನ್ಯಾಷನಲ್ ಡಿಸಾಸ್ಟರ್ ಮಿಟಿಗೇಶನ್ ಏಜೆನ್ಸಿಯ ವಕ್ತಾರ ವಾಹುಡಿ ಹೇಳಿದ್ದಾರೆ.
ಭೂಕಂಪದ ಪರಿಣಾಮವಾಗಿ ಜೀವ ಕಳೆದುಕೊಂಡ ಎಲ್ಲ ಐದು ಮಂದಿ ಆಚೆ ಪ್ರಾಂತ್ಯದವರು. ಇಲ್ಲಿಯೇ 2004ರ ಸುನಾಮಿಗೆ 2,00,000 ಜನರು ಪ್ರಾಣ ಕಳೆದುಕೊಂಡಿದ್ದರು. ಭೂಕಂಪ ಸಂಭವಿಸಿದಾಗ ಒಂದು ಮಗು ಗಾಯಗೊಂಡಿದೆ. ಸುಮಾತ್ರ ದ್ವೀಪದ ಜನರು ಇಂದು ಮಾಮೂಲಿಯಂತೆ ನಿತ್ಯ ಕಾಯಕದಲ್ಲಿ ತೊಡಗಿಕೊಂಡಿದ್ದಾರೆಂದು ವಾಹುಡಿ ತಿಳಿಸಿದ್ದಾರೆ.












Click it and Unblock the Notifications