ಕಾಂಗ್ರೆಸ್ ಭಿನ್ನಮತಕ್ಕೆ ಸೋನಿಯಾ ತೇಪೆ
ಚಿಕ್ಕಮಕ್ಕಳಂತೆ ಕಾದಾಡುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಮೇಡಂ ನಿನ್ನೆ ಕಿವಿಹಿಂಡಿ ಕಳಿಸಿದ್ದಾರೆ. ಮುಖ್ಯವಾಗಿ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ನಡುವಣ ಕಂದಕವನ್ನು ಮುಚ್ಚುವಲ್ಲಿ ದಿಲ್ಲಿ ಕಾಂಗ್ರೆಸ್ ಹೈಕಮಾಂಡ್ ಸದ್ಯಕ್ಕೆ ಯಶಸ್ವಿಯಾಗಿದೆ. ಮುಂದಿನ ವಿಧಾನಸಭೆ ಚುನಾವಣೆಗೂ ಮುನ್ನ ಮತ್ತೆ ಯಾವಾಗ ಹೊಗೆಯಾಡುತ್ತದೋ ಆ ಪರಮೇಶ್ವರನೇ ಬಲ್ಲ.
ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಮಧ್ಯೆ ಉಂಟಾಗಿರುವ ವೈಮನಸ್ಸು ತಾರಕಕ್ಕೇರಿರುವುದನ್ನು ಕಂಡ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ಇಬ್ಬರನ್ನು ದಿಲ್ಲಿಗೆ ಕರೆಸಿದ್ದು, ವೈಮನಸ್ಸು, ಪಕ್ಷದ ಕಾರ್ಯಕ್ರಮವನ್ನು ಬಿಟ್ಟು ಮೊದಲು ಬರಪೀಡಿತ ಜನರ ಕಷ್ಟಕ್ಕೆ ಸ್ಪಂದಿಸಿ ಎಂದು ತಾಕೀತು ಮಾಡಿದ್ದಾರೆನ್ನಲಾಗಿದೆ. ರಾಜ್ಯದಲ್ಲಿ ಕಾರ್ಯಕ್ರಮ ರೂಪಿಸುವ ವೇಳೆ ಡಾ.ಜಿ. ಪರಮೇಶ್ವರ್ ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದ ಕಾರಣ ಕಾಂಗ್ರೆಸ್ನೊಳಗೆ ಭಿನ್ನಮತ ಸೃಷ್ಟಿಯಾಗಿತ್ತು.
ರಾಜ್ಯದ 23 ಜಿಲ್ಲೆಗಳು ಬರಗಾಲದಿಂದ ತತ್ತರಿಸಿರುವಾಗ ಚುನಾವಣೆ ಸಿದ್ದತೆ ಹೆಸರಲ್ಲಿ ಜನರ ಮುಂದೆ ಹೋಗುವುದು ಸರಿಯಲ್ಲ. ನಮ್ಮ ಆದ್ಯತೆ 'ಬರ' ಆಗಬೇಕೇ ಹೊರತು ಚುನಾವಣೆಯಲ್ಲ ಎಂದೂ ಸಿದ್ದರಾಮಯ್ಯ ತಮ್ಮ ವಾದ ಮುಂದಿಟ್ಟಿದ್ದರು.
ಹಾಗೆ ನೋಡಿದರೆ ಸಿದ್ರಾಮಣ್ಣ ಕಾಂಗ್ರೆಸ್ಸಿನಲ್ಲಿ ಕಾಲಿಟ್ಟಾಗಿನಿಂದಲೂ ರಾಜ್ಯದಲ್ಲಿನ ಹಿರಿಯರಿಗೆ ಒಲ್ಲದ ಗಂಡನಾಗಿದ್ದಾರೆ. ಅವರೂ ನಮ್ಮ ಯಡಿಯೂರಪ್ಪನವರಂತೆ ಅನೇಕ ಬಾರಿ ಒಳಗೊಳಗೇ ಬಂಡಾಯವೆದ್ದಿದ್ದಾರೆ. ಆದರೆ ಈ ಬಾರಿ ಅದು ತಾರಕಕ್ಕೆ ಹೋಗಲು ಕಾರಣವಾಗಿದ್ದು ಡಾ.ಪರಮೇಶ್ವರ್ ಮತ್ತು ಪಾತಾಳ ಕಚ್ಚಿರುವ ಪಕ್ಷ ಪುಟಿದೇಳುವಂತೆ ಮಾಡಲು ಅವರು ಕೈಗೊಂಡಿರುವ ಹೊಸ ಯೋಜನೆ.